ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ನಿಯಮ ಉಲ್ಲಂಘಿಸಿದರೆ ಫಾಸ್ಟ್‌ಟ್ಯಾಗ್‌ ಮೂಲಕವೇ ದಂಡ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ನಿಯಮ ಉಲ್ಲಂಘಿಸಿದರೆ ಫಾಸ್ಟ್‌ಟ್ಯಾಗ್‌ ಮೂಲಕವೇ ದಂಡ

ಬೆಂಗಳೂರು: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ದಿನೇ ದಿನೆ ಅಪಘಾತ ಹೆಚ್ಚಾಗುತ್ತಿದೆ. ಹೆದ್ದಾರಿಯಲ್ಲಿ ಸಂಚಾರ ಆರಂಭವಾದಾಗಿಂದ ನೂರಾರು ಅಪಘಾತಗಳು ಸಂಭವಿಸಿವೆ. ಹಲವು ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಪೊಲೀಸ್‌ ಇಲಾಖೆ ಅಪಘಾತಗಳನ್ನು ತಡೆಗಟ್ಟಲು ಮುಂದಾಗಿದ್ದು, ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ನಿಗದಿಗಿಂತ ವೇಗವಾಗಿ ವಾಹನ ಚಾಲನೆ ಮಾಡುವವರು, ಹೆದ್ದಾರಿಯಲ್ಲಿ ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸುವವರಿಗೆ ಇನ್ನು ಮುಂದೆ ದಂಡ ಬೀಳಲಿದೆ.

ಹೆದ್ದಾರಿಯಲ್ಲಿ ಅಪಘಾತ ತಡೆ, ವೇಗ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ನಿಯಮಗಳ ಪಾಲನೆಗಾಗಿ ಪೊಲೀಸ್‌ ಇಲಾಖೆ ಹಾಗೂ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದಂಡ ವಿಧಿಸಲು ಮುಂದಾಗಿದೆ. ಹೆದ್ದಾರಿಯಲ್ಲಿ ನಿಯಮ ಉಲ್ಲಂಘಿಸಿದರೆ ಪೊಲೀಸರು ಬಂದು ದಂಡ ಹಾಕುವುದಿಲ್ಲ. ಬದಲಿಗೆ ಫಾಸ್ಟ್‌ಟ್ಯಾಗ್‌ ಮೂಲಕವೇ ದಂಡ ಹಣ ಕಡಿತವಾಗಲಿದೆ. ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳ ಮಾಲೀಕರ ಮನೆಗೆ ನೋಟಿಸ್‌ ಬರಲಿದೆ ಎಂದು ಎಡಿಜಿಪಿ ಅಲೋಕ್‌ಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ: ಪೌರ ಕಾರ್ಮಿಕ ಮಹಿಳೆಯರಿಗೆ ಒಲಿದ ಅದೃಷ್ಟ ಲಕ್ಷ್ಮೀ – ಲಾಟರಿಯಲ್ಲಿ 10 ಕೋಟಿ ಗೆದ್ದರು

ನಿಯಮ ಉಲ್ಲಂಘಿಸಿದವರ ಮೇಲೆ ಕಣ್ಣಿಡಲು ಹೆದ್ದಾರಿ ಪ್ರಾಧಿಕಾರ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದೆ.  ನಗರದ ಹೊರವಲಯದ ಶ್ರೀನಿವಾಸಪುರ ಬಳಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಳವಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಇದರ ಆಧಾರದ ಮೇಲೆ ಜಿಲ್ಲೆ ವ್ಯಾಪ್ತಿಯಲ್ಲಿ 30 ಪ್ರತ್ಯೇಕ ಸ್ಥಳಗಳಲ್ಲಿ ಕ್ಯಾ ಮೆರಾಗಳ ಅಳವಡಿಕೆಗೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಈವರೆಗೆ ಸ್ಪೀಡ್‌ ಹಂಟರ್‌ ಯಂತ್ರದ ಮೂಲಕ ಅತಿವೇಗವಾಗಿ ಸಂಚರಿಸುವ ವಾಹನಗಳನ್ನು ಗುರುತಿಸಿ ದಂಡ ಹಾಕಲಾಗುತ್ತಿತ್ತು. ಓವರ್‌ ಸ್ಪೀಡ್‌ನಲ್ಲಿ ಸಂಚರಿಸುವ ವಾಹನಗಳ ನೋಂದಣಿ ಸಂಖ್ಯೆಯನ್ನು ಸ್ಪೀಡ್‌ ಹಂಟರ್‌ ಯಂತ್ರದ ಮೂಲಕ ಕ್ಯಾಪ್ಚರ್‌ ಮಾಡಿ, ಟೋಲ್‌ಪ್ಲಾಜಾಗೆ ಮಾಹಿತಿ ನೀಡಲಾಗುತ್ತಿತ್ತು. ಅಲ್ಲಿ ದಂಡ ಮೊತ್ತ ಕಟ್ಟಿಸಿಕೊಳ್ಳಲಾಗುತ್ತಿತ್ತು. ಎಕ್ಸ್‌ಪ್ರೆಸ್‌ ವೇನಲ್ಲಿ150-160 ಕಿ.ಮೀ. ವೇಗದಲ್ಲಿ ಸಂಚರಿಸಬಹುದೆಂಬ ಮಾತುಗಳು ಆರಂಭದಲ್ಲಿ ಕೇಳಿ ಬಂದಿದ್ದವು. ಅದಕ್ಕಾಗಿಯೇ ಮುಖ್ಯರಸ್ತೆ ಮತ್ತು ಸರ್ವಿಸ್ ರಸ್ತೆಗಳ ನಡುವೆ ಫೆನ್ಸಿಂಗ್‌ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಹೀಗಾಗಿ ಜನರು ವೇಗವಾಗಿ ಸಂಚರಿಸಲಾರಂಭಿಸಿದರು. ಪರಿಣಾಮ ಅಪಘಾತಗಳ ಸಂಖ್ಯೆ ಹೆಚ್ಚಾಯಿತು. ಹೆದ್ದಾರಿಯ ಹಳೆಯ ರಸ್ತೆಗಿಂತ ಎಕ್ಸ್‌ಪ್ರೆಸ್‌ ವೇನಲ್ಲಿಅಪಘಾತಗಳು ಹೆಚ್ಚಾಗಿವೆ. ಅಪಘಾತಗಳ ಸಂಖ್ಯೆ ಹೆಚ್ಚಾದಾಗ 100 ಕಿ.ಮೀ. ವೇಗದಲ್ಲಿ ವಾಹನಗಳ ಸಂಚಾರಕ್ಕೆ ಎಕ್ಸ್‌ಪ್ರೆಸ್‌ ವೇ ವಿನ್ಯಾಸಗೊಳಿಸಲಾಗಿದೆ. ಅದಕ್ಕಿಂತ ವೇಗವಾಗಿ ಸಂಚರಿಸಲು ರಸ್ತೆ ಯೋಗ್ಯವಾಗಿಲ್ಲ ಎಂಬ ಮಾಹಿತಿಯನ್ನು ಪ್ರಾಧಿಕಾರದ ಅಧಿಕಾರಿಗಳು  ನೀಡಿದ್ದಾರೆ ಎಂದು ಅಲೋಕ್‌ಕುಮಾರ್‌ ಹೇಳಿದ್ದಾರೆ.

ಎಕ್ಸ್‌ಪ್ರೆಸ್‌ ವೇಯ ಮೂರು ಮಾರ್ಗಗಳಲ್ಲಿ ಸಂಚರಿಸುವ ವಾಹನಗಳ ವೇಗವನ್ನು ಗುರುತಿಸಲು ಶ್ರೀನಿವಾಸಪುರ ಬಳಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವ ಮಾರ್ಗದಲ್ಲಿ ಮೂರು ಲೈನ್‌ಗಳಿಗೂ ಒಂದೊಂದು ಕ್ಯಾಮೆರಾಗಳು ಹಾಗೂ ಯಂತ್ರವೊಂದನ್ನು ಅಳವಡಿಸಲಾಗಿದೆ. ಇಲ್ಲಿ ವಾಹನಗಳ ವೇಗದ ಪ್ರಮಾಣ ಡಿಸ್‌ಪ್ಲೇ ಆಗುತ್ತಿದೆ. ವೇಗಮಿತಿ ದಾಟುತ್ತಿದ್ದಂತೆ ವಾಹನದ ಫಾಸ್ಟ್‌ಟ್ಯಾಗ್‌ ಮೂಲಕವೇ ದಂಡದ ಮೊತ್ತ ಕಡಿತಗೊಂಡು ಸರಕಾರದ ಖಜಾನೆ ಸೇರಲಿದೆ. ಈ ನಿಟ್ಟಿನಲ್ಲಿಯೋಜನೆ ರೂಪಿಸಿರುವ ಪೊಲೀಸ್‌ ಇಲಾಖೆಯು ಈ ಸಂಬಂಧ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಒನ್‌ವೇಯಲ್ಲಿ ಸಂಚಾರ ಮಾಡುವವರ ವಾಹನ ಫೋಟೋ ಕೂಡ ಪೊಲೀಸರಿಗೆ ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ. ನಿಯಮ ಉಲ್ಲಂಘಿಸಿದ ವಾಹನದಲ್ಲಿ ಫಾಸ್ಟ್‌ಟ್ಯಾಗ್‌ ಇಲ್ಲದಿದ್ದರೆ, ಎಂಟ್ರಿ/ಎಕ್ಸಿಟ್‌ ಮೂಲಕ ತಪ್ಪಿಸಿಕೊಂಡರೆ ವಾಹನದ ಸಂಖ್ಯೆ ಹಾಗೂ ಫೋಟೋವನ್ನು ಸ್ಥಳೀಯ ಪೊಲೀಸರಿಗೆ ತಲುಪಿಸುವ ವ್ಯವಸ್ಥೆಯಾಗುತ್ತಿದೆ. ಬಳಿಕ ಮಾಲೀಕರ ವಿಳಾಸಕ್ಕೆ ಬಿಲ್‌ ಕಳುಹಿಸಿ ದಂಡ ವಸೂಲಿ ಮಾಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಹೆದ್ದಾರಿಯಲ್ಲಿ ನಿಯಮ ಉಲ್ಲಂಘನೆ ಸಂಬಂಧ ಫಾಸ್ಟ್‌ಟ್ಯಾಗ್‌ ಮೂಲಕ ಸ್ಥಳದಲ್ಲಿಯೇ ದಂಡದ ಹಣ ಸರಕಾರಕ್ಕೆ ಪಾವತಿಯಾಗುವ ಸಂಬಂಧ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಒನ್‌ವೇಯಲ್ಲಿ ಸಂಚಾರ ಹಾಗೂ ನಿಯಮ ಉಲ್ಲಂಘಿಸಿ ತಪ್ಪಿಸಿಕೊಳ್ಳುವ ವಾಹನದ ಮಾಹಿತಿ ಫೋಟೋ ಸಹಿತ ಸಿಗುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

suddiyaana