ತಂಗಿ ಲಿವರ್‌ ದಾನ ಮಾಡಿದರೂ ಬದುಕುಳಿಯಲಿಲ್ಲ ಅಕ್ಕ! – ವಿಧಿಯ ಆಟಕ್ಕೆ ಬಲಿಯಾಯ್ತು ಮುಗ್ಧ ಜೀವ

ತಂಗಿ ಲಿವರ್‌ ದಾನ ಮಾಡಿದರೂ ಬದುಕುಳಿಯಲಿಲ್ಲ ಅಕ್ಕ! – ವಿಧಿಯ ಆಟಕ್ಕೆ ಬಲಿಯಾಯ್ತು ಮುಗ್ಧ ಜೀವ

ಇದೊಂದು ಪುಟ್ಟ ಕುಟುಂಬ.. ಎಲ್ಲವೂ ಚೆನ್ನಾಗಿಯೇ ಇತ್ತು. ಅಕ್ಕ, ಅಮ್ಮ, ತಂಗಿ ಖುಷಿ ಖುಷಿಯಾಗಿ ಜೀವನ ನಡೆಸ್ತಿದ್ರು. ಅದ್ಯಾರ ಕಣ್ಣು ಬಿತ್ತೊ ಗೊತ್ತಿಲ್ಲ. ಆರೋಗ್ಯದಿಂದ ಮನೆ ತುಂಬಾ ಓಡಾಡುತ್ತಿದ್ದ ಅಕ್ಕ ಅನಾರೋಗ್ಯಕ್ಕೆ ತುತ್ತಾದಳು. ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಅಕ್ಕನನ್ನು ಉಳಿಸಲು ತಂಗಿ ಮಾಡಿದ ಕೆಲಸ ಅಷ್ಟಿಷ್ಟಲ್ಲ. ಆಕೆಯ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ತಂಗಿ ತನ್ನ ಲಿವರ್‌ ಅನ್ನೇ ದಾನ ಮಾಡಿದ್ದಾಳೆ. ದುರಾದೃಷ್ಟವಶಾತ್‌ ಅಕ್ಕ ಬದುಕಿ ಬರಲಿಲ್ಲ. ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ.

ಇದನ್ನೂ ಓದಿ: ಮೂರು ದಿನ ಮೆಟ್ರೋ ಸಂಚಾರ ಸ್ಥಗಿತ – ಹಸಿರು ಮಾರ್ಗದ ಪ್ರಯಾಣದಲ್ಲಿ ವ್ಯತ್ಯಯ

ಈ ಹೃದಯವಿದ್ರಾವಕ ಘಟನೆ ಪುತ್ತೂರಿನ ನೆಹರು ನಗರದಲ್ಲಿ ನಡೆದಿದೆ. ಐಶ್ವರ್ಯ(29) ಮೃತ ಯುವತಿ. ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಅಕ್ಕನ ಪ್ರಾಣ ಕಾಪಾಡಲು ತಂಗಿ ತನ್ನ ಲಿವರ್ ದಾನ ಮಾಡಿದ್ದು ದುರದೃಷ್ಟವಶಾತ್ ಅಕ್ಕ ಹೃದಯಾಘಾತದಿಂದ ಪ್ರಾಣಬಿಟ್ಟಿದ್ದಾರೆ. ಅಕ್ಕನನ್ನು ಕಾಪಾಡಬೇಕೆನ್ನುವ ತಂಗಿಯ ಸಂಪೂರ್ಣ ಪ್ರಯತ್ನ ವಿಫಲವಾಗಿದೆ.

ನೆಹರು ನಗರದ ನಿವಾಸಿ ದಿವಂಗತ ಆನಂದ ನಾಯ್ಕ ಅವರ ಹಿರಿಯ ಪುತ್ರಿ ಐಶ್ವರ್ಯ ಅವರು ಜಾಂಡೀಸ್‌ನಿಂದ ಬಳಲುತ್ತಿದ್ದರು. ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಐಶ್ವರ್ಯಾಗೆ ಲಿವರ್ ಡ್ಯಾಮೇಜ್ ಆಗಿರುವುದು ತಿಳಿದುಬಂದಿದೆ. ಹೀಗಾಗಿ ಯಕೃತ್ತಿನ ಕಸಿ ಅಗತ್ಯ ಎಂದು ವೈದ್ಯರು ನಿರ್ಧರಿಸಿದರು. ಐಶ್ವರ್ಯಾ ಅವರ ತಾಯಿ ಲಿವರ್ ದಾನ ಮಾಡಲು ಸಿದ್ಧರಿದ್ದರು, ಆದರೆ ಐಶ್ವರ್ಯಾ ಅವರ ತಂಗಿ ಅನುಷಾ ತನ್ನ ಸಹೋದರಿಯ ಜೀವ ಉಳಿಸಲು ತನ್ನ ಸ್ವಂತ ಲಿವರ್ ದಾನ ಮಾಡುವ ಧೈರ್ಯದ ನಿರ್ಧಾರವನ್ನು ತೆಗೆದುಕೊಂಡರು. ಕಸಿ ಪ್ರಕ್ರಿಯೆಗಾಗಿ ಇಬ್ಬರೂ ಸಹೋದರಿಯರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಂತವೆಂದರೆ, ಯಕೃತ್ತಿನ ಕಸಿ ಸಮಯದಲ್ಲಿ ಐಶ್ವರ್ಯಾ ಹೃದಯಾಘಾತಕ್ಕೆ ಒಳಗಾಗಿ ಪ್ರಾಣಬಿಟ್ಟಿದ್ದಾರೆ.

ಲಿವರ್ ದಾನ ಪ್ರಕ್ರಿಯೆಗೆ ಒಳಗಾದ ಅನುಷಾ ಪ್ರಸ್ತುತ ಬೆಂಗಳೂರಿನ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಜಿನಿಯರಿಂಗ್ ಪದವೀಧರರಾದ ಐಶ್ವರ್ಯಾ ಅವರ ಚಿಕಿತ್ಸೆಗೆ 40 ಲಕ್ಷ ರೂಪಾಯಿ ಖರ್ಚಾಗಿತ್ತು. ವೈದ್ಯಕೀಯ ವೆಚ್ಚವನ್ನು ಭರಿಸಲು ಸಹಾಯ ಮಾಡುವಂತೆ ಕುಟುಂಬಸ್ಥರು ಸಾಮಾಜಿಕ ಮಾಧ್ಯಮದ ಮೂಲಕ ಸಹಾಯವನ್ನು ಕೋರಿದ್ದರು. ಆದರೆ ತಂಗಿ ತಾಯಿಯನ್ನು ಬಿಟ್ಟು ಐಶ್ವರ್ಯಾ ಇಹಲೋಕ ತ್ಯಜಿಸಿದ್ದಾರೆ. ಅಕ್ಕನನ್ನು ಉಳಿಸುವ ತಂಗಿಯ ಯತ್ನ ವಿಫಲವಾಗಿದೆ.

Shwetha M