ಹುಲಿ ಉಗುರು ಬಿಗಿ ಉರುಳು – ವನ್ಯಜೀವಿ ವಸ್ತುಗಳನ್ನು ಇಲಾಖೆಗೆ ಮರಳಿಸಲು ಕಾಲಾವಕಾಶ ನೀಡಿದ ಸರ್ಕಾರ?

ಹುಲಿ ಉಗುರು ಬಿಗಿ ಉರುಳು – ವನ್ಯಜೀವಿ ವಸ್ತುಗಳನ್ನು ಇಲಾಖೆಗೆ ಮರಳಿಸಲು ಕಾಲಾವಕಾಶ ನೀಡಿದ ಸರ್ಕಾರ?

ಕರ್ನಾಟಕದಲ್ಲಿ ಹುಲಿ ಉಗುರು ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅರೆಸ್ಟ್‌ ಆದ ಬೆನ್ನಲ್ಲೇ ರಾಜ್ಯದ ಪ್ರಮುಖ ವ್ಯಕ್ತಿಗಳ ಮೇಲೂ ಆರೋಪ ಕೇಳಿಬರುತ್ತಿದೆ. ಕೆಲವರ ಮೇಲೆ ಕೇಸ್‌ ದಾಖಲಾಗಿದೆ. ಇದೀಗ ಹುಲಿ ಉಗುರುಗಳ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯ ಸರ್ಕಾರ ಮುಂದಾಗಿದೆ.  ಗೊತ್ತೋ ಗೊತ್ತಿಲ್ಲದೆಯೋ ಮನೆಯಲ್ಲಿ ವನ್ಯಜೀವಿ ವಸ್ತುಗಳಿದ್ದರೆ ಅವುಗಳನ್ನು ಮರಳಿಸಲು ಸರ್ಕಾರ ಮತ್ತೊಂದು ಅವಕಾಶ ಕಲ್ಪಿಸಿಕೊಡಲಿದೆ. ವನ್ಯ ಜೀವಿಗಳ ವಸ್ತುಗಳನ್ನು ಅರಣ್ಯ ಇಲಾಖೆಗೆ ಮರಳಿಸಲು 2 ತಿಂಗಳ ಕಾಲಾವಕಾಶ ನೀಡಲು ರಾಜ್ಯದ ಸರಕಾರ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.

ಹೌದು ರಾಜ್ಯದ ಹಲವು ಮನೆಗಳಲ್ಲಿ ಗೊತ್ತೋ ಗೊತ್ತಿಲ್ಲದೆಯೋ ವನ್ಯಜೀವಿ ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ. ಅಕ್ರಮವಾಗಿ ವನ್ಯಜೀವಿಗಳಿಂದ ಉತ್ಪಾದಿತ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವವರಿಗೆ ಕೊನೆಯ ಅವಕಾಶ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರಾಣಿಗಳ ಚರ್ಮ, ಉಗುರು, ಕೊಂಬು ಸೇರಿದಂತೆ ವನ್ಯಜೀವಿಗೆ ಸಂಬಂಧಿಸಿ ಯಾವುದೇ ವಸ್ತುಗಳು ಮನೆಯಲ್ಲಿದ್ದರೆ ವಸ್ತು ವಾಪಸ್ ಕೊಡಲು 2 ತಿಂಗಳ ಕಾಲಾವಕಾಶ ನೀಡಲು ಚಿಂತನೆ ನಡೆದಿದೆ. ಇದರ ಬಗ್ಗೆ ಅಧಿಕೃತ ಆದೇಶ ಇನ್ನಷ್ಟೇ ಹೊರ ಬರಬೇಕಿದೆ.

ಇದನ್ನೂ ಓದಿ: ಅರಣ್ಯಾಧಿಕಾರಿಗಳಿಗೂ ಹುಲಿ ಉಗುರಿನ ಕಂಟಕ –  ಉಪ ವಲಯ ಅರಣ್ಯಾಧಿಕಾರಿ ಅಮಾನತು

ಈ ಬಗ್ಗೆ ಅಭಿಪ್ರಾಯ ನೀಡಲು ಅಡ್ವೋಕೆಟ್ ಜನರಲ್ ಅವರಿಗೆ ಸರ್ಕಾರದಿಂದ ಪತ್ರ ಬರೆಯಲಾಗಿದೆ. ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಈ ಸಂಬಂಧ ಪತ್ರ ಬರೆದಿದ್ದಾರೆ. ಕಾಲವಕಾಶ ನೀಡುವ ಸಂಬಂಧ ಎಜಿ ಅಭಿಪ್ರಾಯದ ಬಳಿಕ ತಿರ್ಮಾನ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ 2 ತಿಂಗಳ ಕಾಲಾವಕಾಶದೊಳಗೆ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸದಿದ್ರೆ ಮೊಕದ್ದಮೆ ದಾಖಲಾಗಲಿದೆ. ಕಾಲಾವಕಾಶ ನೀಡಲು ಸಿಎಂ ಸಿದ್ದರಾಮಯ್ಯ ಕೂಡ ಸಹಮತ ವ್ಯಕ್ತಪಡಿಸಿದ್ದು, ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸಲು ಅರಣ್ಯ  ಇಲಾಖೆ ತಿರ್ಮಾನ ತೆಗೆದುಕೊಂಡಿದೆ.

ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ. ಹುಲಿ ಉಗುರು, ವನ್ಯಜೀವಿ ಅಂಗಾಂಗ ವಾಪಸ್ ಮಾಡಲು ಕಾಲಾವಕಾಶ ಕೊಡುವ ತೀರ್ಮಾನ ಆಗಿದೆ. ಮುಖ್ಯಮಂತ್ರಿಗಳ ಜೊತೆಗೂ ಈ ಬಗ್ಗೆ ಚರ್ಚೆ ಆಗಿದೆ. ಅಡ್ಕೊಕೇಟ್ ಜನರಲ್ ಗೆ ಕಾನೂನಿನ ಅಭಿಪ್ರಾಯ ಕೇಳಲಾಗಿದೆ ಎಂದು ಹೇಳಿದ್ದಾರೆ.

ವರ್ತೂರು ಸಂತೋಷ್ ಪ್ರಕರಣದಲ್ಲಿ ನಮಗೆ ವಿಚಾರಣೆಗೆ ಸಹಕಾರ ಕೊಟ್ಟಿಲ್ಲ. ನಮ್ಮ ಅಧಿಕಾರಿಗಳು ಹೋದಾಗ ಆರೇಳು ಗಂಟೆ ಕಾದರು ಸಹಕಾರ ಕೊಡಲಿಲ್ಲ. ಹೀಗಾಗಿ ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ. ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ವಿರುದ್ಧ ದೂರು ಬಂದಾಗ ನೋಟಿಸ್ ಕೊಟ್ಟು ಸರ್ಚ್ ಮಾಡಿದ್ದೇವೆ. ಈ ವಿಚಾರದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಸೆಲೆಬ್ರಿಟಿಗಳು ಧರಿಸಿದ್ದು ನಕಲಿ ಎಂದು ಅಧಿಕಾರಿಗಳು  ಹೇಳಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲವನ್ನೂ ಎಫ್‌ಎಸ್ಎಲ್ ಗೆ ಕಳಿಸಿ ದೃಢಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

Shwetha M