ಮಳೆಯ ಆರ್ಭಟಕ್ಕೆ ನಲುಗಿದ ತಮಿಳುನಾಡು –  ಮಳೆ ನಿಂತರೂ ತಗ್ಗುತ್ತಿಲ್ಲ ಪ್ರವಾಹ ಸ್ಥಿತಿ!

ಮಳೆಯ ಆರ್ಭಟಕ್ಕೆ ನಲುಗಿದ ತಮಿಳುನಾಡು –  ಮಳೆ ನಿಂತರೂ ತಗ್ಗುತ್ತಿಲ್ಲ ಪ್ರವಾಹ ಸ್ಥಿತಿ!

ಭಾರಿ ಮಳೆಯಿಂದಾಗಿ ತಮಿಳುನಾಡು ಅಕ್ಷರಶಃ ನಲುಗಿ ಹೋಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದ್ರೂ ಪ್ರವಾಹ ಸ್ಥಿತಿ ಮುಂದುವರಿದಿದೆ.

ಹೌದು, ಭಾರಿ ಮಳೆಯಿಂದಾಗಿ ತಮಿಳುನಾಡು ತತ್ತರಿಸಿಹೋಗಿದೆ. ಮಳೆಯಿಂದಾಗಿ ವ್ಯಾಪಕ ಹಾನಿ ಸಂಭವಿಸಿದ್ದು, ಭಾರತೀಯ ವಾಯುಪಡೆ ಮತ್ತು ನೌಕಾಪಡೆಯು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದೆ. ರಕ್ಷಣೆಯ ಸಮಯದಲ್ಲಿ ದಕ್ಷಿಣ ತಮಿಳುನಾಡಿನ ಕೆಲವು ಭಾಗಗಳಲ್ಲಿ ಸಿಲುಕಿಕೊಂಡಿದ್ದ ಹಲವಾರು ಜನರನ್ನು ರಕ್ಷಿಸಲಾಗಿದೆ. ಭಾರತೀಯ ನೌಕಾಪಡೆಯ ಸಿಬ್ಬಂದಿ ಮಧುರೈ ಮತ್ತು ಟುಟಿಕೋರಿನ್‌ನಲ್ಲಿ ಪ್ರವಾಹ ಪೀಡಿತ ಜನರಿಗೆ ಆಹಾರ ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು ಎಂದು ವರದಿಯಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚುತ್ತಿದೆ ಕೋವಿಡ್‌ ಕೇಸ್‌.. ದೇಶದಲ್ಲಿ ರಾಜ್ಯಕ್ಕೆ 2 ನೇ ಸ್ಥಾನ – ಕಾದಿದೆಯೇ ಲಾಕ್‌ಡೌನ್‌?

ಇನ್ನು ನಿರಂತರ ಮಳೆಯ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕೇಂದ್ರವು ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕಚೇರಿ ಬುಧವಾರ ಭರವಸೆ ನೀಡಿದೆ.“ಐಎಎಫ್ ಹೆಲಿಕಾಪ್ಟರ್‌ಗಳು ತಮಿಳುನಾಡಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಕೇಂದ್ರ ಸರ್ಕಾರವು ತಮಿಳುನಾಡಿಗೆ ಎಲ್ಲ ರೀತಿಯ ನೆರವು ನೀಡುತ್ತಿದೆ” ಎಂದು ರಕ್ಷಣಾ ಸಚಿವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಪರಿಹಾರ ಕಾರ್ಯಾಚರಣೆಯನ್ನು ರಾಜ್ಯ ಆಡಳಿತವೂ ಕೈಗೊಂಡಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.

ತೂತುಕುಡಿ ಜಿಲ್ಲೆಯ ಕುರುಕತ್ತೂರಿನ ಪ್ರವಾಹ ಪೀಡಿತ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಪ್ರಯಾಣಿಕರಿದ್ದ ಕಾರನ್ನು ಭಾರತೀಯ ಸೇನೆ ರಕ್ಷಿಸಿದೆ. ಭಾರೀ ಮಳೆಯ ಪರಿಣಾಮ ತಮಿಳುನಾಡಿನ ಟುಟಿಕೋರಿನ್ನ ಅಲಂತಲೈನಲ್ಲಿ ಮನೆಗಳು ಜಲಾವೃತಗೊಂಡಿವೆ ಅಲ್ಲದೆ ಸುತ್ತಮುತ್ತಲ ಪ್ರದೇಶಗಳು ಜಲಾವೃತವಾಗಿವೆ. ದಕ್ಷಿಣ ಜಿಲ್ಲೆಗಳು, ವಿಶೇಷವಾಗಿ ತಿರುನಲ್ವೇಲಿ ಮತ್ತು ಟುಟಿಕೋರಿನ್‌ನಲ್ಲಿ ದಾಖಲೆಯ ಮಳೆ ಮತ್ತು ಪ್ರವಾಹಕ್ಕೆ ಸಾಕ್ಷಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.  “ಡಿಸೆಂಬರ್ 21 ರಿಂದ 26 ರವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಲಘು ಮಳೆಯಾಗುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Shwetha M