ಶ್ರೀಲಂಕಾದ ಅಶೋಕ ವನದಲ್ಲಿ ಸೀತಾ ಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಯ ರಾಮ ಮಂದಿರಕ್ಕೆ ಆಮದು!

ಶ್ರೀಲಂಕಾದ ಅಶೋಕ ವನದಲ್ಲಿ ಸೀತಾ ಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಯ ರಾಮ ಮಂದಿರಕ್ಕೆ ಆಮದು!

ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಕಾಲ ಹತ್ತಿರವಾಗುತ್ತಿದೆ. ಅಯೋಧ್ಯೆ ರಾಮಮಂದಿರದ ನಿರ್ಮಾಣ ಕಾರ್ಯ ಕೊನೆಯ ಹಂತಕ್ಕೆ ತಲುಪಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಭವ್ಯ ದೇಗುಲ ಜನವರಿ 22ರಂದು ಲೋಕಾರ್ಪಣೆಯಾಗಲಿದ್ದು, ಅಂದೇ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಇದೀಗ ಶ್ರೀಲಂಕಾದ ಅಶೋಕ ವನದಲ್ಲಿ ಸೀತಾ ಮಾತೆ ಕುಳಿತಿದ್ದ ಕಲ್ಲನ್ನು ಅಯೋಧ್ಯೆಗೆ ತರಲಾಗಿದೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ 10 ಕೋಟಿ ಹಿಂದೂ ಕುಟುಂಬಕ್ಕೆ ಆಹ್ವಾನ!

ಹೌದು,  ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ರಾಮ ಮಂದಿರಕ್ಕೆ ಶ್ರೀಲಂಕಾದ ಸೀತಾ ಇಲಿಯ (ಅಶೋಕ ವಾಟಿಕಾ) ಎಂಬಲ್ಲಿಂದ ಸೀತಾ ಮಾತೆ ಕುಳಿತಿದ್ದ ಕಲ್ಲೊಂದನ್ನು ಆಮದು ಮಾಡಿಕೊಳ್ಳಲಾಗಿದೆ. ಈ ಕಲ್ಲನ್ನು ಶ್ರೀಲಂಕಾದ ಏರ್‌ಲೈನ್ಸ್ ನಲ್ಲಿ ಅಯೋಧ್ಯೆಗೆ ತರಲಾಗಿದ್ದು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಖುದ್ದಾಗಿ ಆಗಮಿಸಿ ಭಕ್ತಿಯಿಂದ ಸ್ವೀಕರಿಸಿದರು.

ಕಲ್ಲಿನ ಹಿನ್ನೆಲೆ ಏನು?

ಸೀತೆಯನ್ನು ಅಪಹರಿಸಿದ್ದ ರಾವಣ, ಆಕೆಯನ್ನು ಅಶೋಕ ವಾಟಿಕಾದಲ್ಲಿ ಬಂಧನದಲ್ಲಿ ಇರಿಸಿದ್ದ. ಈ ಹಿನ್ನೆಲೆಯಲ್ಲಿ ಸೀತಾ ಮಾತೆ ತಂಗಿದ್ದ ಜಾಗದಿಂದ ಕಲ್ಲೊಂದನ್ನು ತಂದು ಅಯೋಧ್ಯೆ ರಾಮ ಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ.

Shwetha M