ಬೇಸಿಗೆ ರಜೆಗೆ ಅಸೈನ್​​ಮೆಂಟ್ ಮಕ್ಕಳಿಗಲ್ಲ, ಪೋಷಕರಿಗೆ! – ವೇಳಾಪಟ್ಟಿಯಲ್ಲಿ ಏನೇನಿದೆ ಗೊತ್ತಾ?

ಬೇಸಿಗೆ ರಜೆಗೆ ಅಸೈನ್​​ಮೆಂಟ್ ಮಕ್ಕಳಿಗಲ್ಲ, ಪೋಷಕರಿಗೆ! – ವೇಳಾಪಟ್ಟಿಯಲ್ಲಿ ಏನೇನಿದೆ ಗೊತ್ತಾ?

ಬೇಸಿಗೆ ರಜೆ ಶುರುವಾಗುತ್ತಿದ್ದಂತೆ ಮಕ್ಕಳನ್ನು ಹೇಗೆ ಸಂಭಾಳಿಸೋದು ಅಂತಾ  ಪೋಷಕರಿಗೆ ತಲೆನೋವು ಶುರುವಾಗಿ ಬಿಡುತ್ತೆ. ಏಕೆಂದರೆ ಮಕ್ಕಳ ಚೇಷ್ಠೆ, ತುಂಟಾಟ ಹೆಚ್ಚಾಗಿರುತ್ತೆ. ಇನ್ನು ಸಿಟಿಯಲ್ಲಿ ವಾಸಿಸುತ್ತಿರುವ ಪೋಷಕರ ಪಾಡು ಕೇಳುವುದೇ ಬೇಡ. ಒಂದು ಕಡೆ ಕೆಲಸಕ್ಕೆ ಹೋಗುವ ಚಿಂತೆಯಾದ್ರೆ ಇನ್ನೊಂದು ಕಡೆ ಮಕ್ಕಳನ್ನ ಎಲ್ಲಿ ಬಿಟ್ಟು ಹೋಗುವುದು ಅಂತಾ ತಲೆಕೆಡಿಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳನ್ನು ಕೆಲ ಪೋಷಕರು ಸಂಬಂಧಿಕರ ಮನೆಗೆ ಕಳುಹಿಸಿದ್ರೆ, ಇನ್ನು ಕೆಲವರು ಬೇಸಿಗೆ ಶಿಬಿರಕ್ಕೆ ಕಳುಹಿಸುತ್ತಾರೆ. ಕೆಲ ಶಿಕ್ಷಣ ಸಂಸ್ಥೆಗಳು ಮಕ್ಕಳು ರಜೆಯಲ್ಲಿ ಕಲಿತ ಪಾಠಗಳನ್ನು ಮರೆಯಬಾರದು ಅಂತಾ ಅಸೈನ್​​ಮೆಂಟ್ ಕೊಡುವುದನ್ನು ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ಮಕ್ಕಳಿಗೆ ಅಸೈನ್​​ಮೆಂಟ್ ಕೊಡುವ ಬದಲು ಪೋಷಕರಿಗೆ ಕೊಟ್ಟಿದ್ದಾರೆ.

ಇದನ್ನೂ ಓದಿ: 7 ವರ್ಷದ ಮಗನಿಗಾಗಿ RRR ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ಜಪಾನ್ ಮಹಿಳೆ!

ಸಾಮಾನ್ಯವಾಗಿ ಸ್ಕೂಲ್ ಗಳಲ್ಲಿ ರಜೆ ವೇಳೆ ಮಕ್ಕಳಿಗೆ ಅಸೈನ್​​ಮೆಂಟ್ ಕೋಡುವುದನ್ನ ನೋಡಿರುತ್ತೇವೆ. ಆದರೆ ತಮಿಳುನಾಡಿನ ಕೊಯಮತ್ತೂರಿನ   ಶಾಲೆಯೊಂದು ಬೇಸಗೆ ರಜೆಯಲ್ಲಿ ಮಕ್ಕಳ ಬದಲು ಅವರ ಪಾಲಕರಿಗೇ ಅಸೈನ್​​ಮೆಂಟ್ ನೀಡಿದ್ದಾರೆ. ಪಾಲಕರು ರಜಾ ಅವಧಿಯಲ್ಲಿ ಏನೇನು ಮಾಡಬೇಕು ಅಂತಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಫೋಟೋ ಇದೀಗ ಸೋಶೀಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಕೊಯಮತ್ತೂರಿನ ಜಿಎಂ ಮಿಲ್ಸ್, ಎಸ್​ಎಂ ಪಾಳ್ಯಂನಲ್ಲಿರುವ ಅಣ್ಣೈ ವಯಲೆಟ್ ಮೆಟ್ರಿಕ್ಯುಲೇಷನ್ ಆ್ಯಂಡ್ ಹೈಯರ್ ಸೆಕೆಂಡರಿ ಸ್ಕೂಲ್ ಪಾಲಕರಿಗೆ ಅಸೈನ್​ಮೆಂಟ್ ನೀಡಿ ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಮಕ್ಕಳ ಶ್ರೇಯೋಭಿವೃದ್ಧಿ ನಿಟ್ಟಿನಲ್ಲಿ ತಂದೆ-ತಾಯಿಗೆ ಅಸೈನ್​ಮೆಂಟ್ ನೀಡಿ ಶಾಲೆ ಪ್ರಕಟಿಸಿದ್ದ ವೇಳಾಪಟ್ಟಿಯನ್ನ ಇದೀಗ ಕರ್ನಾಟಕದ ಮಾಜಿ ಶಿಕ್ಷಣ ಸಚಿವ, ಬಿಜೆಪಿ ನಾಯಕ ಸುರೇಶ್ ಕುಮಾರ್ ಎಸ್ ಫೇಸ್​ಬುಕ್​​ನಲ್ಲಿ ಶೇರ್ ಮಾಡಿದ್ದಾರೆ.

ಪೋಷಕರಿಗೆ ನೀಡಿದ ಅಸೈನ್​​ಮೆಂಟ್ ನಲ್ಲಿ ಏನಿದೆ?

ಆತ್ಮೀಯ ಪೋಷಕರೇ, ಹೃತ್ಪೂರ್ವಕ ಶುಭಾಶಯಗಳು. ಕಳೆದ 10 ತಿಂಗಳು ನಾವು ನಿಮ್ಮ ಅಮೂಲ್ಯ ಮಕ್ಕಳನ್ನು ನೋಡಿಕೊಳ್ಳುವುದನ್ನು ಆನಂದಿಸಿದ್ದೇವೆ. ಅವರೆಲ್ಲರೂ ಶಾಲೆಗೆ ಬರಲು ಇಷ್ಟಪಡುತ್ತಿದ್ದರು ಎಂಬುದನ್ನು ನೀವು ಗಮನಿಸಿರಬಹುದು. ಇನ್ನು ಎರಡು ತಿಂಗಳು ಅವರು ತಮ್ಮ ಪಾಲಕರೊಂದಿಗೆ ಕಳೆಯಲಿದ್ದಾರೆ. ಈ ಅವಧಿಯನ್ನು ಅವರಿಗೆ ಸಂತೋಷದ ಅವಧಿಯನ್ನಾಗಿ ಮಾಡಲು ಕೆಲವು ಸಲಹೆಗಳನ್ನು ನೀಡಲಾಗಿದೆ. ದಯಮಾಡಿ ಪಾಲಿಸಿ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿ ದಿನ 5 ಹೊಸ ಇಂಗ್ಲೀಷ್ ಪದಗಳನ್ನು ಕಲಿಯಿರಿ ಮತ್ತು ಅವುಗಳನ್ನು ಪುಸ್ತಕದಲ್ಲಿ ಮಕ್ಕಳಿಗಾಗಿ ಪಟ್ಟಿ ಮಾಡಿಕೊಡಿ. ಕನಿಷ್ಠ 3 ಮಂದಿ ನೆರೆಹೊರೆಯವರನ್ನು ಮಕ್ಕಳಿಗೆ ಭೇಟಿ ಮಾಡಿಸಿ ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅವರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಸಲಹೆ ನೀಡಿ. ಅಜ್ಜ-ಅಜ್ಜಿಯರನ್ನು ಭೇಟಿ ಮಾಡಿಸಿ ಮತ್ತು ನಿಮ್ಮ ಮಕ್ಕಳು ಅವರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಳ್ಳುವಂತೆ ಮಾಡಿ. ಅವರ ಪ್ರೀತಿ ಮತ್ತು ಭಾವನಾತ್ಮಕ ಬೆಂಬಲ ನಿಮ್ಮ ಮಗುವಿಗೆ ಬಹಳ ಮುಖ್ಯ. ಅವರೊಂದಿಗೆ ಸ್ನ್ಯಾಪ್‌ಗಳನ್ನು ಕ್ಲಿಕ್ ಮಾಡಿಕೊಳ್ಳಿ ಎಂದು ಸಲಹೆ ನೀಡಲಾಗಿದೆ.

ನಿಮ್ಮ ಮಕ್ಕಳೊಂದಿಗೆ ಕನಿಷ್ಠ ಎರಡು ಹೊತ್ತಿನ ಊಟವನ್ನು ಮಾಡಿ. ಅವರಿಗೆ ರೈತರ ಮಹತ್ವ ಮತ್ತು ಶ್ರಮವನ್ನು ತಿಳಿಸಿ ಮತ್ತು ಆಹಾರವನ್ನು ವ್ಯರ್ಥ ಮಾಡದಂತೆ ತಿಳಿಸಿಕೊಡಿ. ಪ್ರತಿ ಬಾರಿ ಊಟ ಮಾಡಿದ ನಂತರ ಅವರು ತಮ್ಮ ತಟ್ಟೆಗಳನ್ನು ತೊಳೆಯಲಿ. ಮಕ್ಕಳು ಅಂತಹ ಅಭ್ಯಾಸಗಳಿಂದ ಶ್ರಮದ ಮಹತ್ವವನ್ನು ಕಲಿಯುತ್ತಾರೆ. ಅಡುಗೆಯಲ್ಲಿ ನಿಮಗೆ ಸಹಾಯ ಮಾಡಲು ಅವರಿಗೆ ಅನುಮತಿಸಿ. ಅವರು ಕೂಡ ಸಲಾಡ್ ಅನ್ನು ತಯಾರಿಸಲಿ ಎಂದು ಪಾಲಕರಿಗೆ ಸಲಹೆ ನೀಡಲಾಗಿದೆ.

ಮಕ್ಕಳನ್ನು ನಿಮ್ಮ ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮತ್ತು ಕುಟುಂಬವನ್ನು ಪೋಷಿಸಲು ನೀವು ತುಂಬಾ ಕಷ್ಟಪಡುತ್ತೀರಿ ಎಂಬುದನ್ನು ನಿಮ್ಮ ಮಗುವಿಗೆ ಅರ್ಥಮಾಡಿಸಿ. ಸ್ಥಳೀಯ ಹಬ್ಬ ಮತ್ತು ಸ್ಥಳೀಯ ಮಾರುಕಟ್ಟೆಗೆ ಕರೆದೊಯ್ಯುವುದನ್ನು ತಪ್ಪಿಸಬೇಡಿ. ಬೀಜಗಳನ್ನು ಬಿತ್ತುವ ಮೂಲಕ ಉದ್ಯಾನವನ್ನು ಬೆಳೆಸಲು ನಿಮ್ಮ ಮಗುವನ್ನು ನಿಧಾನವಾಗಿ ಪ್ರೋತ್ಸಾಹಿಸಿ. ಸಸ್ಯಗಳು ಮತ್ತು ಮರಗಳ ಬಗ್ಗೆ ಜ್ಞಾನವು ನಿಮ್ಮ ಮಗುವಿನ ಬೆಳವಣಿಗೆಯ ಅವಿಭಾಜ್ಯ ಅಂಗವಾಗಿದೆ. ನಿಮ್ಮ ಬಾಲ್ಯ ಮತ್ತು ನಿಮ್ಮ ಕುಟುಂಬದ ಇತಿಹಾಸದ ಬಗ್ಗೆ ಕಥೆಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಿ. ನಿಮ್ಮ ಮಗುವು ಹೊರಾಂಗಣದಲ್ಲಿ ಆಟವಾಡಲು, ಗಾಯಗೊಳ್ಳಲು ಮತ್ತು ಕೊಳಕಾಗಲು ಅವಕಾಶ ಮಾಡಿಕೊಡಿ. ಅವರು ಕೆಳಗೆ ಬೀಳುವುದು ಮತ್ತು ನೋವು ಅನುಭವಿಸಿದರೆ ಪರವಾಗಿಲ್ಲ, ಆರಾಮದಾಯಕ ಜೀವನವು ನಿಮ್ಮ ಮಗುವನ್ನು ಸೋಮಾರಿಯನ್ನಾಗಿ ಮಾಡುತ್ತದೆ. ಸಾಕು ನಾಯಿ, ಬೆಕ್ಕು ಅಥವಾ ಯಾವುದೇ ಪ್ರಾಣಿ, ಪಕ್ಷಿಗಳನ್ನು ದತ್ತು ತೆಗೆದುಕೊಳ್ಳಲು ಅವರಿಗೆ ಅನುಮತಿಸಿ ಎಂದು ನೋಟಿಸ್​​​ನಲ್ಲಿ ಉಲ್ಲೇಖಿಸಲಾಗಿದೆ.

suddiyaana