ಸಿದ್ದರಾಮಯ್ಯನವರೇ ಬೂಟಾಟಿಕೆ ನಿಲ್ಲಿಸಿ.. ಹಿಟ್ಲರ್, ಮುಸಲೋನಿಯವರನ್ನೇ ಮೀರಿಸುವ ಸರ್ವಾಧಿಕಾರಿ ನೀವು! – ಸುನೀಲ್‌ ಕುಮಾರ್‌ ಕಿಡಿ

ಸಿದ್ದರಾಮಯ್ಯನವರೇ ಬೂಟಾಟಿಕೆ ನಿಲ್ಲಿಸಿ.. ಹಿಟ್ಲರ್, ಮುಸಲೋನಿಯವರನ್ನೇ ಮೀರಿಸುವ ಸರ್ವಾಧಿಕಾರಿ ನೀವು! – ಸುನೀಲ್‌ ಕುಮಾರ್‌ ಕಿಡಿ

ಬೆಂಗಳೂರು: ಉಡುಪಿ ಕಾಲೇಜೊಂದರ ಶೌಚಾಲಯದಲ್ಲಿ ಮೂವರು ವಿದ್ಯಾರ್ಥಿನಿಯರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ ಪ್ರಕರಣ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಪ್ರಕರಣ ರಾಜಕೀಯ ತಿರುವು ಪಡೆದಿದ್ದು, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರು ಸಂತ್ರಸ್ತ ವಿದ್ಯಾರ್ಥಿನಿಯ ಪರ ಧ್ವನಿ  ಎತ್ತುವ ಭರದಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಟ್ವೀಟ್‌ ಮಾಡಿದ್ದರು. ಈ ಹಿನ್ನೆಲೆ ಶಕುಂತಲಾ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಕುರಿತು ಮಾಜಿ ಸಚಿವ ವಿ ಸುನಿಲ್‌ ಕುಮಾರ್‌ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ವಿ. ಸುನೀಲ್‌ ಕುಮಾರ್‌, ಸಿದ್ದರಾಮಯ್ಯನವರೇ ಇನ್ನಾದರೂ ನಿಮ್ಮ ಬೂಟಾಟಿಕೆ ನಿಲ್ಲಿಸಿ. ಹಿಟ್ಲರ್, ಮುಸಲೋನಿಯವರನ್ನೇ ಮೀರಿಸುವ ಸರ್ವಾಧಿಕಾರಿ ನೀವು. ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ತ್ರೀ ಸಮಾನತೆ, ಸಂವಿಧಾನದ ಆಶಯ ಎಂಬ ಶಬ್ದಗಳನ್ನು ಬಳಸುವುದಕ್ಕೆ ನೀವು ಅನರ್ಹ. ಸಾಕು ಮಾಡಿ ಸೋಗು ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಿಜೆಪಿ ತೀರ್ಥಹಳ್ಳಿಯ ಹಿಂದೂ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಏಕೆ? – ಕಾಂಗ್ರೆಸ್‌ ಪ್ರಶ್ನೆ 

ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹಿಟ್ಲರ್ ಸರ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾರಂಭಿಸಿದ್ದಾರೆ. ಉಡುಪಿಯಲ್ಲಿ ನೊಂದ ವಿದ್ಯಾರ್ಥಿನಿಯರ ಪರ ಧ್ವನಿ ಎತ್ತಿದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಸಂತ್ರಸ್ತೆಯರ ಪರವಾಗಿ ಧ್ವನಿ ಎತ್ತುವುದು ತಪ್ಪು ಎಂದಾದರೆ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರ ಹಕ್ಕು, ಮಾನ- ಸಮ್ಮಾನದ ಬಗ್ಗೆ ಗೌರವ ಇಲ್ಲವೆಂದು ಅರ್ಥವೇ? ನಿಮ್ಮ ಮನೆಯ ಹೆಣ್ಣು ಮಕ್ಕಳಿಗೂ ಅಪಮಾನವಾದರೆ ಸಹಿಸುತ್ತೀರಾ ಎಂದು ಶಕುಂತಲಾ ಪ್ರಶ್ನಿಸಿದ್ದರಲ್ಲಿ ತಪ್ಪೇನಿದೆ? ದಮ್ಮು, ತಾಕತ್ತಿನ ಬಗ್ಗೆ ವೀರಾವೇಶದಿಂದ ಮಾತನಾಡುವ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪೊಲೀಸರಿಗೆ ಉಡುಪಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವುದಕ್ಕೆ ತಾಕತ್ತಿಲ್ಲ ಎಂದು ಸುನೀಲ್ ಕುಮಾರ್ ಕಿಡಿಕಾರಿದ್ದಾರೆ.

ವಿಡಿಯೋ ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ರಾಜ್ಯದ ಗಮನ ಸೆಳೆದ ರಶ್ಮಿಯವರ ಮನೆಗೆ ರಾತ್ರೋರಾತ್ರಿ ತೆರಳಿ ವಿಚಾರಣಾ ಹಿಂಸೆ ಮಾಡುವ ಪೊಲೀಸರಿಗೆ ಸಹ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರ ಮನೆಗೆ ತೆರಳಿ ವಿಚಾರಣೆ ನಡೆಸುವ ತಾಕತ್ತಿಲ್ಲವೇ? ಟ್ವೀಟ್ ಮಾಡಿದ್ದು ದೊಡ್ಡ ಅಪರಾಧವೊ, ವಿಡಿಯೊ ಮಾಡಿದ್ದು ಅಪರಾಧವೊ ಎಂದು ಪ್ರಶ್ನಿಸಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ, ಹಾಂಡ್ ಗ್ರೆನೈಡ್ ಹಾಗೂ ಸ್ಫೋಟಕಗಳನ್ನು ಮನೆಯಲ್ಲಿಟ್ಟುಕೊಂಡವರನ್ನು ಉಗ್ರರು ಎನ್ನುವುದಕ್ಕೆ ನಿಮಗೆ ಶಕ್ತಿಯಿಲ್ಲ. ಪೊಲೀಸ್ ಠಾಣೆಗೆ ಬೆಂಕಿ ಹಾಕಿದವರು ಅಮಾಯಕರು. ಆದರೆ ಉಡುಪಿ ಕಾಲೇಜಿನಲ್ಲಿ ನಡೆದಿದ್ದು, ತಮಾಷೆ ಪ್ರಕರಣ, ಮಕ್ಕಳಾಟ! ನೀವು ಕರ್ನಾಟಕದ ಗೃಹ ಸಚಿವರೋ ಅಥವಾ ಒಂದು ವರ್ಗಕ್ಕೋ? ಎಂದು ಕುಟುಕಿದ್ದಾರೆ.

suddiyaana