ತಮಿಳುನಾಡಿಗೆ ಕಾವೇರಿ ನೀರು ಬಿಡಿ – ಕರ್ನಾಟಕಕ್ಕೆ ಸುಪ್ರೀಂ ಖಡಕ್ ಸೂಚನೆ

ಕಾವೇರಿ ನೀರಾವರಿ ಪ್ರಾಧಿಕಾರದ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಖಡಕ್ ಆಗಿ ಸುಪ್ರೀಂ ಕೋರ್ಟ್ ಸೂಚಿಸಿದೆ. ಕಾವೇರಿ ನೀರು ಹಂಚಿಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ, ವಿಚಾರಣೆಯನ್ನು ಒಂದು ವಾರಕ್ಕೆ ಮುಂದೂಡಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅನಿಶ್ಚಿತತೆಯಿಂದ ಕೂಡಿದೆ. ಬರದಿಂದ ನೀರಿನ ಕೊರತೆ ಎದುರಾಗಿದ್ದು, ನಮ್ಮ ರೈತರು ಕಂಗಾಲಾಗಿದ್ದಾರೆ. ಪ್ರಾಧಿಕಾರದ ಮೊದಲ ಆದೇಶದಂತೆ ನಾವು 3,500 ಕ್ಯೂಸೆಕ್ಗಿಂತಲೂ ಹೆಚ್ಚಿನ ನೀರನ್ನು ಹರಿಸಿದ್ದೇವೆ. ನಾವು ನೀರು ಹರಿಸಿಲ್ಲ ಎಂಬ ವಾದ ಸುಳ್ಳು. ಎರಡನೇ ಆದೇಶದ ಅನ್ವಯ ಕೆಆರ್ಎಸ್ನಿಂದಲೂ ನೀರು ಬಿಟ್ಟಿದ್ದೇವೆ ಎಂದು ಕರ್ನಾಟಕದ ಪರ ವಕೀಲರು ವಾದಿಸಿದರು.
ಇದನ್ನೂ ಓದಿ: ಹನೂರು ವಲಯದ ಕಾಡಿನಲ್ಲಿ ಮೂವರ ಏನ್ಕೌಂಟರ್ – ಜಿಂಕೆ ಮಾಂಸ ಸೇರಿ ಹಲವು ಸಾಕ್ಷ್ಯ ಬಿಡುಗಡೆ
ಬಿಳಿಗುಂಡ್ಲು ತಲುಪಲು 48 ಗಂಟೆಗಳು ಬೇಕಾಗುತ್ತದೆ. ಆದರೆ ಅರ್ಜಿದಾರರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಕರ್ನಾಟಕದ ಪರ ವಕೀಲರು ಆಕ್ಷೇಪಿಸಿದರು. ಇದಕ್ಕೆ ಪ್ರತಿಯಾಗಿ ತಮಿಳುನಾಡಿನ ಪರ ವಕೀಲರು, ಕಾವೇರಿ ಪ್ರಾಧಿಕಾರದ ನಿರ್ದೇಶನಗಳ ಹೊರತಾಗಿಯೂ ಕರ್ನಾಟಕ ಅದನ್ನು ಪಾಲಿಸುತ್ತಿಲ್ಲ. ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರಿನ ಹರಿವು ಕಾಣಿಸುತ್ತಿಲ್ಲ. ಇದರಿಂದ ರೈತರಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ವಾದಿಸಿದರು.
ಇಂದು ಬೆಳಗಿನ ವೇಳೆಗೆ ಜಲಾಶಯಗಳಲ್ಲಿ ಶೇ.76ರಷ್ಟು ನೀರು ಸಂಗ್ರಹವಾಗಿದೆ. ಕೋರ್ಟ್ ತೀರ್ಪಿನ ಪ್ರಕಾರ 64 ಟಿಎಂಸಿ ನೀರು ಬರಬೇಕಿತ್ತು. ಆದರೆ ನಮಗೆ ಕೇವಲ 14 ಟಿಎಂಸಿ ನೀರು ಬಂದಿದೆ. ಮಳೆಯ ಕೊರತೆಯನ್ನು ಪರಿಗಣಿಸಿದರೂ ಅರ್ಧದಷ್ಟು ನೀರು ಹರಿಸಬೇಕಿತ್ತು ಎಂದು ತಮಿಳುನಾಡಿನ ಪರ ವಕೀಲರು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ನೀರಿನ ಹರಿವು ಖಚಿತಪಡಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿ ವಿಚಾರಣೆಯನ್ನು ಒಂದು ವಾರಕ್ಕೆ ಮುಂದೂಡುತ್ತೇವೆ. ಮುಂದಿನ ವಿಚಾರಣೆಯ ವೇಳೆ ಅಂಕಿ-ಅಂಶಗಳೊಂದಿಗೆ ಹಾಜರಾಗಬೇಕು. ಸದ್ಯದ ಪ್ರಾಧಿಕಾರದ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಿತು.

ನೋಡಿರಿ

