2 ವರ್ಷ, 2 ಸಲ ಹೃದಯ ಛಿದ್ರ – ನನಸಾಗದ ರೋಹಿತ್ ಕನಸು!

2 ವರ್ಷ, 2 ಸಲ ಹೃದಯ ಛಿದ್ರ – ನನಸಾಗದ ರೋಹಿತ್ ಕನಸು!

ರೋಹಿತ್ ಶರ್ಮಾ. ಟೀಂ ಇಂಡಿಯಾ ಕಂಡ ಶ್ರೇಷ್ಠ ಆಟಗಾರ. ಇದೀಗ ಟಿ-20 ವಿಶ್ವಕಪ್ ಯುದ್ಧ ಗೆಲ್ಲೋಕೆ ತನ್ನ ಸೈನ್ಯದೊಂದಿಗೆ ಅಮೆರಿಕದಲ್ಲಿ ಶಸ್ತ್ರಾಭ್ಯಾಸ ನಡೆಸ್ತಿದ್ದಾರೆ. ಆದ್ರೆ ರೋಹಿತ್ ಶರ್ಮಾ ಎಷ್ಟೇ ಎಫರ್ಟ್ ಹಾಕ್ತಿದ್ರೂ ಆ 2 ವಿಚಾರದಲ್ಲಿ ಮಾತ್ರ ನತದೃಷ್ಟ ನಾಯಕ. 2 ವರ್ಷ, 2 ಸಲ ಹೃದಯ ಛಿದ್ರವಾಗಿದೆ. ಜೀವನದ ಅತಿದೊಡ್ಡ ಕನಸನ್ನು ನನಸು ಮಾಡಿಕೊಳ್ಳಲು ಹೊರಟ ರೋಹಿತ್​ ಶರ್ಮಾ 2 ಸಲ ನಿರಾಸೆ ಅನುಭವಿಸಿದ್ದಾರೆ. ಆದ್ರೀಗ ಮೂರನೇ ಸಲನಾದ್ರೂ ಕನಸು ನನಸು ಮಾಡಿಕೊಳ್ಳೋಕೆ ಪಣತೊಟ್ಟಿದ್ದಾರೆ. ಚುಟುಕು ವಿಶ್ವಕಪ್​​ ಸಮರಕ್ಕೆ ಕೌಂಟ್​ಡೌನ್ ಶುರುವಾಗಿದೆ  ಪ್ರತಿಷ್ಟಿತ ಟ್ರೋಫಿಗೆ ಮುತ್ತಿಕ್ಕಲು ವಿಶ್ವ ಶ್ರೇಷ್ಟ ತಂಡಗಳ ನಡುವೆ ಪೈಪೋಟಿ ಜೋರಾಗಿದೆ. ಇದ್ರ ನಡುವೆ ಪ್ರಾಕ್ಟೀಸ್ ಕೂಡ ಭರ್ಜರಿಯಾಗೇ ನಡೀತಿದೆ. ಆದ್ರೆ ಟೀಂ ಇಂಡಿಯಾದ ಎಲ್ಲಾ ಆಟಗಾರರಿಗಿಂತ ರೋಹಿತ್ ಶರ್ಮಾಗೆ ಈ ಟೂರ್ನಿ ತುಂಬಾನೇ ಸ್ಪೆಷಲ್ ಮತ್ತು ಇಂಪಾರ್ಟೆಂಟ್. ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಭವಾನಿ ರೇವಣ್ಣಗೆ ಬಂಧನದ ಭೀತಿ – ಒಂದೂವರೆ ಕೋಟಿ ಕಾರಿನ ಒಡತಿಗೆ 15 ಲಕ್ಷದ ಪೊಲೀಸ್ ಜೀಪ್‌ ಫಿಕ್ಸಾ?

ನನಸಾಗದ ರೋಹಿತ್ ಕನಸು! 

ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಸಾರಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಸಮರ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಪಾಲಿಗೆ ಸಿಕ್ಕಾಪಟ್ಟೆ ಸ್ಪೆಷಲ್. ಸತತವಾಗಿ 9ನೇ ಟಿ20 ವಿಶ್ವಕಪ್​ ಟೂರ್ನಿಯನ್ನಾಡಲು ರೋಹಿತ್​ ಶರ್ಮಾ ಸಜ್ಜಾಗಿದ್ದಾರೆ. 2007ರ ಚೊಚ್ಚಲ ಟಿ20 ವಿಶ್ವಕಪ್​ ಟೂರ್ನಿಯಿಂದ ಹಿಡಿದು ಈವರೆಗೆ ಒಟ್ಟಾರೆ 8 ಟಿ20 ಟೂರ್ನಿಗಳು ನಡೆದಿವೆ. ಈ ಎಲ್ಲಾ ಟೂರ್ನಿಗಳಲ್ಲಿ ಆಡಿದ ಹೆಗ್ಗಳಿಕೆ ರೋಹಿತ್​ ಶರ್ಮಾರದ್ದು. ಚುಟುಕು ವಿಶ್ವಕಪ್​ ಟೂರ್ನಿಯಲ್ಲಿ ಉತ್ತಮ ರೆಕಾರ್ಡ್​ ಹೊಂದಿರೋ ರೋಹಿತ್​, ಈ ಬಾರಿ ರನ್​ ಗಡಿ ದಾಟಿದ ಸಾಧನೆ ಮಾಡಲು ಕಾತರರಾಗಿದ್ದಾರೆ.

ಈ ಬಾರಿ 36 ರನ್​ಗಳಿಸಿದ್ರೆ, ಟಿ20 ವಿಶ್ವಕಪ್​​ ಇತಿಹಾಸದಲ್ಲೇ ಸಾವಿರ ರನ್​ಗಳಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಹೆಚ್ಚು ರನ್​ಗಳಿಸಿದ ಆಟಗಾರರ ಪಟ್ಟಿಯಲ್ಲಿ 4ನೇ ಬ್ಯಾಟ್ಸ್​ಮನ್​ ಆಗಿರೋ ರೋಹಿತ್53 ರನ್​ಗಳಿಸಿದ್ರೆ, ಕ್ರಿಸ್​ ಗೇಲ್​, ಮಾಹೇಲ ಜಯವರ್ಧನೆಯನ್ನ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿಯಲಿದ್ದಾರೆ. T20 ವಿಶ್ವಕಪ್​ ಟೂರ್ನಿಯಲ್ಲಿ ಈವರೆಗೆ 36 ಪಂದ್ಯಗಳನ್ನಾಡಿರುವ ರೋಹಿತ್​ ಶರ್ಮಾ, 34.39ರ ಸರಾಸರಿಯಲ್ಲಿ 963 ರನ್​​ಗಳಿಸಿದ್ದಾರೆ. 8 ಬಾರಿ ಅರ್ಧಶತಕದ ಗಡಿದಾಟಿರುವ ರೋಹಿತ್​ 127.38ರ ಸ್ಟ್ರೈಕ್​ರೇಟ್​ ಹೊಂದಿದ್ದಾರೆ. ಚೊಚ್ಚಲ ಟಿ20 ಆರಂಭವಾದಾಗ ಸಾಮಾನ್ಯ ಬ್ಯಾಟ್ಸ್​ಮನ್​ ಆಗಿ ಕಣಕ್ಕಿಳಿದಿದ್ದ ರೋಹಿತ್​ ಶರ್ಮಾ ಇದೀಗ ಟೀಮ್​ ಇಂಡಿಯಾ ನಾಯಕನಾಗಿದ್ದಾರೆ. ನಾಯಕನಾಗಿ 2ನೇ ಬಾರಿ ತಂಡವನ್ನ ಮುನ್ನಡೆಸಲು ಸಜ್ಜಾಗಿದ್ದಾರೆ.

ಮೊದಲ ಬಾರಿ 2022ರ ಟಿ20 ​ವಿಶ್ವಕಪ್​​ನಲ್ಲಿ ರೋಹಿತ್​​​ ತಂಡವನ್ನ ಮುನ್ನಡೆಸಿದ್ರು. ಆದ್ರೆ ದುರಾದೃಷ್ಟ ಅಂದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯಲ್ಲಿ ಚನ್ನಾಗೇ ಆಡಿದ ಟೀಮ್​ ಇಂಡಿಯಾ, ಸೆಮಿಫೈನಲ್​ನಲ್ಲಿ ಮುಗ್ಗರಿಸಿಬಿಡ್ತು. ಬರಿಗೈಯಲ್ಲಿ ಭಾರತಕ್ಕೆ ಮುಂಬೈಕರ್​​ ವಾಪಾಸ್ಸಾಗಿದ್ರು. ಹಾಗೇ 2023ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್​ನಲ್ಲೂ ರೋಹಿತ್​ ಟೀಮ್​ ಇಂಡಿಯಾವನ್ನ ಮುನ್ನಡೆಸಿದ್ರು. ಅದ್ಭುತ ಆಟವನ್ನಾಡಿದ ಟೀಮ್​ ಇಂಡಿಯಾ ಫೈನಲ್​ಗೆ ಸೋಲಿಲ್ಲದ ಸರದಾರನಂತೆ ಎಂಟ್ರಿ ಕೊಟ್ಟಿತ್ತು. ಆದ್ರೆ ಫೈನಲ್​ನಲ್ಲಿ ಮತ್ತದೇ ನಿರಾಸೆ. ಆಸ್ಟ್ರೇಲಿಯಾ ಎದುರಿನ ಸೋಲಿನೊಂದಿಗೆ ಕಪ್​ ಗೆಲ್ಲೋ ಕನಸು ನುಚ್ಚು ನೂರಾಯ್ತು.

ರೋಹಿತ್ ಶರ್ಮಾ ಎರಡೆರಡು ಸಲ ಕೈ ಸುಟ್ಟುಕೊಂಡಿದ್ದಾರೆ. ನಾಯಕನಾದ ಬಳಿಕ 2 ವರ್ಷಗಳಲ್ಲಿ 2 ವಿಶ್ವಕಪ್​ ಟೂರ್ನಿಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಆದ್ರೆ, ಟ್ರೋಫಿ ಗೆಲ್ಲೋ ಕನಸು ಕನಸಾಗೇ ಉಳಿದಿದೆ. ಇದೀಗ ಮತ್ತೊಂದು ಮಹತ್ವದ ಟೂರ್ನಿಯಲ್ಲಿ ತಂಡವನ್ನ ಮುನ್ನಡೆಸಲು ರೋಹಿತ್​ ರೆಡಿಯಾಗಿದ್ದಾರೆ. ಮೂರನೇ ಸಲನಾದ್ರೂ ಕಪ್ ಗೆಲ್ಲೋ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಈ ಸಲ ಭಾರತ ಗೆಲುವಿನ ಮೂಲಕ ಐಸಿಸಿ ಟ್ರೋಫಿ ಭಾರತದ ಪಾಲಾಗಲಿ, ರೋಹಿತ್ ಶರ್ಮಾ ಕನಸು ನನಸಾಗಲಿ ಅಂತಾ ಕೋಟ್ಯಂತರ ಭಾರತೀಯರು ಹಾರೈಸುತ್ತಿದ್ದಾರೆ. ಯಾಕಂದ್ರೆ ಮುಂದಿನ ಐಸಿಸಿ ಟೂರ್ನಿಯಲ್ಲಿ ರೋಹಿತ್ ಆಡೋದು ಅನುಮಾನ.

Shwetha M

Leave a Reply

Your email address will not be published. Required fields are marked *