‘ಕಮಲ’ ಮುಡಿಯಲು ಸಜ್ಜಾದ ಸುಮಲತಾ..? – ಮಂಡ್ಯದಲ್ಲೇ ‘ರೆಬೆಲ್ ಲೇಡಿ’ ಮಹತ್ವದ ಘೋಷಣೆ..!

‘ಕಮಲ’ ಮುಡಿಯಲು ಸಜ್ಜಾದ ಸುಮಲತಾ..? – ಮಂಡ್ಯದಲ್ಲೇ ‘ರೆಬೆಲ್ ಲೇಡಿ’ ಮಹತ್ವದ ಘೋಷಣೆ..!

ಮಂಡ್ಯ ರಾಜಕೀಯ ಕಣ ಮತ್ತೊಮ್ಮೆ ಸದ್ದು ಮಾಡ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಜಿಲ್ಲೆಯಲ್ಲಿ ಈಗ ಮತ್ತೊಂದು ಅಲೆ ಎದ್ದಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದಿ.ಅಂಬರೀಶ್ ಪತ್ನಿ ಸುಮಲತಾ ಭರ್ಜರಿ ಗೆಲುವು ಸಾಧಿಸಿದ್ದರು. ಇದೀಗ ಸಂಸದೆಯಾಗಿರುವ ಸುಮಲಾ ಬಿಜೆಪಿ ಸೇರ್ಪಡೆಗೊಳ್ಳಲು ವೇದಿಕೆ ಸಿದ್ಧವಾಗಿದೆ.

ಇದನ್ನೂ ಓದಿ : ‘ನಿನ್ನ ಗಂಡ ಬದುಕಿದ್ದಾನೆ ತಾನೇ, ಹಣೆಗೆ ಬೊಟ್ಟು ಇಟ್ಕೋ’ – ಮಹಿಳೆ ಮುಂದೆ ನಾಲಗೆ ಹರಿಬಿಟ್ಟ ಬಿಜೆಪಿ ಸಂಸದ!

ಸಂಸದೆಯಾಗಿ ಆಯ್ಕೆಯಾದ ಬಳಿಕ ಸುಮಲತಾ ನಾಲ್ಕು ವರ್ಷಗಳಿಂದಲೂ ಯಾವುದೇ ಪಕ್ಷ ಸೇರದೆ ಸ್ವತಂತ್ರವಾಗಿಯೇ ಉಳಿದಿದ್ರು. ಆದ್ರೀಗ ಕರ್ನಾಟಕ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲೇ ‘ಕಮಲ’ ಮುಡಿಯೋಕೆ ಸಜ್ಜಾಗಿರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ದಶಪಥ ಹೆದ್ದಾರಿ ಲೋಕಾರ್ಪಣೆಗೆ ಮೋದಿ ಮಂಡ್ಯಕ್ಕೆ ಆಗಮಿಸುವ ಮೊದಲೇ ಸುಮಲತಾ ಬಿಜೆಪಿ ಸೇರಿಕೊಳ್ತಾರೆ ಎನ್ನಲಾಗುತ್ತಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಡ್ಯಕ್ಕೆ ಆಗಮಿಸುತ್ತಿದ್ದು ಈ ವೇಳೆಯೇ ಪಕ್ಷ ಸೇರ್ಪಡೆಗೆ ಸಂಸದೆ ಸುಮಲತಾ ಬಯಸಿದ್ದರು. ಆದರೆ ಇದು ಸರ್ಕಾರಿ ಕಾರ್ಯಕ್ರಮ ಆಗಿರೋದ್ರಿಂದ ಇವತ್ತೇ ಪಕ್ಷ ಸೇರಲು ಬಯಸಿದ್ದಾರೆ ಎನ್ನಲಾಗಿದೆ. ಮಂಡ್ಯದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸೇರೋ ಬಗ್ಗೆ ನಿರ್ಧಾರ ಪ್ರಕಟಿಸೋ ಸಾಧ್ಯತೆಗಳಿವೆ.

ಈಗಾಗಲೇ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (J.P Nadda) ಅವರನ್ನು ಸಂಸದೆ ಸುಮಲತಾ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇಂದು ಆಪ್ತೇಷ್ಟರ ಅಭಿಪ್ರಾಯವನ್ನು ಸುಮಲತಾ ಸಂಗ್ರಹಿಸಲಿದ್ದು, ಆ ನಂತರ ಬಿಜೆಪಿ ಸೇರೋದಾ? ಅಥವಾ ಬೇಡ್ವಾ? ಅನ್ನೋದನ್ನು ನಿರ್ಧರಿಸಲಿದ್ದಾರೆ. ಬಿಜೆಪಿಗೆ ಸುಮಲತಾ ಬಂದರೆ ಅನುಕೂಲವಾಗಲಿದೆ ಅನ್ನೋದು ಸುಮಲತಾ ಬೆಂಬಲಿಗರ ಲೆಕ್ಕಾಚಾರವಾಗಿದೆ.

suddiyaana