ಎಣ್ಣೆ ಮತ್ತಲ್ಲಿ ಮದುವೆ ದಿನವನ್ನೇ ಮರೆತ ವರ – ನಶೆ ಇಳಿದ ಮೇಲೆ ವಧು ಮನೆಗೆ ಹೋದವನಿಗೆ ಎಂಥಾ ಶಾಕ್?

ಎಣ್ಣೆ ಮತ್ತಲ್ಲಿ ಮದುವೆ ದಿನವನ್ನೇ ಮರೆತ ವರ – ನಶೆ ಇಳಿದ ಮೇಲೆ ವಧು ಮನೆಗೆ ಹೋದವನಿಗೆ ಎಂಥಾ ಶಾಕ್?

ಮದುವೆ ಅಂದ್ರೆ ಸಂಭ್ರಮ. ಮದುವೆ ಅಂದರೆ ಸಡಗರ. ವಾರಗಟ್ಟಲೆ ನಡೆಯುವ ಸಂಪ್ರದಾಯಗಳು, ಬಂಧು ಬಳಗ, ಹೊಸ ಮನೆ, ಹೊಸ ಬಟ್ಟೆ ಹೀಗೆ ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತೆ. ಅದ್ರಲ್ಲೂ ವಧು ವರರ ಪಾಲಿಗೆ ಮದುವೆ ಅನ್ನೋದು ಎರಡು ಮನಸ್ಸುಗಳನ್ನ ಬೆಸೆಯುವ ಬಂಧ. ಹೀಗಾಗಿ ಮದುವೆ ನಿಶ್ಚಯವಾದ ದಿನದಿಂದ ತಾಳಿಕಟ್ಟುವ ಶುಭಗಳಿಗೆಗಾಗಿ ವಧುವರರು ಕಾತುರದಿಂದಲೇ ಕಾಯುತ್ತಾರೆ. ಆದ್ರೆ ಇಲ್ಲೊಬ್ಬ ವರಮಹಾಶಯ ಮದುವೆ ದಿನಾಂಕವನ್ನೇ ಮರೆತು ಎಡವಟ್ಟು ಮಾಡಿಕೊಂಡಿದ್ದಾನೆ.

ಇದನ್ನೂ ಓದಿ : ಮದುವೆಯಾದ ಮೂರೇ ದಿನಕ್ಕೆ ಪತಿ ಎಸ್ಕೇಪ್ –  ಮದುವೆ ಅಲ್ಲ ಶಾರ್ಟ್ ಮೂವಿ ಅಂದ ಭೂಪ  

ಮೊದಲೆಲ್ಲಾ ಮದುವೆ ಅರ್ಧಕ್ಕೆ ನಿಂತರೆ ತಲೆಗೆ ಒಂದೊಂದು ಮಾತನಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಂತೆಯೇ ನಿಜಜೀವನದಲ್ಲೂ ಮದುವೆಗಳು ಕೊನೇ ಗಳಿಗೆಯಲ್ಲಿ ರದ್ದಾಗುತ್ತಿವೆ. ಇದು ಸಾಮಾನ್ಯ ಅನ್ನುವಂತೆಯೂ ಆಗಿದೆ. ವರದಕ್ಷಿಣೆ, ಸಂಪ್ರದಾಯ, ಗಲಾಟೆ, ಭಿನ್ನಾಭಿಪ್ರಾಯ ಹೀಗೆ ಹಲವು ಕಾರಣಗಳಿಗೆ ಮದುವೆಗಳು ಕ್ಯಾನ್ಸಲ್ ಆಗುತ್ತವೆ. ಆದರೆ ಇಲ್ಲಿ ಹಸೆಮಣೆ ಏರಬೇಕಿದ್ದ ವರನೇ ಕಂಠಮಟ್ಟ ಎಣ್ಣೆ ಕುಡಿದು ಮದುವೆ ದಿನವನ್ನೇ ಮರೆತಿದ್ದಾನೆ. ಕಲ್ಯಾಣ ಮಂಟಪದಲ್ಲಿ ವಧು ಹಾಗೂ ವಧುವಿನ ಕಡೆಯವರು, ಸಂಬಂಧಿಕರು ವಿವಾಹಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದರು. ಆದರೆ ವರ ಮಾತ್ರ ಬಂದೇ ಇಲ್ಲ. ಯಾಕಂದ್ರೆ ಎಣ್ಣೆ ಮತ್ತಲ್ಲಿ ಆತ  ಇಂದು ತನ್ನ ಮದುವೆ ಅನ್ನೋದನ್ನೇ ಮರೆತಿದ್ದ.

ಬಿಹಾರದ ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ಇಂಥಾದ್ದೊಂದು ವಿಚಿತ್ರ ಘಟನೆ ನಡೆದಿದೆ. ಕುಡಿತದ ಅಮಲು ಇಳಿದ ಮೇಲೆ ವರ ವಧುವಿನ ಮನೆಗೆ ತೆರಳಿದ್ದಾನೆ. ಆದರೆ ಆತನನ್ನು ಮದುವೆಯಾಗಲು ವಧು ನಿರಾಕರಿಸಿದ್ದಾಳೆ. ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಂತಹ ವ್ಯಕ್ತಿಯೊಂದಿಗೆ ಜೀವನ ಪರ್ಯಂತ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ಎಂದಿದ್ದಾಳೆ. ಈಗಾಗಲೇ ಆತ ದೊಡ್ಡ ಕುಡುಕ ಎಂಬ ಮಾಹಿತಿಯಿತ್ತು. ಆದರೆ ವಿವಾಹದ ದಿನವೇ ಮತ್ತೆ ಕುಡಿದು ಕಲ್ಯಾಣ ಮಂಟಪಕ್ಕೆ ಬಾರದ ಹಿನ್ನೆಲೆ ತಾನು ಆತನನ್ನು ವಿವಾಹವಾಗಲ್ಲ ಎಂದಿದ್ದಾಳೆ. ಮಾತ್ರವಲ್ಲ, ವಧುವಿನ ಮನೆಯವರು ಮದುವೆಯ ವ್ಯವಸ್ಥೆಗೆ ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವಂತೆ ವರನ ಕುಟುಂಬಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ವರನ ಕಡೆಯವರ ಕೆಲವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಸಮಸ್ಯೆಯನ್ನು ಇತ್ಯರ್ಥಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

suddiyaana