ಆಂಬ್ಯುಲೆನ್ಸ್ನಲ್ಲಿ ಬಂದಳು.. ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಪರೀಕ್ಷೆ ಬರೆದಳು – SSLC ವಿದ್ಯಾರ್ಥಿನಿ ಎಲ್ಲರಿಗೂ ಮಾದರಿ..!
ಅಪಘಾತದಲ್ಲಿ ಕಾಲು ಕಳೆದುಕೊಂಡ ವಿದ್ಯಾರ್ಥಿನಿ - ಛಲಗಾತಿಗೆ ನಮ್ಮದೊಂದು ಸಲಾಂ

ವಿದ್ಯೆ ಜೊತೆಗಿದ್ದರೇ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬಹುದು. ಎಂಥದ್ದೇ ಪರಿಸ್ಥಿತಿಯಲ್ಲೂ ವಿದ್ಯೆಯನ್ನು ಕೈಬಿಡಬಾರದು ಅನ್ನೋ ಮಾತಿಗೆ ಇವತ್ತು ಕೋಲಾರದ ವಿದ್ಯಾರ್ಥಿನಿ ಸಾಕ್ಷಿಯಾಗಿದ್ದಾಳೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವಿದ್ಯಾರ್ಥಿನಿ ಕುಸುಮಾ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರೂ, ಆಂಬ್ಯುಲೆನ್ಸ್ನಲ್ಲಿ ಬಂದು ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದಿದ್ದಾಳೆ.
ಇದನ್ನೂ ಓದಿ: ಅಪಘಾತದಲ್ಲಿ ಎರಡೂ ಕಾಲು ಕಟ್! – ಸ್ಟ್ರೆಚರ್ ಬೆಡ್ ಮೇಲೆಯೇ ಮಲಗಿ ಪರೀಕ್ಷೆ ಬರೆದ SSLC ವಿದ್ಯಾರ್ಥಿನಿ!
ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿ ನಿವಾಸಿಯಾದ 16 ವರ್ಷದ ಕುಸುಮಾ, ಸೆಂಟ್ ಮೇರಿಸ್ ಹೈಸ್ಕೂಲ್ ವಿದ್ಯಾರ್ಥಿನಿ. ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಒಂದು ಕಾಲು ಕಳೆದುಕೊಂಡಿದ್ದಾಳೆ. ಸದ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಒಂದು ಆಪರೇಷನ್ ಆಗಿದೆ. ಇನ್ನೂ ಎರಡು ಆಪರೇಷನ್ ಆಗಬೇಕಿದೆ. ಆಸ್ಪತ್ರೆಯಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾಳೆ. ಆದರೂ ಕೂಡಾ ಓದುವ ಹಠ ಬಿಡದ ಛಲಗಾತಿ ಕುಸುಮಾ. ಸೀದಾ ಆಸ್ಪತ್ರೆಯಿಂದಲೇ ಎಕ್ಸಾಂ ಸೆಂಟರ್ಗೆ ಬಂದಿದ್ದಳು ಕುಸುಮಾ. ಆದರೆ, ಬಂದಿರುವ ರೀತಿ ಮಾತ್ರ ಮನಕಲಕುವಂತಿತ್ತು. ವಿದ್ಯಾಭ್ಯಾಸದ ಮೇಲೆ ಆಸಕ್ತಿ ಕಳೆದುಕೊಳ್ಳದೆ ಕುಸುಮಾ ತನ್ನ ತಾಯಿಯೊಂದಿಗೆ ಆಂಬ್ಯುಲೆನ್ಸ್ ನಲ್ಲಿ ಕೆಜಿಎಫ್ನ ಸೆಂಟ್ ಜೋಸೆಫ್ ಶಾಲೆಗೆ ಬಂದು ಪರೀಕ್ಷೆಗೆ ಹಾಜರಾಗಿದ್ದಾಳೆ. ಪರೀಕ್ಷಾ ಕೇಂದ್ರದಲ್ಲಿ ಸ್ಟ್ರೆಚರ್ ಬೆಡ್ ಮೇಲೆ ಮಲಗಿಕೊಂಡೇ ಆಕೆ ಪರೀಕ್ಷೆ ಬರೆದಿದ್ದಾಳೆ. ಕುಸುಮಾ ಎಂಬ ಛಲಾಗಾತಿ ವಿದ್ಯಾರ್ಥಿನಿಗೆ ಸಲಾಂ ಹೇಳಲೇಬೇಕು. ಇನ್ನು ವಿದ್ಯಾರ್ಥಿನಿಯ ಪರಿಸ್ಥಿತಿಯನ್ನು ಗಮನಿಸಿ, ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ. ನಾರಾಯಣಸ್ವಾಮಿ ಪರೀಕ್ಷೆ ಬರೆಯಲು ವಿಶೇಷ ಅನುಮತಿ ನೀಡಿದ್ದಾರೆ. ಕುಸುಮಾಳ ಹಠ, ಪರಿಶ್ರಮ ಮತ್ತು ಶಿಕ್ಷಣದ ಮೇಲಿನ ಬದ್ಧತೆ ಇದೀಗ ಅನೇಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.

ನೋಡಿರಿ

