ಮಗಳ ಪ್ರೀತಿ ವಿಚಾರ ಗೊತ್ತಾಗಿ ಸಿಟ್ಟಿಗೆದ್ದ ಅಪ್ಪ – ಕೋಳಿ ಕತ್ತರಿಸುವ ಕತ್ತಿಯಿಂದ ಮಗಳ ಕುತ್ತಿಗೆ ಸೀಳಿ ಕೊಂದ ತಂದೆ

ಮಗಳ ಪ್ರೀತಿ ವಿಚಾರ ಗೊತ್ತಾಗಿ ಸಿಟ್ಟಿಗೆದ್ದ ಅಪ್ಪ – ಕೋಳಿ ಕತ್ತರಿಸುವ ಕತ್ತಿಯಿಂದ ಮಗಳ ಕುತ್ತಿಗೆ ಸೀಳಿ ಕೊಂದ ತಂದೆ

ಬೆಂಗಳೂರೇ ಬೆಚ್ಚಿಬೀಳುವಂತಹ ಬರ್ಬರ ಕೊಲೆಯೊಂದು ನಡೆದಿದೆ. ಹೆತ್ತ ಮಗಳನ್ನೇ ತಂದೆಯೊಬ್ಬರು ಕೋಳಿ ಕೊಯ್ಯುವ ಕತ್ತಿಯಿಂದಲೇ ಹೆತ್ತ ಮಗಳ ಕತ್ತನ್ನೇ ಸೀಳಿದ್ದಾನೆ ತಂದೆ. ಒಬ್ಬ ಮಗಳು ಪ್ರೇಮಿಗಾಗಿ ಸಾಂತ್ವನ ಕೇಂದ್ರದಲ್ಲಿದ್ದಳು. ಇನ್ನೊಬ್ಬ ಮಗಳು ಪ್ರೀತಿಯಲ್ಲಿ ಬಿದ್ದಿದ್ದಳು. ಹೀಗಾಗಿ ತಂದೆ ಮರ್ಯಾದೆಗೆ ಹೆದರಿ ಮಗಳನ್ನೇ ಬಲಿಪಡೆದಿದ್ದಾನೆ.

ಇದನ್ನೂ ಓದಿ: ನಿನ್ನ ಬಳಿ ಸಾಲ ತಗೊಳಲ್ಲ ಎಂದ ಮಹಿಳೆ.. – ಚೂರಿಯಿಂದ ತಿವಿದು ತಾನೂ ವಿಷ ಕುಡಿದ ಪಾಪಿ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಮರ್ಯಾದಾ ಹತ್ಯೆ ನಡೆದಿದೆ. ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದ ನಿವಾಸಿ ಮಂಜುನಾಥ್ ಗೆ ಇಬ್ಬರು ಹೆಣ್ಣುಮಕ್ಕಳು. ಕಿರಿಯ ಮಗಳು ಒಬ್ಬನನ್ನು ಪ್ರೀತಿಸಿದ್ದಳು. ಆತನನ್ನು ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಪೊಲೀಸ್ ಠಾಣೆಯಲ್ಲಿ ಅಪ್ಪನ ಎದುರೇ ಪ್ರಿಯತಮನ ಜೊತೆ ಹೋಗುವಾದಾಗಿ ಹೇಳಿದ ಹುಡುಗಿಯನ್ನು ಪೊಲೀಸರು ಸಾಂತ್ವಾನ ಕೇಂದ್ರದಲ್ಲಿ ಬಿಟ್ಟಿದ್ದರು. ಈ ಘಟನೆ ಮಂಗಳವಾರ ರಾತ್ರಿ ನಡೆದಿತ್ತು. ಕಿರಿಮಗಳು ತನ್ನ ಮಾತು ಕೇಳದೇ ಪ್ರೇಮಿಗಾಗಿ ಹೋಗಿರುವುದು ತಂದೆ ಮಂಜುನಾಥ್‌ಗೆ ಸಹಿಸಲಾಗದ ನೋವಾಗಿತ್ತು. ಇದೇ ನೋವಲ್ಲಿ ಮನೆಗೆ ಬಂದ ಮಂಜುನಾಥ್‌ಗೆ ಮತ್ತೊಂದು ಶಾಕ್ ಕಾದಿತ್ತು. ಹಿರಿಯ ಮಗಳು ಕವನ ಕೂಡಾ ಬೇರೊಬ್ಬ ಯುವಕನನ್ನು ಪ್ರೀತಿ ಮಾಡುತ್ತಿರುವ ವಿಚಾರ ಗೊತ್ತಾಗಿತ್ತು. ಪ್ರೀತಿ ವಿಚಾರದಲ್ಲಿ ಚಿಕ್ಕಮಗಳು ಮರ್ಯಾದೆ ತೆಗೆದಳು. ಈಗ ದೊಡ್ಡ ಮಗಳು ಕೂಡಾ ಬೇರೊಬ್ಬ ಯುವಕನನ್ನು ಪ್ರೀತಿ ಮಾಡುತ್ತಿರುವುದು ಮಂಜುನಾಥ್‌ಗೆ ಸಹಿಸಲು ಸಾಧ್ಯವಾಗಲೇ ಇಲ್ಲ. ಇವಳು ಕೂಡಾ ತನ್ನ ಮರ್ಯಾದೆ ತೆಗೆಯುತ್ತಾಳೆ ಎಂದು ರೊಚ್ಚಿಗೆದ್ದಿದ್ದಾನೆ. ಚಿಕನ್ ಅಂಗಡಿ ಇಟ್ಟುಕೊಂಡಿದ್ದರಿಂದ ಮಂಜುನಾಥ್ ಬಳಿ ಕೋಳಿ ಕತ್ತರಿಸುವ ಕತ್ತಿ ಕೂಡಾ ಇತ್ತು. ರಾತ್ರಿವೇಳೆ ತನ್ನ 20 ವರ್ಷದ ಮಗಳು ಕವನಾ ನಿದ್ದೆಗೆ ಜಾರಿದ್ದೇ ತಡ, ಮಂಜುನಾಥ್ ಸೀದಾ ಹೆತ್ತ ಮಗಳ ಕತ್ತನ್ನೇ ಕೋಳಿ ಕತ್ತರಿಸುವ ಕತ್ತಿಯಿಂದ ಸೀಳಿಬಿಟ್ಟಿದ್ದಾನೆ. ರಕ್ತದ ಮಡುವಿನಲ್ಲಿಯೇ ಮಗಳು ಕವನಾ ಪ್ರಾಣ ಬಿಟ್ಟಿದ್ದಾಳೆ.

ತನ್ನ ಮಗಳನ್ನು ಹತ್ಯೆಗೈದ ಬಳಿಕ ಆರೋಪಿ ಮಂಜುನಾಥ್ ವಿಶ್ವನಾಥಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

Sulekha