ಶಕ್ತಿ ಯೋಜನೆಯಿಂದ ಮುಜರಾಯಿ ದೇಗುಲಗಳ ಆದಾಯ ಡಬಲ್!‌ – ಕುಕ್ಕೆ, ಕೊಲ್ಲೂರಿನ ಈ ವರ್ಷದ ಆದಾಯವೆಷ್ಟು?

ಶಕ್ತಿ ಯೋಜನೆಯಿಂದ ಮುಜರಾಯಿ ದೇಗುಲಗಳ ಆದಾಯ ಡಬಲ್!‌ – ಕುಕ್ಕೆ, ಕೊಲ್ಲೂರಿನ ಈ ವರ್ಷದ ಆದಾಯವೆಷ್ಟು?

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಮೇಲೆ ಮಹಿಳೆಯರ ಓಡಾಟ ಹೆಚ್ಚಾಗಿದೆ. ಮಹಿಳೆಯರು ಧಾರ್ಮಿಕ ಸ್ಥಳಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಹೆಚ್ಚಾಗಿದೆ. ಇದರಿಂದಾಗಿ ಕರ್ನಾಟಕದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಭಾರಿ ಚೇತರಿಕೆ ಕಂಡಿದೆ.

ಹೌದು, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ್ಮೇಲೆ ಮಹಿಳೆಯ ಓಡಾಟ ಹೆಚ್ಚಿದೆ. ದೇವಾಲಯಗಳಿಗೆ ಭಕ್ತರು, ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದರಿಂದ ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಹುಂಡಿಗಳು ಬಹುಬೇಗ ಭರ್ತಿಯಾಗುತ್ತಿವೆ. ದೇವಾಲಯಗಳ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ ಒಂದೂವರೆಯಿಂದ ಎರಡು ಪಟ್ಟು ಏರಿಕೆಯಾಗಿದೆ. ಯಾವೆಲ್ಲಾ ದೇವಸ್ಥಾನಗಳಿಗೆ ಎಷ್ಟು ಆದಾಯ ಹರಿದುಬಂದಿದೆ  ಎಂಬುವುದರ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಮೇ ಒಳಗೆ ಭಾರತದ ಸೇನೆ ವಾಪಸ್ ಹೋಗಲೇಬೇಕು! – ಮತ್ತೆ ಗುಡುಗಿದ ಮಾಲ್ಡೀವ್ಸ್‌ ಅಧ್ಯಕ್ಷ!

ರಾಜ್ಯದ ಮುಜುರಾಯಿ ಇಲಾಖೆಗೆ ಒಳಪಟ್ಟಿರುವ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಕುಕ್ಕೆ ಸುಬ್ರಮ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಈ ವರ್ಷ ಬರೋಬ್ಬರಿ 123 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಇನ್ನು ಈ ದೇವಸ್ಥಾನಕ್ಕೆ ಕಳೆದ ವರ್ಷ 74 ಕೋಟಿ ರೂ. ಆದಾಯ ಬಂದಿತ್ತು

ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲೂರು ಮೂಕಂಬಿಕಾ ದೇವಸ್ಥಾನಕ್ಕೆ ಈ ವರ್ಷ 59.47 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಕಳೆದ ವರ್ಷ 31.36 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕೆಳೆದ ವರ್ಷ 21.92 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಆದ್ರೆ, ಈ ಬಾರಿ ಡಬ್ಬಲ್ ಆಗಿದೆ. ಅಂದರೆ 52.40 ಕೋಟಿ ರೂಪಾಯಿ ಆದಾಯ ಜಮಾವಾಗಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲರುವ ಪುಣ್ಯಕ್ಷೇತ್ರ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಈ ವರ್ಷ 36.48 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ, ಇನ್ನು ಕಳೆದ ವರ್ಷ  31.74 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.

ಕರ್ನಾಟಕದ ಮತ್ತೊಂದು ಮಜುರಾಯಿ ಇಲಾಖೆಯ ಬಹುದೊಡ್ಡ ದೇವಸ್ಥಾನ ಅಂದರೆ ಅದು ಕಟೀಲು ದುರ್ಗಾಪರಮೇಶ್ವರಿ. ದಕ್ಷಿಣ ಕನ್ನಡ ಜಿಲ್ಲೆಯ ನಂದಿನಿ ನದಿಯ ದಂಡೆಯ ಮೇಲಿರರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಈ ದೇವಸ್ಥಾನಕ್ಕೆ ಈ ವರ್ಷ 32.1೦ ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಇನ್ನು ಕಳೆದ ವರ್ಷ ಸಂಗ್ರಹವಾದ ಆದಾಯ 19.57 ಕೋಟಿ ರೂ.

ಮೈಸೂರು ಜಿಲ್ಲೆಯ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಈ ಬಾರಿ 26.71ಕೋಟಿ ರೂಪಾಯಿ ಆದಾಯ ಬಂದಿದೆ. ಇನ್ನು ಕಳೆದ ವರ್ಷ 18.49 ಕೋಟಿ ರೂಪಾಯಿ ಆದಾಯ ಬಂದಿತ್ತು.

ಇನ್ನು ಉತ್ತರ ಕರ್ನಾಟಕದ ಪ್ರಸಿದ್ಧಿ ಪಡೆದಿರುವ ಸವದತ್ತಿ ಎಲ್ಲಮ್ಮ ಬೆಗಾವಿ ಜಿಲ್ಲೆಯಲ್ಲಿದ್ದು, ಈ ದೇವಸ್ಥಾನಕ್ಕೆ ಈ ವರ್ಷ ಕಳೆದ ಬಾರಿಗಿಂತ ಡಬಲ್​ ಆದಾಯ ಹರಿದುಬಂದಿದೆ. ಕಳೆದ ವರ್ಷ 10.99 ಕೋಟಿ ರೂ. ಸಂಗ್ರಹವಾಗಿದ್ದರೆ, ಈ ವರ್ಷ 22.52 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಮಂದಾರ್ತಿ ದುರ್ಗಾಪರಮೇಶ್ವರಿ ಅಮ್ಮನ ದೇವಸ್ಥಾನಕ್ಕೆ ಕಳೆದ ವರ್ಷ 31.36 ಕೋಟಿ ರೂಪಾಯಿ ಆದಾಯ ಬಂದಿದ್ದರೆ, ಈ ವರ್ಷ 59.47 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.

ಘಾಟಿ ಸುಬ್ರಹ್ಮಣ್ಯವು ಪುರಾತನ ಹಿಂದೂ ದೇವಾಲಯವಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಬಳಿ ಬೆಂಗಳೂರಿನ ಹೊರವಲಯದಲ್ಲಿದೆ. ಈ ದೇವಸ್ಥಾನಕ್ಕೆ ಈ ವರ್ಷ 12.25ಕೋಟಿ ರೂ. ಆದಾಯ ಹರಿದುಬಂದಿದೆ. ಕಳೆದ ವರ್ಷ 7.89ಕೋಟಿ ಆದಾಯ ಸಂಗ್ರಹವಾಗಿತ್ತು.

ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಕಳೆದ ವರ್ಷ 5.95 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದ್ದರೆ, ಈ ವರ್ಷ ಡಬ್ಬಲ್ ಅಂದರೆ 10.58 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.

Shwetha M