ಸಾಹಸ ಸಿಂಹ ವಿಷ್ಣುವರ್ಧನ್‌ ಬ್ಯಾನರ್‌ಗೆ ವಿದ್ಯಾರ್ಥಿಗಳಿಂದ ಅಪಮಾನ! – ಮಕ್ಕಳು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ಪೋಷಕರು!

ಸಾಹಸ ಸಿಂಹ ವಿಷ್ಣುವರ್ಧನ್‌ ಬ್ಯಾನರ್‌ಗೆ ವಿದ್ಯಾರ್ಥಿಗಳಿಂದ ಅಪಮಾನ! – ಮಕ್ಕಳು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ಪೋಷಕರು!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಯುವಕರ ಗುಂಪೊಂದು ಸಾಹಸ ಸಿಂಹ ಡಾ. ವಿಷ್ಣುವರ್ದನ್‌ ಅವರ ಬ್ಯಾನರ್‌ಗೆ ಅಪಮಾನ ಮಾಡಿದ್ದಾರೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಬೆನ್ನಲ್ಲೇ ವಿಷ್ಣುವರ್ಧನ್‌ ಅಭಿಮಾನಿಗಳು ಆಕ್ರೋಶ ದೂರು ನೀಡಿದ್ದು, ಪೊಲೀಸರು ಈಗ ಕ್ರಮಕೈಕೊಂಡಿದ್ದಾರೆ.

ಇದನ್ನೂ ಓದಿ: ಶಾಸಕ ಬೈರತಿ ಬಸವರಾಜ್‌ಗೆ ಆರೋಗ್ಯ ಸಮಸ್ಯೆ! – ಅರೆಸ್ಟ್‌ ಆಗ್ತಿದ್ದಂತೆ ಏನಾಯ್ತು?

ಖಾಸಗಿ ಕಾಲೇಜು ವಿದ್ಯಾರ್ಥಿಗಳು ವಿಷ್ಣು ದಾದ ಬ್ಯಾನರ್ ಮುಂದೆ ನಿಂತು ಅಪಮಾನ ಮಾಡಿ ಆ ವಿಡಿಯೋವನ್ನ ದೊಡ್ಡ ಸಾಧನೆ ಎಂಬಂತೆ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದ್ದಂತೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಅವಹೇಳನಕಾರಿ ಕೃತ್ಯದ ವಿರುದ್ಧ ವಿಷ್ಣು ಅಭಿಮಾನಿಗಳು ಜೆಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಬ್ಯಾನರ್‌ಗೆ ಅವಮಾನ ಮಾಡಿದ ವಿದ್ಯಾರ್ಥಿಗಳನ್ನ ಪತ್ತೆ ಮಾಡಿ ಠಾಣೆಗೆ ಕರೆತಂದಿದ್ದಾರೆ.

ಅಪ್ರಾಪ್ತ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ, ತಪ್ಪೊಪ್ಪಿಗೆ ಪತ್ರ ಬರೆಯಿಸಿಕೊಂಡು ಕಳುಹಿಸಲಾಗಿದೆ. ತಮ್ಮ ಮಕ್ಕಳು ಮಾಡಿದ ತಪ್ಪಿಗೆ ಪೋಷಕರು ವಿಷ್ಣು ಅಭಿಮಾನಿಗಳ ಹಾಗೂ ಸಾರ್ವಜನಿಕರ ಕ್ಷಮೆಯಾಚಿಸಿದ್ದಾರೆ.

ನಟ ವಿಷ್ಣುವರ್ಧನ್ ನಿಧನರಾದಾಗ ಈ ಚೈಲ್ಡ್ ಗಳು ಇನ್ನೂ ಬಾಯಲ್ಲಿ ನಿಪ್ಪಲ್ ಇಟ್ಟುಕೊಂಡಿದ್ರು ಅನಿಸುತ್ತೆ. ಅವರ ಘನತೆ, ಗೌರವ ಮತ್ತು ಕನ್ನಡ ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆಯ ಬಗ್ಗೆ ಈ ಚೈಲ್ಡ್ ಚಪಾತಿಗಳಿಗೆ ಕನಿಷ್ಠ ಜ್ಞಾನಕೂಡ ಇಲ್ಲ‌. ಒಬ್ಬ ವ್ಯಕ್ತಿಯ ಸಾಧನೆ ಹಾಗೂ ಅವರು ಗಳಿಸಿದ ಗೌರವದ ಬಗ್ಗೆ ಗೊತ್ತಿಲ್ಲದಿದ್ದರೆ, ಅದನ್ನು ಕೇಳಿ ಅಥವಾ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಅದರಲ್ಲೂ ಕನ್ನಡಿಗರೇ ಇಂತಹ ಕೃತ್ಯ ಎಸಗಿರುವುದು ದೊಡ್ಡ ದುರಂತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿಗಳು ಕೈಯಲ್ಲಿ ತಿಂಡಿ ಹಿಡಿದು ತಿನ್ನುತ್ತಾ, ಬಾಯಿ ತೆರೆಯುವಂತಹ ಸನ್ನೆಗಳನ್ನ ಮಾಡುತ್ತಾ ವಿಷ್ಣು ಬ್ಯಾನರ್‌ಗೆ ಅವಹೇಳನ ಮಾಡಿದ್ದಾರೆ.

Shwetha M