ನೂತನ ಸಂಸತ್‌ ಭವನ ಉದ್ಘಾಟನೆ – ಕೇಂದ್ರದಿಂದ 75 ರೂಪಾಯಿಯ ವಿಶೇಷ ನಾಣ್ಯ!

ನೂತನ ಸಂಸತ್‌ ಭವನ ಉದ್ಘಾಟನೆ – ಕೇಂದ್ರದಿಂದ 75 ರೂಪಾಯಿಯ ವಿಶೇಷ ನಾಣ್ಯ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೂತನ ಸಂಸತ್‌ ಭವನ ನಿರ್ಮಾಣಗೊಂಡಿದ್ದು, ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ. ನೂತನ ಸಂಸತ್ ಭವನ  ಉದ್ಘಾಟನೆಯ ಸ್ಮರಣಾರ್ಥ 75 ರೂ.ಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಸ್ವತಂತ್ರ ಭಾರತಕ್ಕೆ 75 ವರ್ಷದ ಸಂಭ್ರಮ. ಹೀಗಾಗಿ ಅಮೃತ ಕಾಲವಾಗಿ ಭಾರತ ಆಚರಿಸುತ್ತಿದೆ. ಇದೇ ಅಮೃತಕಾಲದಲ್ಲಿ ಭಾರತದ ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯಿಸಿಕೊಂಡಿರುವ ಸಂಸತ್ ಭವನದ ಹೊಸ ಕಟ್ಟಡ ಉದ್ಘಾಟನೆಗೊಳ್ಳುತ್ತಿದೆ. ಈ ವಿಶೇಷ ಸಂದರ್ಭ ಸ್ಮರಣೀಯವಾಗಿಸಲು ಕೇಂದ್ರ ಸರ್ಕಾರ 75 ರೂಪಾಯಿ ನಾಣ್ಯ ಬಿಡುಗಡೆ ಮಾಡುತ್ತಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಮೋದಿಯಿಂದ ಸಂಸತ್ ಭವನ ಉದ್ಘಾಟನೆಗೆ ವಿರೋಧ – ರಾಷ್ಟ್ರಪತಿಯಿಂದ ಲೋಕಾರ್ಪಣೆಗೆ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿರುವ 75 ರೂ.ಯ ವಿಶೇಷ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದೆ. ಅದರ ಕೆಳಗಡೆ ‘ಸತ್ಯಮೇವ ಜಯತೆ’ ಎಂದು ಬರೆಯಲಾಗುತ್ತದೆ. ಎಡಭಾಗದಲ್ಲಿ ‘ಭಾರತ್’ ಎಂದು ದೇವನಾಗರಿ ಲಿಪಿ ಹಾಗೂ ಬಲ ಭಾಗದಲ್ಲಿ ‘ಇಂಡಿಯಾ’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ. ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂ. ಚಿಹ್ನೆಯೊಂದಿಗೆ 75 ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆಯಲಾಗುತ್ತದೆ. ನಾಣ್ಯದ ಇನ್ನೊಂದು ಬದಿಯಲ್ಲಿ ನೂತನ ಸಂಸತ್ತಿನ ಸಂಕೀರ್ಣದ ಚಿತ್ರವನ್ನು ಹೊಂದಿರಲಿದೆ. ‘ಸಂಸದ್ ಸಂಕುಲ್’ ಎಂದು ಅದರ ಮೇಲ್ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಹಾಗೂ ‘ಪಾರ್ಲಿಮೆಂಟ್ ಕಾಂಪ್ಲೆಕ್ಸ್’ ಎಂದು ಇಂಗ್ಲಿಷ್‌ನಲ್ಲಿ ಅದರ ಕೆಳ ಭಾಗದಲ್ಲಿ ಬರೆಯಲಾಗುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

75 ರೂಪಾಯಿಯ ವಿಶೇಷ ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ. ವ್ಯಾಸವನ್ನು ಹೊಂದಿರಲಿದೆ. ಅದರ ಅಂಚುಗಳ ಉದ್ದಕ್ಕೂ 200 ಸರಣಿಗಳನ್ನು ಹೊಂದಿರುತ್ತದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಬಳಸಿ ಈ ನಾಣ್ಯವನ್ನು ತಯಾರಿಸಲಾಗುತ್ತಿದ್ದು, ಇದು 35 ಗ್ರಾಂ ತೂಗಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಸುಮಾರು 25 ಪಕ್ಷಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ 20ಕ್ಕೂ ಅಧಿಕ ವಿರೋಧ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ತೃಣಮೂಲ, ಸಮಾಜವಾದಿ ಪಾರ್ಟಿ ಸೇರಿದಂತೆ ಹಲವು ಪಕ್ಷಗಳು ಉದ್ಘಾಟನೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ಅಷ್ಟೇ ಅಲ್ಲದೇ ನೂತನ ಸಂಸತ್ತನ್ನ ರಾಷ್ಟ್ರಪತಿಗಳಿಂದ ಉದ್ಘಾಟಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

suddiyaana