ಶಿರಸಿ -ಕುಮಟಾ ಹೆದ್ದಾರಿ ಬಂದ್‌ ಬರೋಬ್ಬರಿ 7 ತಿಂಗಳು ಬಂದ್‌! – ಬದಲಿ ಮಾರ್ಗ ಯಾವುದು?

ಶಿರಸಿ -ಕುಮಟಾ ಹೆದ್ದಾರಿ ಬಂದ್‌ ಬರೋಬ್ಬರಿ 7 ತಿಂಗಳು ಬಂದ್‌! – ಬದಲಿ ಮಾರ್ಗ ಯಾವುದು?

ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಳು ತಿಂಗಳ ಕಾಲ ಸಂಪೂರ್ಣ ಬಂದ್‌ ಅಗಲಿದೆ. ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ನವೆಂಬರ್‌ 1 ರಿಂದ ಸಂಪೂರ್ಣ ಬಂದ್‌ ಮಾಡಲು ನಿರ್ಧರಿಸಲಾಗಿದೆ.

ಶಿರಸಿ-ದೇವಿಮನೆ ಘಟ್ಟದ ವ್ಯಾಪ್ತಿಯಲ್ಲಿನ ಸೇತುವೆ ಹಾಗೂ ದೇವಿಮನೆ ಘಟ್ಟದಲ್ಲಿರಸ್ತೆ ಕಾಮಗಾರಿ ನಡೆಸಬೇಕಾದ ಹಿನ್ನೆಲೆ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಲಿದೆ. ಸಹಾಯಕ ಆಯುಕ್ತ ದೇವರಾಜ. ಆರ್‌ ಅವರ ಅಧ್ಯಕ್ಷತೆಯಲ್ಲಿ ಗುತ್ತಿಗೆದಾರ ಕಂಪನಿ ಆರ್‌ಎನ್‌ಎಸ್‌ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ದಸರಾ ಆಯುಧ ಪೂಜೆಗೆ ಅರಿಶಿಣ, ಕುಂಕುಮ, ರಂಗೋಲಿ ನಿಷೇಧಿಸಿದ ಸರ್ಕಾರ !

ಶಿರಸಿ ಕುಮಟಾ ಹೆದ್ದಾರಿ ಬಂದ್ಯಾಕೆ?

ಶಿರಸಿ ಉಪ ವಿಭಾಗ ವ್ಯಾಪ್ತಿಯ 33 ಕಿಮೀಯಲ್ಲಿ 27ಕಿಮೀ ರಸ್ತೆ ಕಾಮಗಾರಿ ಮುಗಿದಿದೆ. ಆದರೆ, ಸಣ್ಣ ಹಾಗೂ ದೊಡ್ಡ ಸೇತುವೆಗಳು ಸೇರಿ ಒಟ್ಟು 9 ಸೇತುವೆಗಳು ಕಾಮಗಾರಿ ನಡೆಯಬೇಕಿದೆ. ಸೇತುವೆ ಕಾಮಗಾರಿ ನಡೆಯುವ ಸಮಯದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿಈ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ.

ಬದಲಿ ಮಾರ್ಗ ಯಾವುದು?

ಶಿರಸಿ -ಕುಮಟಾ ಮಾರ್ಗ ಸಂಪೂರ್ಣ ಬಂದ್‌ ಆಗುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗುತ್ತಿದೆ. ಕುಮಟಾ ಮಾವಿನಗುಂಡಿ ಸಿದ್ದಾಪುರ ಮಾರ್ಗವಾಗಿ, ಅದೇ ರೀತಿ ಅಂಕೋಲಾ ಯಲ್ಲಾಪುರ ಮಾರ್ಗವಾಗಿ ಶಿರಸಿಗೆ ಎಲ್ಲಾ ತರಹದ ವಾಹನ ಸಂಚಾರ ಮಾಡಬಹುದು. ಯಾಣ ಮಾರ್ಗವಾಗಿ ಹಾಗೂ ದೊಡ್ಮನೆ ಘಾಟ್‌ ಮಾರ್ಗವಾಗಿ ಶಿರಸಿಗೆ ಲಘು ವಾಹನಗಳಿಗೆ ಮಾತ್ರ ಅವಕಾಶವಿದೆ .

Shwetha M