ದೃಶ್ಯ ಸಿನಿಮಾ ರೀತಿಯೇ ನಡೆಯಿತು ಯುವಕನ ಕೊಲೆ – ಮಗಳಿಗಾಗಿ ಯುವಕನ ಕೊಂದ ಅಪ್ಪ ಕೊನೆಗೂ ನೇಣಿಗೆ ಶರಣು

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ದೃಶ್ಯ ಸಿನಿಮಾ ನೋಡಿರುತ್ತೀರಿ. ಇದರಲ್ಲಿ ಮಗಳಿಗೆ ಕಿರುಕುಳ ಕೊಟ್ಟ ಯುವಕನನ್ನು ಕೊಲೆ ಮಾಡಲಾಗುತ್ತದೆ. ನಂತರ ಇಡೀ ಕುಟುಂಬ ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳುತ್ತದೆ. ರಾಜ್ಯದಲ್ಲೂ ಇಂಥಾದ್ದೊಂದು ರಿಯಲ್ ಸ್ಟೋರಿ ನಡೆದಿದೆ. ಮಗಳಿಗೆ ಕಿರುಕುಳ ಕೊಟ್ಟ ಕಿರಾತಕನನ್ನು ತಂದೆ ಕೊಲೆ ಮಾಡಿದರು. ಆದರೆ, ಸಿನಿಮಾ ಸ್ಟೋರಿಯ ಹಾಗೆ ತಪ್ಪಿಸಿಕೊಳ್ಳಲಾಗದೇ ದುರಂತ ಅಂತ್ಯಕಂಡಿದ್ದಾರೆ.

ಇದನ್ನೂ ಓದಿ: ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ನಿಧನ

ಹುಬ್ಬಳ್ಳಿಯಲ್ಲಿ ದೃಶ್ಯ ಸಿನಿಮಾದ ಮಾದರಿಯಲ್ಲಿಯೇ ಒಂದು ಕೊಲೆ ನಡೆದಿದೆ. ಆದರೆ, ಸಿನಿಮಾನೇ ಬೇರೆ, ನಿಜ ಜೀವನವೇ ಬೇರೆ ಎಂಬುದು ಕೂಡಾ ಇಲ್ಲಿ ಸಾಬೀತಾಗಿದೆ. ಹುಬ್ಬಳ್ಳಿಯ ಸಿಲ್ವರ್ ಟೌನ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮೌಲಾಲಿ ಎನ್ನುವ ಯುವಕನ ಕೊಲೆಯಾಗಿತ್ತು. ನಿರ್ಮಾಣ ಹಂತದ ಕಟ್ಟಡದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ನಡೆದಿತ್ತು. ಸ್ಥಳ ಪರಿಶೀಲನೆ ಮಾಡಿದ ಪೊಲೀಸರಿಗೆ ಕಟ್ಟಡದಲ್ಲೇ ವಾಸವಾಗಿದ್ದವರೇ ಕೊಲೆ ಮಾಡಿದ್ದಾರೆಂಬ ಅನುಮಾನ ಬಂದಿದೆ. ಆಗ ನಿರ್ಮಾಣ ಹಂತದ ಕಟ್ಟಡದಲ್ಲಿ ಶೆಡ್ ನಿರ್ಮಿಸಿಕೊಂಡು ಕುಟುಂಬ ಸಮೇತವಾಗಿ ವಾಸವಾಗಿದ್ದ ವಾಚ್‌ಮನ್ ಕೊಲೆ ಮಾಡಿದ್ದಾನೆ ಎಂಬ ಸುಳಿವು ಸಿಕ್ಕಿದೆ. ಪೊಲೀಸರಿಗ ಸುಳಿವು ಸಿಗಬಾರದೆಂದು ಎಷ್ಟೇ ಸಾಕ್ಷ್ಯ ನಾಶ ಮಾಡಲು ಮುಂದಾದರೂ ತನ್ನ ಸುಳಿವು ಸಿಕ್ಕಿದ್ದರಿಂದ ಕೊಲೆಯ ಆರೋಪಿ ಅಲ್ಲಿಂದ ಪರಾರಿ ಆಗಿದ್ದಾನೆ. ವಾಚ್‌ಮನ್ ಕೆಲಸ ಮಾಡಿಕೊಂಡು ಇಡೀ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಜೈಲಿಗೆ ಹೋದರೆ ಸಮಸ್ಯೆ ಆಗುತ್ತದೆ ಎಂದು ಕೊನೆಗೂ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರ ಕಣ್ತಪ್ಪಿಸಿಕೊಂಡು ಹೋಗಿ ಹುಬ್ಬಳ್ಳಿಯ ಅಪೂರ್ವ ನಗರದ ಪ್ರಮುಖ ರಸ್ತೆಯಲ್ಲಿರುವ ಸಣ್ಣ ಮರವೊಂದಕ್ಕೆ ತನ್ನದೇ ಟವೆಲ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಿವಾಸಿಯಾದ ಪರಸಪ್ಪ, ಕುಟುಂಬದ ಜೊತೆಗೆ ನಿರ್ಮಾಣ ಹಂತದಲ್ಲಿ ಕಟ್ಟಡದಲ್ಲಿ ವಾಸವಿದ್ದನು. ಪರಸಪ್ಪನ ಮಗಳ ಜೊತೆಗೆ ಕೊಲೆಯಾದ ವ್ಯಕ್ತಿ ಮೌಲಾಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇದು ಸರಿಯಲ್ಲ ಎಂದು ಪರಸಪ್ಪ ಎಷ್ಟೇ ಹೇಳಿದರೂ ಮೌಲಾಲಿ ಕೇಳಿರಲಿಲ್ಲ. ಸಿಟ್ಟಾದ ಪರಸಪ್ಪ, ಬುಧವಾರ ಸಂಜೆ ವೇಳೆ ಮಗಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿ ಆಗಿದ್ದನು. ಸಾಕ್ಷಿ ಸಿಗದಂತೆಯೂ ನೋಡಿಕೊಂಡಿದ್ದಾನೆ. ಕೊಲೆಯಾದ ಮೃತ ವ್ಯಕ್ತಿ ಮೌಲಾಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ತಾಲೂಕಿನ ಮರಗಡಿ ನಿವಾಸಿಯಾಗಿದ್ದಾನೆ. ಗಾರೆ ಕೆಲಸದ ನಿಮಿತ್ತವಾಗಿ ಹುಬ್ಬಳ್ಳಿಗೆ ಬಂದಿದ್ದನು. ಇನ್ನು ಕೊಲೆ ಆರೋಪಿಯನ್ನು ಪತ್ತೆ ಮಾಡುತ್ತಿದ್ದ ಪೊಲೀಸರಿಗೆ ಆರೋಪಿ ಪರಸಪ್ಪ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

Sulekha