ಮೊದಲ ಟೆಸ್ಟ್ನಲ್ಲಿ ಲಂಕಾ ಬೇಟೆಯಾಡಿದ ಟೀಮ್ ಇಂಡಿಯಾ – 10 ವಿಕೆಟ್ ಕಬಳಿಸಿದ ಮಾನವ್ ಸುತಾರ್
ಲಂಕಾ ದಹನ ಮಾಡಿದ ಕನ್ನಡಿಗರು – ರಾಹುಲ್, ಪಡಿಕ್ಕಲ್, ಪ್ರಸಿದ್ಧ್ ಕಮಾಲ್

ಗಾಲೆಯಲ್ಲಿ ಲಂಕಾ ದಹನ ಮಾಡಿದ ಟೀಮ್ ಇಂಡಿಯಾ ವಿಜಯ ಪತಾಕೆ ಹಾರಿಸಿದೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಕನ್ನಡಿಗ ಕ್ರಿಕೆಟಿಗರ ಕೊಡುಗೆ ಬಹುಪಾಲು ಇತ್ತು ಅನ್ನೋದೇ ವಿಶೇಷ.
ಇದನ್ನೂ ಓದಿ:ಜಡ್ಡುಗೆ ಪಂತ್ ತಲ್ವಾರ್ ಪಂಚ್ – DSP ಅಟ್ಯಾಕ್.. ಲಂಕನ್ನರು ಅರೆಸ್ಟ್
ಗಾಲೆ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ 165 ರನ್ಗಳ ಭರ್ಜರಿ ಜಯ ಸಾಧಿಸಿದೆ. ಯುವ ಸ್ಪಿನ್ನರ್ ಮಾನವ್ ಸುತಾರ್ ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಯುವ ಸ್ಪಿನ್ನರ್ ಮಾನವ್ ಸುತಾರ್ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡವು ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 206 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ಮುಂದೆ ಮಂಡಿಯೂರಿತು.
ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ 462 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಶ್ರೀಲಂಕಾ ತಂಡವು ಕೇವಲ 284 ರನ್ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ನಲ್ಲಿ 178 ರನ್ಗಳ ಮುನ್ನಡೆ ಪಡೆದ ಟೀಮ್ ಇಂಡಿಯಾ ಸೆಕಂಡ್ ಇನಿಂಗ್ಸ್ನಲ್ಲಿ ನಿರಾಸೆ ಮೂಡಿಸಿತ್ತು. ಭಾರತ ಕೇವಲ 193 ರನ್ಗಳಿಸಿ ಆಲೌಟ್ ಆಯಿತು. ಪ್ರಥಮ ಇನಿಂಗ್ಸ್ನಲ್ಲಿನ 178 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 372 ರನ್ಗಳ ಗುರಿ ಪಡೆದ ಶ್ರೀಲಂಕಾ ತಂಡವು ಐದನೇ ದಿನದಾಟದ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಧನಂಜಯ ಡಿಸಿಲ್ವಾ 59 ರನ್, ಸೋನಲ್ ದಿನುಶಾ 77 ರನ್ಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಈ ಇಬ್ಬರು ಬ್ಯಾಟರ್ಸ್ ಔಟಾಗುತ್ತಿದ್ದಂತೆ ಲಂಕೆಯಅಧಃಪತನ ಶುರುವಾಗಿತ್ತು. ಟೀಮ್ ಇಂಡಿಯಾ ಬೌಲರ್ಗಳು ಲಂಕಾ ಬ್ಯಾಟರ್ಗಳ ಮೇಲೆ ಒತ್ತಡ ಹೇರಿದರು. ಈ ಮೂಲಕ ಶ್ರೀಲಂಕಾ ತಂಡವನ್ನು 206 ರನ್ಗಳಿಗೆ ಆಲೌಟ್ ಮಾಡಿ ಟೀಮ್ ಇಂಡಿಯಾ 165 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಟೀಮ್ ಇಂಡಿಯಾ 2 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಇನ್ನು ಈ ಟೆಸ್ಟ್ ಪಂದ್ಯದಲ್ಲಿ ಮಾನವ್ ಸುತಾರ್ ಒಟ್ಟು 10 ವಿಕೆಟ್ ಕಬಳಿಸಿ ಕಮಾಲ್ ಮಾಡಿದರು. ಅಲ್ಲದೆ, ಲಂಕಾ ವಿರುದ್ಧ ಗೆಲುವಿಗೆ ಕನ್ನಡಿಗರ ಪ್ರಾಬಲ್ಯವೂ ಕಾರಣ. ಕೆ.ಎಲ್ ರಾಹುಲ್, ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ನಲ್ಲಿ ಮಿಂಚಿದರೆ, ಪ್ರಸಿದ್ಧ ಕೃಷ್ಣ ಬೌಲಿಂಗ್ನಲ್ಲೂ ಪಾರಮ್ಯ ಮೆರೆದರು. ಇನ್ನು ದೇವದತ್ತ ಪಡಿಕ್ಕಲ್ ಪ್ಲೇಯರ್ ಆಫ್ ದ ಮ್ಯಾಚ್ ಪ್ರಶಸ್ತಿ ತನ್ನದಾಗಿಸಿಕೊಂಡರು.

ನೋಡಿರಿ

