ಇಬ್ಬರನ್ನು ಬಲಿ ಪಡೆದ ಕಾಡಾನೆ ಕೊನೆಗೂ ಸೆರೆ – ಕೋಪದ ಭರದಲ್ಲಿ ಗುದ್ದಿದ ಗಜರಾಜನ ದಂತವೇ ಕಟ್..!

ಇಬ್ಬರನ್ನು ಬಲಿ ಪಡೆದ ಕಾಡಾನೆ ಕೊನೆಗೂ ಸೆರೆ – ಕೋಪದ ಭರದಲ್ಲಿ ಗುದ್ದಿದ ಗಜರಾಜನ ದಂತವೇ ಕಟ್..!

ಐದು ದಿನಗಳ ಅಂತರದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಕೊನೆಗೂ ಸೆರೆ ಸಿಕ್ಕಿದೆ. ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಪಾಪ.. ಸಿಕ್ಕಿಬಿದ್ದ 40 ವರ್ಷದ ಗಂಡಾನೆಯನ್ನು ಲಾರಿಗೆ ಹತ್ತಿಸುವ ವೇಳೆ ದಂತವೇ ಮುರಿದು ಹೋಗಿದೆ.

ಇದನ್ನೂ ಓದಿ:  ಅಕ್ಕಿ ಆಸೆಗೆ ಜನಗಳ ಜೀವ ತೆಗೆಯುತ್ತಿದ್ದ ಕಳ್ಳಾನೆ ಸೆರೆ – ತಯಾರಾಗುತ್ತಿದೆ ‘ಅರಿಕೊಂಬನ್’ ಅಟ್ಟಹಾಸದ ಸಿನಿಮಾ

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಬಳಿಯ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸಾಕಾನೆಗಳಾದ ಅಭಿಮನ್ಯು, ಅರ್ಜುನ, ಭೀಮ, ಶ್ರೀಕಂಠ, ಮಹೇಂದ್ರ ಸಹಾಯದಿಂದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಗುರುವಾರ ಬೆಳಗ್ಗೆ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ಪತ್ತೆಯಾಗಿತ್ತು. ಹೀಗಾಗಿ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಯಿತು. ಆನಂತರ ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನ ಕ್ರೇನ್ ಸಹಾಯದಿಂದ ಲಾರಿಗೆ ಹತ್ತಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಾಗಿದ್ರು. ಆದರೆ ಈ ವೇಳೆ ಆನೆ ಸಾಕಷ್ಟು ವಿರೋಧ ವ್ಯಕ್ತಪಡಿಸಿತ್ತು. ಕೋಪಗೊಂಡ ಆನೆ ಸಿಟ್ಟಿನಲ್ಲಿ ಕ್ರೇನ್‌ಗೆ ಗುದ್ದಿತ್ತು. ಇದರಿಂದ ಆನೆಯ ದಂತವೇ ಮುರಿದು ಬಿದ್ದಿತ್ತು. ಆದರೂ ಸಹ ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನ ಲಾರಿಗೆ ಹತ್ತಿಸಲಾಯಿತು.

ಈಗ ಸೆರೆಸಿಕ್ಕ ಕಾಡಾನೆ ದಾಳಿಗೆ ಐದು ದಿನಗಳ ಅಂತರದಲ್ಲಿ ಇಬ್ಬರು ಸಾವನ್ನಪ್ಪಿದರು. ಮೇ 30ರಂದು ಕನಕಪುರ ತಾಲೂಕಿನ ಹೊಸಕಬ್ಬಾಳು ಗ್ರಾಮದ ಬಳಿ ಜಮೀನಿಗೆ ತೆರಳುತ್ತಿದ್ದ ಕಬ್ಬಾಳು ಗ್ರಾಮದ ಕಾಳಯ್ಯ(60) ಎಂಬಾತ ಬಲಿಯಾಗಿದ್ದರು. ಜೂನ್ 3ರಂದು ಚನ್ನಪಟ್ಟಣ ತಾಲೂಕಿನ ವಿರೂಪಸಂದ್ರ ಗ್ರಾಮದ ಬಳಿ ಮಾವಿನ ತೋಟ ಕಾವಲು ಕಾಯುತ್ತಿದ್ದ, ಕನಕಪುರ ಮೂಲದ ವೀರಭದ್ರಯ್ಯ(56) ಎಂಬವರನ್ನು ಕಾಡಾನೆ ಬಲಿ ಪಡೆದಿತ್ತು.

suddiyaana