ಕೋಲಾರವೇ ಫಿಕ್ಸ್ ಆಗುತ್ತಾ ? -ಜನವರಿ 9ಕ್ಕೆ ಸಿದ್ದರಾಮಯ್ಯ ಕ್ಷೇತ್ರ ಆಯ್ಕೆಗೆ ಸಿಗಲಿದೆಯಾ ಉತ್ತರ ?

ಕೋಲಾರವೇ ಫಿಕ್ಸ್ ಆಗುತ್ತಾ ? -ಜನವರಿ 9ಕ್ಕೆ ಸಿದ್ದರಾಮಯ್ಯ ಕ್ಷೇತ್ರ ಆಯ್ಕೆಗೆ ಸಿಗಲಿದೆಯಾ ಉತ್ತರ ?

ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಸಭೆ ಚುನಾವಣೆಗೆ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಬಾದಾಮಿಯಲ್ಲಿ ನಿಲ್ಲುತ್ತಾರಾ? ವರುಣಾದಲ್ಲಿ ಸ್ಪರ್ಧಿಸುತ್ತಾರಾ? ಇಲ್ಲವೇ ಕೋಲಾರದಲ್ಲಿ ಕಣಕ್ಕಳಿಯುತ್ತಾರಾ? ಎಂಬ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಮಾತ್ರ ಉತ್ತರ ನೀಡಿಲ್ಲ. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದು ಖಚಿತ ಅನ್ನೋ ಮಾತು ಮಾತ್ರ ಬಲವಾಗಿ ಕೇಳಿಬರುತ್ತಿದೆ. ಆದ್ರೆ, ಈ ಗುಟ್ಟು ಜನವರಿ 9ಕ್ಕೆ ರಟ್ಟಾಗುವ ಸಾಧ್ಯತೆಯಿದೆ ಅನ್ನೋ ಮಾತು ಕೇಳಿಬಂದಿದೆ. ಮೊನ್ನೆಯಷ್ಟೇ ಕೆ.ಹೆಚ್. ಮುನಿಯಪ್ಪ ಅವರು ತಮ್ಮ ತಂಡದೊಂದಿಗೆ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ಮಹತ್ವದ ಚರ್ಚೆ ನಡೆಸಿದ್ದಾರೆ. ಸಿದ್ದು ನಿವಾಸಕ್ಕೆ ತಮ್ಮ ತಂಡದೊಂದಿಗೆ ಆಗಮಿಸಿದ ಮುನಿಯಪ್ಪ, ಕೋಲಾರದಿಂದಲೇ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ನಿಲ್ಲಲ್ಲು ಕಷ್ಟವಾಗಿದ್ದೇ ಕೆ.ಹೆಚ್. ಮುನಿಯಪ್ಪ ಬಣ ಮತ್ತು ರಮೇಶ್ ಕುಮಾರ್ ಬಣದ ಮುನಿಸು. ಈಗಾಗಲೇ ರಮೇಶ್ ಕುಮಾರ್ ಬಣ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ. ಕಳೆದ ಬಾರಿ ಜಿಲ್ಲೆಗೆ ಸಿದ್ದು ಭೇಟಿ ನೀಡಿದ್ದಾಗಲೂ ಮುನಿಯಪ್ಪ ದೂರ ಉಳಿದು ತಮ್ಮ ಅಸಮಾಧಾನ ಹೊರಹಾಕಿದ್ದರು. ಆದ್ರೀಗ, ಖುದ್ದು ಮುನಿಯಪ್ಪ ಅವರೇ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಬೆಂಬಲ ನೀಡಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ:  ವಿಧಾನಸೌಧದಲ್ಲಿ ಅನಧಿಕೃತ ಹಣ: “ಎಲ್ಲಾ ಅಕ್ರಮಗಳಿಗೆ ಬೊಮ್ಮಾಯಿ ಶ್ರೀರಕ್ಷೆ”- ಕಾಂಗ್ರೆಸ್ ಟೀಕೆ

ಜನವರಿ 9ರಂದು ಸಿದ್ದರಾಮಯ್ಯ ಮತ್ತೊಮ್ಮೆ ಕೋಲಾರ ಪ್ರವಾಸ ಮಾಡಲಿದ್ದಾರೆ. ಅಂದೇ ಕೋಲಾರದಲ್ಲಿ ಸ್ಪರ್ಧೆ ಬಗ್ಗೆ ಖಚಿತಪಡಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಸದ್ಯ ಕೋಲಾರವೇ ಸಿದ್ದು ಸ್ಪರ್ಧೆಯ ಕ್ಷೇತ್ರ ಎನ್ನುವ ಮಾತುಗಳು ಕೇಳಿಬರ್ತಿದ್ದು, ಜನವರಿ 9ರಂದು ಈ ಊಹಾಪೋಹಗಳಿಗೆ ಅಂತ್ಯ ಸಿಗುತ್ತಾ ಕಾದುನೋಡಬೇಕಿದೆ.

suddiyaana