ಇನ್ಮುಂದೆ ದೇಗುಲ, ಉತ್ಸವ, ಮೆರವಣಿಗೆಗೆ ಆನೆಗಳನ್ನ ಬಳಸುವಂತಿಲ್ಲ – ಹೈಕೋರ್ಟ್​ ನಿಂದ ಮಹತ್ವದ ಆದೇಶ!

ಇನ್ಮುಂದೆ ದೇಗುಲ, ಉತ್ಸವ, ಮೆರವಣಿಗೆಗೆ ಆನೆಗಳನ್ನ ಬಳಸುವಂತಿಲ್ಲ – ಹೈಕೋರ್ಟ್​ ನಿಂದ ಮಹತ್ವದ ಆದೇಶ!

ಆನೆ ನಡೆದಿದ್ದೇ ದಾರಿ ಅನ್ನೋ ಮಾತಿದೆ. ಯಾಕಂದ್ರೆ ಯಾರೇ ಅಡ್ಡಬಂದ್ರೂ ಗಜಗಾಂಭೀರ್ಯದಿಂದಲೇ ಹೆಜ್ಜೆ ಹಾಕುತ್ತೆ. ಆದ್ರೆ ದೇಗುಲಗಳಲ್ಲಿ ಸಾಕುವ ಆನೆಗಳು ಮಾತ್ರ ಇದ್ದಲ್ಲೇ ಇರಬೇಕು. ಹೀಗಾಗಿ ಬಂಧಿತ ಆನೆಗಳು  ಅನುಭವಿಸುವ ಹಿಂಸೆಯನ್ನು ಕೊನೆಗಾಣಿಸಲು ಪ್ರಾಣಿ ದಯಾ ಸಂಘಗಳು ನಡೆಸುತ್ತಿದ್ದ ಅಭಿಯಾನಕ್ಕೆ ಮಹತ್ವದ ಜಯ ಸಿಕ್ಕಿದೆ.

ತಮಿಳುನಾಡಿನ ಯಾವುದೇ ದೇವಾಲಯ, ಧಾರ್ಮಿಕ ಸಂಸ್ಥೆಗಳು ಅಥವಾ ಖಾಸಗಿ ವ್ಯಕ್ತಿಗಳು ಇನ್ನು ಮುಂದೆ ಆನೆಗಳನ್ನು ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಆದೇಶ ನೀಡಿದೆ. ಅಲ್ಲದೆ ಸರ್ಕಾರದ ಕಾರ್ಯದರ್ಶಿ, ಪರಿಸರ ಮತ್ತು ಅರಣ್ಯ ಇಲಾಖೆಗೆ ರಾಜ್ಯದೆಲ್ಲೆಡೆ ಬಂಧಿತ ಆನೆಗಳನ್ನು ತಪಾಸಣೆ ನಡೆಸುವಂತೆ ಆದೇಶ ನೀಡಿದೆ. ದೇವಸ್ಥಾನಗಳು ಮತ್ತು ಖಾಸಗಿ ವ್ಯಕ್ತಿಗಳ ಒಡೆತನದ ಆನೆಗಳು ಸೇರಿದಂತೆ ರಾಜ್ಯದ ಎಲ್ಲಾ ಬಂಧಿತ ಆನೆಗಳನ್ನು ಸರ್ಕಾರ ನಡೆಸುತ್ತಿರುವ ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲು ಸರ್ಕಾರಕ್ಕೆ ಕೋರ್ಟ್​ ಸೂಚನೆ ನೀಡಿದೆ.

ಇದನ್ನೂ ಓದಿ : ನಾಯಿ- ಕೋಳಿ ನಡುವೆ ಬಿಗ್ ಫೈಟ್ – ಹುಂಜನ ಸಹವಾಸವೇ ಬೇಡ ಎಂದು ಓಡಿದ  ಶ್ವಾನ

ಈಗ ದೇವಾಲಯಗಳು ಮತ್ತು ಖಾಸಗಿ ಒಡೆತನ ಸೆರೆಯಲ್ಲಿರುವ ಆನೆಗಳನ್ನು ಸರ್ಕಾರಿ ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲು ಕರೆ ನೀಡುವ ಸಮಯ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪರಿಸರ ಮತ್ತು ಅರಣ್ಯ ಇಲಾಖೆಯ ಕಾರ್ಯದರ್ಶಿಗಳು ಮಾನವ ಸಂಪನ್ಮೂಲ ಮತ್ತು ಕಾರ್ಯದರ್ಶಿಗಳೊಂದಿಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಸ್ವಾಮಿನಾಥನ್​ ನಿರ್ದೇಶನ ನೀಡಿದ್ದಾರೆ.

ಈಗಲೂ ಕೂಡ ಅನೇಕ ದೇವಾಲಯಗಳಲ್ಲಿ ಆನೆಗಳು ಸಂಪೂರ್ಣವಾಗಿ ದಯನೀಯ ಸ್ಥಿತಿಯಲ್ಲಿ ಇರುವುದನ್ನು ನೆನಪಿಸಿದ ನ್ಯಾಯಾಧೀಶರು, ಕಾಂಕ್ರೀಟ್ ನೆಲಹಾಸು, ತವರದ ಶೀಟ್​ ಛಾವಣಿ, ಸ್ವಾತಂತ್ರ್ಯದ ಕೊರತೆ ಮತ್ತು ಆಹಾರದ ಕೊರತೆ ಆನೆಗಳ ಜೀವನವನ್ನು ನರಕವನ್ನಾಗಿಸಿದೆ. ಆನೆಗಳು ದಿನದ 24 ಗಂಟೆಗಳ ಕಾಲ ಸರಪಳಿಯಲ್ಲಿ ಬಂಧಿಸಲ್ಪಟ್ಟಿರುತ್ತವೆ. ಕೆಲವು ಕುಡುಕ ಮಾವುತರು ಆನೆಗಳ ಮೇಲೆ ಕ್ರೌರ್ಯ ಮೆರೆಯುತ್ತಿದ್ದಾರೆ. ತಮ್ಮ ಸಹಜ ಕುಟುಂಬದಿಂದ ಬೇರ್ಪಟ್ಟು ಹಿಂಸೆಯನ್ನು ಸಹಿಸಲಾರದೆ ಈ ಬಡ ಪ್ರಾಣಿಗಳು ಕೆಲವೊಮ್ಮೆ ಆಕ್ರಮಣಕಾರಿ ಮತ್ತು ಹಿಂಸಾತ್ಮಕವಾಗಿ ಬದಲಾಗುತ್ತವೆ ಎಂದು ನ್ಯಾಯಮೂರ್ತಿ ಸ್ವಾಮಿನಾಥನ್ ಹೇಳಿದ್ದಾರೆ.

60 ವರ್ಷದ ಲಲಿತಾ ಎಂಬ ಹೆಣ್ಣು ಆನೆಯ ನಿರ್ವಹಣೆಗೆ ಸಂಬಂಧಿಸಿದಂತೆ ಮದುರೈ ಶಾಖೆಯಲ್ಲಿ ಅರಣ್ಯ ಇಲಾಖೆ ದಾಖಲಿಸಿದ್ದ ಪ್ರಕರಣದಲ್ಲಿ ಈ ಆದೇಶ ಹೊರಬಿದ್ದಿದೆ. ಆನೆಯನ್ನು ಮಾವುತರಿಂದ ಬೇರ್ಪಡಿಸಬಾರದು ಮತ್ತು ಆನೆಯನ್ನು ಮಾವುತನ ಆರೈಕೆಯಲ್ಲಿ ಮುಂದುವರಿಸಬೇಕು ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶಿಸಿದೆ. ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಇತ್ತೀಚೆಗೆ ಕಾರ್ಯಕರ್ತರೊಂದಿಗೆ ಲಲಿತಾ ಆನೆಯನ್ನು ಭೇಟಿ ಮಾಡಿದ್ದ ವೇಳೆ ಆನೆ ದೇಹದ ಮೇಲೆ ಗಾಯಗಳು ಕಂಡುಬಂದಿವೆ. ಈ ವೇಳೆ ಪಶುಸಂಗೋಪನಾ ಇಲಾಖೆಯ ನೆರವಿನಿಂದ ಆನೆಯ ಆರೈಕೆ ಮಾಡುವಂತೆ ವಿರುದುನಗರ ಜಿಲ್ಲಾಧಿಕಾರಿಗೆ ಸೂಚಿಸಿದ್ದರು.

‘ಆನೆಗೆ 60 ವರ್ಷ ವಯಸ್ಸಾಗಿರುವುದರಿಂದ ರಕ್ಷಣೆಯ ನಂತರ, ಲಲಿತಾಳನ್ನು ಆಜೀವ ಆರೈಕೆಗಾಗಿ ಸರ್ಕಾರಿ ಆನೆ ಪುನರ್ವಸತಿ ಶಿಬಿರಕ್ಕೆ ವರ್ಗಾಯಿಸಲಾಗುವುದು. ಇನ್ನು ಮುಂದೆ ಆನೆಗಳನ್ನು ಖಾಸಗಿ ಅಥವಾ ಧಾರ್ಮಿಕ ಸಂಸ್ಥೆಗಳು ಖರೀದಿಸಬಾರದು’ ಎಂದು ಆದೇಶದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಅನೇಕ ರಾಜ್ಯಗಳಲ್ಲಿ ಉತ್ಸವಗಳು ಮತ್ತು ಮೆರವಣಿಗೆಗಳಲ್ಲಿಆನೆಗಳನ್ನು ಬಳಸುವ ದೃಶ್ಯಗಳು ಕಾಣಸಿಗುತ್ತವೆ. ಕೇರಳ ರಾಜ್ಯದಲ್ಲಿ ಮೆರವಣಿಗೆಗಳು ಸೇರಿದಂತೆ ಹಲವು ಉತ್ಸವಗಳಲ್ಲಿ ಹೆಚ್ಚು ಆನೆಗಳನ್ನು ಬಳಸಲಾಗುತ್ತದೆ. 2019 ರ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಸುಮಾರು 2,450 ಬಂಧಿತ ಆನೆಗಳಿವೆ. ಅಸ್ಸಾಂ 905 ಬಂಧಿತ ಆನೆಗಳನ್ನು ಹೊಂದಿದ್ದರೆ, ಕೇರಳ 2ನೇ ಸ್ಥಾನದಲ್ಲಿದ್ದು, ಅಲ್ಲಿ 518 ಆನೆ ಬಂಧಿತ ಆನೆಗಳಿವೆ.

suddiyaana