ಮಕ್ಕಳ ಮಾರಾಟದ ಹಿಂದಿರುವ ಮಹಾಲಕ್ಷ್ಮಿಯ ಕಥೆಯೇ ರೋಚಕ – ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದವಳು ನಂತರ ಆಗಿದ್ದು ಕೋಟ್ಯಾಧಿಪತಿ…!

ಮಕ್ಕಳ ಮಾರಾಟದ ಹಿಂದಿರುವ ಮಹಾಲಕ್ಷ್ಮಿಯ ಕಥೆಯೇ ರೋಚಕ – ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದವಳು ನಂತರ ಆಗಿದ್ದು ಕೋಟ್ಯಾಧಿಪತಿ…!

ಮಕ್ಕಳ ಮಾರಾಟ ಜಾಲದ ಹಿಂದೆ ಬಿದ್ದಿದ್ದ ಸಿಸಿಬಿ ಪೊಲೀಸರು ದಿನಕ್ಕೊಂದು ವಿಚಾರವನ್ನು ಬಹಿರಂಗಪಡಿಸುತ್ತಿದ್ದಾರೆ. ಕುಡುಕನೊಬ್ಬ ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆೆಗೆ ಇಳಿದಿದ್ದ ಸಿಸಿಬಿ ಪೊಲೀಸರು ಪ್ರಕರಣದ ಹಿಂದೆ ವೈದ್ಯರು, ಸರ್ಕಾರಿ ಅಧಿಕಾರಿಗಳವರೆಗೂ ಲಿಂಕ್ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಇದರ ಮಧ್ಯೆ ಆರೋಪಿಗಳ ಪೈಕಿ ಮಹಾಲಕ್ಷ್ಮಿ ಎಂಬಾಕೆಯ ವಿಚಾರ ಕೆದಕುತ್ತಾ ಹೋದಂತೆ ಅಚ್ಚರಿ ಮೇಲೆ ಅಚ್ಚರಿ ಆಗುತ್ತಿದೆ.

ಇದನ್ನೂ ಓದಿ: ಅಮ್ಮಂದಿರ ಆಲೆಮನೆ ಆಪರೇಷನ್ – ಹೆಣ್ಣು ಭ್ರೂಣ ಕೊಂದವರ ಲೆಕ್ಕವೇನಿತ್ತು?

ಮಕ್ಕಳ ಮಾರಾಟ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಗಳಲ್ಲಿ ಕರ್ನಾಟಕದ ಗ್ಯಾಂಗ್ ಲೀಡರ್ ಮಹಾಲಕ್ಷ್ಮೀ ಕಥೆ ರೋಚಕವಾಗಿದೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಗಾರ್ಮೆಂಟ್ಸ್ ಕೆಲಸ ಮಾಡಿಕೊಂಡಿದ್ದ ಈಕೆ ಇವತ್ತು ಕೋಟ್ಯಾಧಿಪತಿಯಾಗಿದ್ದಾಳೆ. ಮಹಾಲಕ್ಷ್ಮಿ ತರಕಾರಿ ಮಾರಾಟ ಮಾಡುತ್ತಲೇ ಮಕ್ಕಳನ್ನು ಡೀಲ್ ಮಾಡುತ್ತಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಮಹಾಲಕ್ಷ್ಮಿ ಹಸುಗೂಸುಗಳನ್ನು ಮಾರಾಟ ಮಾಡಿ ಲಕ್ಷಲಕ್ಷ ದುಡ್ಡು ಮಾಡಿದ್ದರೂ ಬಡವರು ಎನ್ನುವಂತಿದ್ದಳು. ಯಾರಿಗೂ ಅನುಮಾನ ಬರಬಾರದು ಎಂದು ತರಕಾರಿ ಮಾರುತ್ತಿದ್ದ ಈಕೆ, ತರಕಾರಿ ಮಾರಾಟ ಮಾಡುತ್ತಲೇ ಹಲವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಯಾವುದಾದರೂ ಗ್ರಾಹಕರಿಗೆ ಮಕ್ಕಳಿಲ್ಲ ಎಂಬ ವಿಚಾರ ಗೊತ್ತಾದರೇ ಅವರ ಜೊತೆ ಇನ್ನೂ ಹೆಚ್ಚು ಸಲುಗೆ ಬೆಳೆಸುತ್ತಿದ್ದಳು. 2017 ರಿಂದಲೂ ಈ ದಂಧೆಯನ್ನು ಮಾಡುತ್ತಾ ಇರುವ ಮಹಾಲಕ್ಷ್ಮೀ, ಇಂದು ಸ್ವಂತ ಮನೆ, ಕಾರು ಜೊತೆಗೆ ಮೈತುಂಬಾ ಚಿನ್ನಾಭರಣ ಹೊಂದಿದ್ದಾಳೆ. 2015 ರಿಂದ 2017 ರವರೆಗೂ ಗಾರ್ಮೆಂಟ್ಸ್‌ನಲ್ಲಿ ಕೇವಲ 8 ಸಾವಿರ ಸಂಬಳಕ್ಕೆ ಕೆಲಸ ಮಾಡ್ತಾ ಮಾಡುತ್ತಿದ್ದಳು. ಈ ವೇಳೆ ಆಕೆಯ ಪರಿಚಯ ಆದ ಮಹಿಳೆ ಅಂಡಾಣು ಕೊಟ್ಟರೇ ಹಣ ಕೊಡುವುದಾಗಿ ಕೇಳಿದ್ದಳು. ಆಗ ಅಂಡಾಣು ನೀಡಿದ್ದ ಮಹಾಲಕ್ಷ್ಮೀಗೆ ಸುಮಾರು 20 ಸಾವಿರ ನೀಡಿದ್ದಳು. ನಂತರ ದಿನಗಳಲ್ಲಿ ಅಂಡಾಣು ಕೊಡುವರನ್ನು ಪತ್ತೆ ಮಾಡಿ ಅದರಿಂದ ಕಮೀಷನ್ ಪಡೆಯುವ ಕೆಲಸ ಮಾಡಿಕೊಂಡಿದ್ದಳು ಎಂಬ ವಿಚಾರವೂ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಭೇದಿಸಲು ಸಿಸಿಬಿ ಅಧಿಕಾರಿಗಳು ಮಕ್ಕಳು ಕೊಳ್ಳುವ ಪೋಷಕರ ಸೋಗಿನಲ್ಲಿ ಥೇಟ್ ಫೀಲ್ಮ್ ಸ್ಟೈಲ್ನಲ್ಲಿ ಎಂಟ್ರಿ ಕೊಟ್ಟು ಆರೋಪಿಗಳನ್ನು ಸೆರೆ ಹಿಡಿದಿದ್ದರು. ಕುಡುಕನೋರ್ವ ನೀಡಿದ್ದ ಮಹತ್ವದ ಸುಳಿವು ಆಧರಿಸಿ ಬೇಟೆಗಿಳಿದಿದ್ದ ಸಿಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದರು. ಈ ವೇಳೆ ವೈದ್ಯರಿಂದ ಹಿಡಿದು ಸರ್ಕಾರಿ ಅಧಿಕಾರಿಗಳವರೆಗೂ ಪ್ರಕರಣದಲ್ಲಿ ಲಿಂಕ್ ಇರುವುದು ಪತ್ತೆಯಾಗಿದೆ.

ಹಸುಗೂಸು ಮಾರಾಟದ ಪ್ರಕರಣ ಸಂಬಂಧ ಆರೋಪಿಗಳು ಇದುವರೆಗೆ 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ವಿಚಾರ ಸಿಸಿಬಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಮಾರಾಟ ಮಾಡಿದ ಮಕ್ಕಳ ಪೈಕಿ 50-60 ಮಕ್ಕಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಿದರೆ, ಉಳಿದ ಮಕ್ಕಳನ್ನು ತಮಿಳುನಾಡಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ. ಆರೋಪಿಗಳು ಈ ವಿಚಾರವನ್ನು ಬಾಯಿಬಿಡುತ್ತಿದ್ದಂತೆ ಮತ್ತಷ್ಟು ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಕರ್ನಾಟಕದಲ್ಲಿ ಮಾರಾಟ ಆಗಿರುವ ಮಕ್ಕಳ ಬಗ್ಗೆ ಆರೋಪಿಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ 10 ಮಕ್ಕಳ ಸುಳಿವು ಸಿಕ್ಕಿದ್ದು, ಉಳಿದ ಮಕ್ಕಳನ್ನು ಎಲ್ಲಿ, ಯಾರಿಗೆ ಮಾರಾಟ ಮಾಡಲಾಗಿದೆ ಎಂದು ವಿಚಾರಣೆ ನಡೆಸುತ್ತಿದ್ದಾರೆ.

 

Sulekha