ಒಂದು ಗಾಯ.. ಕ್ಯಾಪ್ಟನ್‌ ಶಿಪ್‌ ಮಿಸ್! –  ತಂಡದಿಂದಲೇ ಹೊರದಬ್ಬಿದ್ದೇಕೆ?
ಶ್ರೇಯಸ್ ಅಯ್ಯರ್ KKR ಹೀರೋ

ಒಂದು ಗಾಯ.. ಕ್ಯಾಪ್ಟನ್‌ ಶಿಪ್‌ ಮಿಸ್! –  ತಂಡದಿಂದಲೇ ಹೊರದಬ್ಬಿದ್ದೇಕೆ?ಶ್ರೇಯಸ್ ಅಯ್ಯರ್ KKR ಹೀರೋ

ಶ್ರೇಯಸ್ ಐಯ್ಯರ್..  ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಸದ್ಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಐಪಿಎಲ್-2024ರ ಕ್ವಾಲಿಫೈಯರ್-1 ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಅಮೋಘ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಐಪಿಎಲ್‌ ನಲ್ಲಿ ಕಪ್ ಗೆಲ್ಲುವ ಎಲ್ಲಾ ಸಾಧ್ಯತೆ ಇದೆ ಅಂತ ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳು ಹೇಳ್ತಿದ್ದಾರೆ.. ಇಂತಹ ಟೈಮಲ್ಲೇ ಶ್ರೇಯಸ್  ವೈಯುಕ್ತಿಕ ವಿಚಾರಗಳು ಭಾರಿ ಸದ್ದು ಮಾಡ್ತಿವೆ.. ಶ್ರೇಯಸ್ ಅಯ್ಯರ್ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿರುವ ಆಟಗಾರ. ಅನೇಕ ಸವಾಲುಗಳನ್ನು ಮೆಟ್ಟಿನಿಂತು ಒಬ್ಬ ಫೈಟರ್ನಂತೆ ಗೆದ್ದು ಬಂದಿದ್ದಾರೆ.. ಅವತ್ತು ಶ್ರೇಯಸ್ ಡೆಲ್ಲಿ‌ಕ್ಯಾಪಿಟಲ್ಸ್‌ನ ನಾಯಕತ್ವ ಕಳೆದುಕೊಂಡಿದ್ದು ಯಾಕೆ? ಇಂದು ಸ್ಟಾರ್ ಆಟಗಾರನಾಗಿ ಮಿಂಚಲು ನೆರವಾಗಿದ್ದು ಯಾರು? ಅಯ್ಯರ್ ಏಳುಬೀಳಿನ ಕತೆ ಇಲ್ಲಿದೆ.

ಇದನ್ನೂ ಓದಿ: ಪಾಂಡ್ಯ ದಾಂಪತ್ಯದಲ್ಲಿ ಬಿರುಕು – ಹಾರ್ದಿಕ್ನ ಶೇ.70 ರಷ್ಟು ಆಸ್ತಿ ನತಾಶಾ ಪಾಲು..?

ಶ್ರೇಯಸ್ ಅಯ್ಯರ್.. ಭರವಸೆಯ ಆಟಗಾರ.  ಶ್ರೇಯಸ್ ಅಯ್ಯರ್ ಸದ್ಯ ಐಪಿಎಲ್ ನಲ್ಲಿ ಮತ್ತೆ ನಾಯಕತ್ವಕ್ಕೆ ಮರಳಿದ್ದಾರೆ.. ಹಿಂದೆ ಡಿಲ್ಲಿ ಕ್ಯಾಪಿಟಲ್ಸ್ ಟೀಂ ಲೀಡ್ ಮಾಡಿದ್ದ ಶ್ರೇಯಸ್ ಈಗ ಕೆಕೆಆರ್ ಗೆ ಕ್ಯಾಪ್ಟನ್ ಆಗಿದ್ದಾರೆ..  ಇದೀಗ ಮತ್ತೊಮ್ಮೆ ತನ್ನ ಕ್ಯಾಪ್ಟನ್ಸಿ ಎಂತಹದ್ದು ಎಂಬುದನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದ್ದಾರೆ. ದಿಗ್ಗಜ ಕ್ರಿಕೆಟರ್ಗಳೇ ಬೇಷ್ ಎನ್ನುವ ರೀತಿ ತಂಡವನ್ನು ಮುನ್ನಡೆಸಿದ್ದಾರೆ. ಪ್ರಶಂಸೆ ಗಿಟ್ಟಿಸಿಗೊಂಡಿದ್ದಾರೆ. ಆದರೆ, ಈ ಯಶಸ್ಸು ಅಷ್ಟು ಸುಲಭಕ್ಕೆ ಸಿಕ್ಕಿದ್ದಲ್ಲ. ಐಪಿಎಲ್ ಇತಿಹಾಸದಲ್ಲಿ ಎರಡು ತಂಡಗಳನ್ನು ಫೈನಲ್‌ಗೇರಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶ್ರೇಯಸ್ ಅಯ್ಯರ್, ಅನೇಕ ಸವಾಲುಗಳನ್ನು ಮೆಟ್ಟಿ ನಿಂತವರು.. ಕೆಕೆಆರ್ ನಾಯಕನಾದ ಬಳಿಕ ಅಯ್ಯರ್ ಎದುರಿಸಿದ ಟೀಕೆ ಅಷ್ಟಿಷ್ಟಲ್ಲ. ಕೆಕೆಆರ್ ನಾಯಕತ್ವದಿಂದ ತೆಗೆದು ಹಾಕಿ ಎಂದು ಕೆಲ ಮಾಜಿ ಕ್ರಿಕೆಟಿಗರ್ಗಳು ಹೇಳಿದ್ದೂ ಇದೆ. ಇದರ ನಡುವೆಯೂ ಅಯ್ಯರ್ ಕ್ರಿಕೆಟ್ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ. ಈ ಯಶೋಗಾಥೆಯ ಹಿಂದೆ ಅಪಾರ ಪರಿಶ್ರಮವೇ ಅಡಗಿದೆ.

ಮೈದಾನದಲ್ಲಿ ಸಮಯೋಚಿತ ಇನ್ನಿಂಗ್ಸ್ ಕಟ್ಟುವ ಅಯ್ಯರ್, ತುಂಬಾ ಹಾರ್ಡ್ವರ್ಕರ್. ಜಿಮ್ನಲ್ಲಿ ಸತತ ಕಸರತ್ತು ನಡೆಸುವ ಈ ಬಲಗೈ ಬ್ಯಾಟ್ಸ್ಮನ್, ದಿನವಿಡೀ ಅಭ್ಯಾಸ ನಡೆಸುತ್ತಾರೆ. ಕ್ರಿಕೆಟ್ ಕಿಟ್ ಹೊತ್ತು ನೆಟ್ಸ್ಗೆ ಹೋದರೆ ಮನೆಗೆ ವಾಪಸ್ಸಾಗುತ್ತಿದ್ದದ್ದು ಸೂರ್ಯ ಮುಳುಗಿದ ಮೇಲೆಯೇ. ಅಯ್ಯರ್ ಅವರ ಈ ಪರಿಶ್ರಮವೇ ಇಂದು ಸ್ಟಾರ್ ಪಟ್ಟ ತಂದು ಕೊಟ್ಟಿದೆ. ಇಷ್ಟಿದ್ದರೂ ಶ್ರೇಯಸ್  ಅಯ್ಯರ್ ಹಲವು ಅವಮಾನ, ಟೀಕೆಗಳಿಗೆ ಒಳಗಾಗಬೇಕಾಯ್ತು.

2020ರಲ್ಲಿ ತಂಡವನ್ನು ಫೈನಲ್ಗೇರಿಸಿದ್ದರೂ ಅಯ್ಯರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಕೈಬಿಟ್ಟಿತ್ತು. ಒಂದೇ ಒಂದು ಗಾಯ ತಂಡದಲ್ಲಿ ಸ್ಥಾನ ಮತ್ತು ನಾಯಕತ್ವವನ್ನೇ ಕಳೆದುಕೊಳ್ಳುವಂತೆ ಮಾಡಿತ್ತು.. ಅಂತಹದ್ದೇ ಭೀತಿ 2022ರಲ್ಲಿ ಕೆಕೆಆರ್ ತಂಡವನ್ನು ಸೇರಿದಾಗಲೂ ಎದುರಾಗಿತ್ತು ಶ್ರೇಯಸ್ ಅಯ್ಯರ್‌ಗೆ .

ಶ್ರೇಯಸ್ ಐಪಿಎಲ್‌ಗೆ ಎಂಟ್ರಿ ಕೊಟ್ಟಿದ್ದು 2015ರಲ್ಲಿ. ಮೊದಲ ಆವೃತ್ತಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿದ ಅಯ್ಯರ್, 2016ರ ಐಪಿಎಲ್ನಲ್ಲಿ ತೀವ್ರ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಆಗ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮೆಂಟರ್ ಆಗಿದ್ದ ರಾಹುಲ್ ದ್ರಾವಿಡ್ ಅವರಿಂದ ಅಯ್ಯರ್, ಬ್ಯಾಟಿಂಗ್ ಬಗ್ಗೆ ವಿಶೇಷ ಸಲಹೆ ಪಡೆದಿದ್ದರು. ಅಂದು ದ್ರಾವಿಡ್ ನೀಡಿದ ಸಲಹೆಗಳು, ತಂಡದಲ್ಲಿ ನೆಲೆಯೂರವಂತೆ ಮಾಡಿದ್ದವು. ಪರ್ಫೆಕ್ಟ್ ಬ್ಯಾಟರ್ ಆಗಿ ರೂಪುಗೊಂಡರು.

ಆದ್ರೆ 2021ರ ಮಾರ್ಚ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭುಜದ ಗಾಯದ ಸಮಸ್ಯೆಗೆ ಒಳಗಾದ ಅಯ್ಯರ್, ಐಪಿಎಲ್ ನಿಂದ ದೂರ ಸರಿಯಬೇಕಾಯಿತು. ಡೆಲ್ಲಿ ಮ್ಯಾನೇಜ್‌ಮೆಂಟ್ ನಾಯಕತ್ವವನ್ನೂ ಕಸಿದುಕೊಂಡಿತು. ಅಲ್ಲದೆ, ಅವರನ್ನು ತಂಡದಿಂದಲೇ ಕೈಬಿಡಲಾಯಿತು. ಹಾಗೆಯೇ ಫಿಟ್ ಆಗದ ಕಾರಣ ಶ್ರೀಲಂಕಾ ಎದುರಿನ ಸರಣಿಯನ್ನೂ ಕಳೆದುಕೊಂಡಿದ್ದರು. ಒಂದ್ವೇಳೆ ಫಿಟ್ ಆಗಿದ್ದರೆ ಈ ಪ್ರವಾಸಕ್ಕೆ ನಾಯಕನಾಗುವ ಸಾಧ್ಯತೆ ಇತ್ತು. ಜತೆಗೆ ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡರು.

2022ರಲ್ಲಿ ಕೆಕೆಆರ್ ತಂಡವನ್ನು ಸೇರಿದ್ದ ಅಯ್ಯರ್, ಮೊದಲ ಸೀಸನ್‌ ನಲ್ಲಿ ಕೇವಲ 6 ಜಯ ಸಾಧಿಸಿದ್ದರು. ಅದರ ಮರು ವರ್ಷವೇ ಅಯ್ಯರ್ ಗಾಯಗೊಂಡು ಟೂರ್ನಿಯಿಂದ ಹೊರಬಂದಿದ್ದರು. ಹೀಗಾಗಿ ಕೆಲ ಮಾಜಿ ಆಟಗಾರರು ಶ್ರೇಯಸ್ ಅವರನ್ನು ತಂಡದಿಂದ ತೆಗೆದುಹಾಕಬೇಕು. ನಾಯಕನಾಗಿ ಗಾಯಗಳ ಬಗ್ಗೆ ಎಚ್ಚರಿವಹಿಸದ ಆಟಗಾರರನ್ನು ತಂಡದಲ್ಲಿ ಇಟ್ಟುಕೊಳ್ಳುವುದು ಅನಗತ್ಯ. ಮಿನಿ ಹರಾಜಿಗೂ ಮುನ್ನ ಕೈ ಬಿಡಬೇಕು ಎಂಬುದು ಅವರ ಒತ್ತಾಯವಾಗಿತ್ತು. ಇದು ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು. ಇಂಜುರಿಯಿಂದ ಡೆಲ್ಲಿ ತಂಡದಲ್ಲಿ ನಾಯಕತ್ವ ಮತ್ತು ತಂಡದಲ್ಲಿ ಸ್ಥಾನ ಕಳೆದುಕೊಂಡಂತೆ ಕೆಕೆಆರ್ ತಂಡದಲ್ಲೂ ಸ್ಥಾನ ಕಳೆದುಕೊಳ್ಳುವ ಭೀತಿಗೆ ಒಳಗಾಗುವಂತೆ ಮಾಡಿತ್ತು. ಇದೀಗ ಶ್ರೇಯಸ್ ಅಯ್ಯರ್ ಗ್ರೇಟ್ ಕಮ್ ಬ್ಯಾಕ್ ಮಾಡಿದ್ದಾರೆ.. ಅಯ್ಯರ್ ನಾಯಕತ್ವದ ಕೆಕೆಆರ್ ತಂಡ ಫೈನಲ್ ಪ್ರವೇಶಿಸಿದೆ.  ಶ್ರೇಯಸ್ ಅಯ್ಯರ್, ಮಾನಸಿಕ ಒತ್ತಡ, ಇಂಜುರಿ, ಐಪಿಎಲ್ನಲ್ಲೂ ನೀರಸ ಪ್ರದರ್ಶನ, ಜೊತೆಗೆ ಟೀಕಾ ಪ್ರಹಾರ ಇವೆಲ್ಲವನ್ನೂ ಮೆಟ್ಟಿ ನಿಂತು ಈಗ ಕೆಕೆಆರ್ ಹೀರೋ ಆಗಿದ್ದಾರೆ. ತಾನೊಬ್ಬ ಸಮರ್ಥ ನಾಯಕ ಅಂತಾ ತೋರಿಸಿಕೊಟ್ಟಿದ್ದಾರೆ.

Shwetha M