ರಾಜ್ಯದಲ್ಲಿ ವರುಣನ ಆರ್ಭಟ – ಶಿರಾಡಿ ಘಾಟ್ ರಸ್ತೆಯ ಹಲವೆಡೆ ಭೂಕುಸಿತ

ರಾಜ್ಯದಲ್ಲಿ ವರುಣನ ಆರ್ಭಟ – ಶಿರಾಡಿ ಘಾಟ್ ರಸ್ತೆಯ ಹಲವೆಡೆ ಭೂಕುಸಿತ

ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದ್ದು,  ಆರಂಭದಲ್ಲೇ ಮಳೆರಾಯ ಅಬ್ಬರಿಸುತ್ತಿದ್ದಾನೆ. ರಾಜ್ಯದ ಹಲವು ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತಿವೆ. ಆರಂಭದಲ್ಲೇ ಹೀಗಾದರೆ, ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ಎಂಬ ಆತಂಕ ಸಹ ಜನರನ್ನು ಕಾಡುತ್ತಿದೆ. ಇದೀಗ ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ ಸಂಭವಿಸಿದೆ.

ಇದನ್ನೂ ಓದಿ: ಕೆಕೆಆರ್‌ ವಿರುದ್ಧ ಗೆದ್ದು ಬೀಗಿದ ಎಸ್‌ಆರ್‌ಹೆಚ್‌ – 18ನೇ ಆವೃತ್ತಿಗೆ ವಿದಾಯ ಎರಡೂ ಟೀಮ್‌!

ಭಾರೀ ಬಿರುಗಾಳಿ ಸಹಿತ ಮಳೆಗೆ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಮಾರ್ಗದಲ್ಲಿ ಹಲವು ಕಡೆ ಗುಡ್ಡ ಕುಸಿದು ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ. ಇನ್ನು ಪುತ್ತೂರು ತಾಲೂಕಿನ ಕಡಬದಲ್ಲಿ ಬೃಹತ್ ಮರ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ನೂಜಿಬಾಳ್ತಿಲ ಎಂಬಲ್ಲಿ ಘಟನೆ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟಕ್ಕೆ ಇಬ್ಬರು ಮಕ್ಕಳು ಸೇರಿ ಕಾರಿನಲ್ಲಿದ್ದ 6 ಮಂದಿ ಬಚಾವಾಗಿದ್ದಾರೆ. ಗಾಯಾಳುಗಳು ಶಿವಮೊಗ್ಗ ಮೂಲದವರಾಗಿದ್ದು, ಕುಕ್ಕೆಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಅನಾಹುತ ಸಂಭವಿಸಿದೆ.

ಕೊಡಗಿನಲ್ಲಿ ಇಂದು ಅಂಗನಾಡಿ, ಕಾಲೇಜ್‌ಗಳಿಗೆ ರಜೆ

ಕೊಡಗಿನ ವಿರಾಜಪೇಟೆಯಲ್ಲಿ ಮಳೆ ನೀರು ರಸ್ತೆ ಮೇಲೆ ನದಿಯಂತೆ ಹರಿದಿದೆ. ವಿರಾಜಪೇಟೆ-ಗೋಣಿಕೊಪ್ಪಲು ರಸ್ತೆಯಲ್ಲಿ ವಾಹನ ಸವಾರರ ಪರದಾಟವಂತಾಗಿದೆ. ಭಾರಿ ಮಳೆ ಹಿನ್ನೆಲೆ ಕೊಡಗು ವಿವಿ ಅಧೀನ‌ ಕಾಲೇಜುಗಳಿಗೆ ಇಂದಿನಿಂದ 2 ದಿನ ರಜೆ ಘೋಷಿಸಲಾಗಿದ್ದು, ಜಿಲ್ಲಾಡಳಿತ ಅಂಗನವಾಡಿಗಳಿಗೂ ರಜೆ ಘೋಷಿಸಿದೆ.

ಚಿಕ್ಕಮಗಳೂರಿನಲ್ಲಿ 2 ದಿನ ರೆಡ್ ಅಲರ್ಟ್ ಘೋಷಣೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್, ಬಾಳೂರು, ಕೊಟ್ಟಿಗೆಹಾರ, ಎನ್​ಆರ್ ಪುರ ತಾಲೂಕಿನ ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಕಳಸ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್ ಘೋಷಣೆ ಆಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು , ಕುಮಟಾ  ತಾಲೂಕಿನ ಮುಸುಗುಪ್ಪ ಬಳಿ ಮೂರೂರು-ಹರಕಡೆ ಸಂಪರ್ಕ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ರಸ್ತೆಗೆ ಭಾರೀ ಗಾತ್ರದ ಬಂಡೆಗಲ್ಲು ಉರುಳಿ ಬಂದಿದೆ. ಪರಿಣಾಮ ಮೂರೂರು-ಹರಕಡೆ ನಡುವಿನ ರಸ್ತೆ ಬಂದ್ ಆಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಹನ ಸವಾರರಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ.  ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ದೇವಿಮನೆ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕೊಚ್ಚಿ ಹೋಗಿತ್ತು. ಇದರಿಂದ ಕುಮಟಾ – ಶಿರಸಿ  ಸಂಪರ್ಕ ಕಡಿತಗೊಂಡಿತ್ತು. ಕಳೆದ ಒಂದು ವರ್ಷದಿಂದ 766ಇ ಹೆದ್ದಾರಿ ಕಾಮಗಾರಿ ನಡೆಯುತಿತ್ತು.

Shwetha M

Leave a Reply

Your email address will not be published. Required fields are marked *