ಅಮ್ಮನಿಗೆ ಕಡಿದ ಹಾವಿನ ವಿಷ ಬಾಯಿಂದ ಕಚ್ಚಿ ಹೊರತೆಗೆದ ಮಗಳು

ಅಮ್ಮನಿಗೆ ಕಡಿದ ಹಾವಿನ ವಿಷ ಬಾಯಿಂದ ಕಚ್ಚಿ ಹೊರತೆಗೆದ ಮಗಳು

ಹಾವು ಕಚ್ಚಿದಾಗ ಅಲ್ಲೇ ಪಕ್ಕದಲ್ಲಿದ್ದವರು ಬಂದು ಹಾವಿನಿಂದ ಕಚ್ಚಿಸಿಕೊಂಡವರನ್ನು ರಕ್ಷಿಸುತ್ತಾರೆ. ಇನ್ನು ಹಾವು ಕಚ್ಚಿದೆ ಅಂತಾ ವಿಚಾರ ತಿಳಿದಾಗ ತಾವಿದ್ದ ಸ್ಥಳದಿಂದ ಓಡೋಡಿ ಬಂದು ಹಾವಿನ ವಿಷವನ್ನು ಬಾಯಿಯಿಂದ ಕಚ್ಚಿ ಹೊರ ತೆಗೆಯುವುದನ್ನು ಸಿನಿಮಾ, ಸೀರಿಯಲ್ ಗಳಲ್ಲಿ ನೋಡಿರುತ್ತೇವೆ. ಇಲ್ಲೊಬ್ಬಳು ಯುವತಿ ಹಾವಿನ ಕಡಿತಕ್ಕೆ ಒಳಗಾದ ತಾಯಿಯನ್ನು ರಕ್ಷಿಸಿದ್ದಾಳೆ.

ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ಈ ಘಟನೆ ನಡೆದಿದೆ. ಕೆಯ್ಯೂರಿನ ತನ್ನ ಮನೆಯ ಸನಿಹದಲ್ಲೇ ಇರುವ ತಾಯಿ ಮನೆಗೆ ಶ್ರಮ್ಯಾಳ ತಾಯಿ ಮಮತಾ ರೈ ಹೋಗಿದ್ದರು. ಅಲ್ಲಿ ಪಂಪ್‌ ಸ್ವಿಚ್‌ ಹಾಕಲೆಂದು ಮಮತಾ ರೈ ಅವರು ತೋಟಕ್ಕೆ ತೆರಳಿದ್ದರು. ಸ್ವಿಚ್‌ ಹಾಕಿ ಮರಳಿ ಬರುತ್ತಿರುವಾಗ ಕೆರೆಯ ಪಕ್ಕದಲ್ಲಿದ್ದ ನಾಗರಹಾವನ್ನು ತುಳಿದಿದ್ದಾರೆ. ಈ ವೇಳೆ ಹಾವು ಅವರಿಗೆ ಕಚ್ಚಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧೆ ಮಾಡುವಂತೆ ಪಟ್ಟು – ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ!

ತತ್‌ಕ್ಷಣ ಮಮತಾ ರೈ ಮನೆಗೆ ಮರಳಿ ಕೆಲಸದಾಳಿನ ಸಹಾಯದಿಂದ ಹಾವು ಕಚ್ಚಿದ ಸ್ಥಳದಿಂದ ಮೇಲ್ಭಾಗಕ್ಕೆ ವಿಷ ಏರದಂತೆ ಬೈ ಹುಲ್ಲು ಕಟ್ಟಿದ್ದರು. ಆದರೆ ಇದು ಹೆಚ್ಚು ಪ್ರಯೋಜನಕಾರಿ ಆಗಲಾರದು ಎಂದರಿತ ಮಗಳು ಶ್ರಮ್ಯಾ ರೈ ಹಾವು ಕಚ್ಚಿದ ಸ್ಥಳದಲ್ಲಿ ಬಾಯಿಯೂರಿ, ಹೀರಿ ವಿಷ ತೆಗೆದಿದ್ದಾರೆ. ಅದಾದ ಬಳಿಕ ಮಮತಾ ರೈ ಅವರನ್ನು ಆಸ್ಪತ್ರೆಗೆ ಕರೆದೋಯ್ದಿದ್ದಾರೆ. ಈ ವೇಳೆ ವೈದ್ಯರು ಮಮತಾ ಅವರನ್ನು ಪರೀಕ್ಷಿಸಿದ್ದು, ಯಾವುದೇ ಪ್ರಾಣಾಪಾಯ ಇಲ್ಲ ಎಂದು ತಿಳಿಸಿದ್ದಾರೆ.

‘ಹಾವು ಕಚ್ಚಿದೆ ಎಂದು ಹೇಳಿದರು. ಬೈಹುಲ್ಲು ಕಟ್ಟಿದರೂ ನನಗೆ ವಿಶ್ವಾಸ ಮೂಡದ ಕಾರಣ ಬಾಯಿಯಿಂದಲೇ ಹೀರಿ ವಿಷ ತೆಗೆದು ಹಾಕಿದೆ. ಆಸ್ಪತ್ರೆಯಲ್ಲಿ ವೈದ್ಯರು ವಿಷ ತೆಗೆದದ್ದು ಒಳ್ಳೆಯದಾಯಿತು ಎಂದಿದ್ದಾರೆ. ಇದನ್ನು ನಾನು  ಸಿನೆಮಾಗಳಲ್ಲಿ ನೋಡಿ, ತಿಳಿದಿದ್ದ ಮಾಹಿತಿಯ ಆಧಾರದಲ್ಲಿ ಪ್ರಥಮ ಚಿಕಿತ್ಸೆ ನಡೆಸುವ ಧೈರ್ಯ ಮಾಡಿದೆ’ ಎಂದು ಶ್ರಮ್ಯಾ ರೈ ಹೇಳಿದ್ದಾರೆ.

ಐದು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಶ್ರಮ್ಯಾಳ ಸಮಯಪ್ರಜ್ಞೆಯಿಂದಾಗಿ ಮಮತಾ ರೈ ಅವರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ. ಶ್ರಮ್ಯಾಳ ಈ ಕಾರ್ಯಕ್ಕೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

suddiyaana