ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ಬಿಡುಗಡೆ – ಹಾಸನ ಟಿಕೆಟ್ ಕುಟುಂಬಕ್ಕೋ, ಕಾರ್ಯಕರ್ತರಿಗೋ?

ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ಬಿಡುಗಡೆ – ಹಾಸನ ಟಿಕೆಟ್ ಕುಟುಂಬಕ್ಕೋ, ಕಾರ್ಯಕರ್ತರಿಗೋ?

ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡ ಕ್ಷಣದಿಂದ ಕ್ಷಣಕ್ಕೆ ರಂಗೇರುತ್ತಿದೆ. ನಾಲ್ಕು ತಿಂಗಳ ಹಿಂದೆಯೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್ ಇವತ್ತು ಎರಡನೇ ಪಟ್ಟಿ ಬಿಡುಗಡೆ ಮಾಡಲಿದೆ. ಆದರೆ ಭಾರೀ ಪೈಪೋಟಿಗೆ ಕಾರಣವಾಗಿರುವ ಹಾಸನ ಕ್ಷೇತ್ರದ ಟಿಕೆಟ್ ಯಾರಿಗೆ ಅನ್ನೋದು ಕುತೂಹಲ ಮೂಡಿಸಿದೆ.

ಹೆಚ್​.ಡಿ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಇಂದು ಬೆಂಗಳೂರಿನಲ್ಲಿ ಜೆಡಿಎಸ್​​ ಪಕ್ಷದ ಎರಡನೇ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್(Congress) ಮತ್ತು ಬಿಜೆಪಿಗೂ(BJP) ಮುನ್ನವೇ 93 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿರುವ ಜೆಡಿಎಸ್ ಇಂದು(ಏಪ್ರಿಲ್ 03)  ಮಧ್ಯಾಹ್ನ ಜೆಡಿಎಸ್ ಅಭ್ಯರ್ಥಿಗಳ​ 2ನೇ ಪಟ್ಟಿ (JDS Candidate List)  ಬಿಡುಗಡೆ ಮಾಡಲಿದ್ದಾರೆ. ಆದರೆ 2ನೇ ಲಿಸ್ಟ್​ನಲ್ಲೂ ಹಾಸನ ಟಿಕೆಟ್ ಅಭ್ಯರ್ಥಿ ಘೋಷಣೆಯಾಗುವುದು ಅನುಮಾನ. ಇದನ್ನ ಸ್ವತಃ ಹೆಚ್​ಡಿ ಕುಮಾರಸ್ವಾಮಿಯೇ(HD Kumaraswamy) ಸ್ಪಷ್ಟಪಡಿಸಿದ್ದಾರೆ. ಹಾಸನ ಟಿಕೆಟ್ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಇದೆ. ಯಾರಿಗೆ ಟಿಕೆಟ್ ಎನ್ನುವುದು ಇನ್ನೂ ಬಗೆಹರಿದಿಲ್ಲ ಎಂದು ಕುಮಾರಸ್ವಾಮಿಯೇ ಹೇಳಿದ್ದಾರೆ.  ಪತ್ನಿ ಭವಾನಿಗೇ ಹಾಸನ ಟಿಕೆಟ್ (Hassan Ticket) ಕೊಡಿಸಬೇಕೆಂದು ರೇವಣ್ಣ ಹಠಕ್ಕೆ ಬಿದ್ದಿದ್ರೆ, ಕುಮಾರಸ್ವಾಮಿ ಮಾತ್ರ ಸ್ವರೂಪ್ ಪರವೇ ಬ್ಯಾಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ಟಿಕೆಟ್ ಫೈನಲ್ ಮಾಡಲಾಗುತ್ತಿಲ್ಲ. ಸೋದರರ ಸಮರದಲ್ಲಿ ಈಗ ಹೆಚ್.​ಡಿ ದೇವೇಗೌಡ (HD Devegowda) ಪ್ರವೇಶ ಮಾಡಿದ್ದಾರೆ.

ಇದನ್ನೂ ಓದಿ : 2 ವರ್ಷ ಜೈಲು ಶಿಕ್ಷೆ ಪ್ರಶ್ನಿಸಿ ಇಂದು ರಾಹುಲ್‌ ಗಾಂಧಿ ಮೇಲ್ಮನವಿ –  ಸೂರತ್‌ ಗೆ ತೆರಳಲಿದೆ ರಾಗಾ ಟೀಮ್

ಟಿಕೆಟ್ ಫೈಟ್ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ದೇವೇಗೌಡ್ರು ನಿನ್ನೆ(ಏಪ್ರಿಲ್ 02) ಪದ್ಮನಾಭನಗರದ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕುಮಾರಸ್ವಾಮಿ, ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಕುಟುಂಬಸ ಸದಸ್ಯರು ಭಾಗಿಯಾಗಿದ್ದು, ಹಾಸನ ಟಿಕೆಟ್ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಭವಾನಿಗೇ ಟಿಕೆಟ್ ನೀಡಬೇಕೆಂದು ರೇವಣ್ಣ ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ ಟಿಕೆಟ್ ಯಾರಿಗೆ ಎಂದು ಹೇಳದ ಗೌಡರು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ. ಈ ವೇಳೆ ಗೌಡರ ಮಾತಿಗೆ ಮರುತ್ತರ ನೀಡದ ಭವಾನಿ ಸಭೆಯ ಮಧ್ಯದಲ್ಲೇ ಎದ್ದು ಹೊರನಡೆದಿದ್ದು, ನಿನ್ನೆ ನಡೆದ ಸಭೆಯಲ್ಲೂ ಹಾಸನ ಜೆಡಿಎಸ್ ಟಿಕೆಟ್ ಫೈನಲ್ ಆಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಟಿಕೆಟ್​ ಬಗ್ಗೆ ದೇವೇಗೌಡರ ಮಾತೇ ಅಂತಿಮ ಅನ್ನುತ್ತಿರುವ ರೇವಣ್ಣ, ಕೊನೆಯ ಕ್ಷಣದವರೆಗೂ ಟಿಕೆಟ್​ಗಾಗಿ ಫೈಟ್ ಮಾಡುತ್ತೇನೆ ಎನ್ನುವ ಸಂದೇಶವನ್ನ ರವಾನೆ ಮಾಡಿದ್ದಾರೆ. ಎರಡನೇ ಪಟ್ಟಿಯಲ್ಲಿ ಹಾಸನ ಅಭ್ಯರ್ಥಿ ಘೋಷಣೆ ಮಾಡದಂತೆ ದೇವೇಗೌಡರಿಂದ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕುಮಾರಸ್ವಾಮಿ ಅವರು ಹಾಸನ ಟಿಕೆಟ್ ಕೈ ಬಿಟ್ಟು ಎರಡನೇ ಪಟ್ಟಿ ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅರಸೀಕೆರೆಯ ಶಿವಲಿಂಗೇಗೌಡರನ್ನು ಈಗಾಗಲೇ ಕಾಂಗ್ರೆಸ್​ ಸೆಳೆದಿದ್ದು, ಶಿವಲಿಂಗೇಗೌಡ ಕಾಂಗ್ರೆಸ್​ ಸೇರೋದು ಬಹುತೇಕ ನಿಶ್ಚಿತವಾಗಿದೆ. ಇನ್ನು ಅರಕಲಗೂಡು ಎಟಿ ರಾಮಸ್ವಾಮಿ ಸಹ ಜೆಡಿಎಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಅರಸೀಕೆರೆಯಲ್ಲಿ ಶಿವಲಿಂಗೇಗೌಡರಿಕೆ ಪೈಪೋಟಿ ನೀಡಲು ಪ್ರಬಲ ಅಭ್ಯರ್ಥಿಯ ಹುಡುಕಾಟ ನಡೆದಿದೆ. ಅಲ್ಲದೇ ಅರಕಲಗೂಡು ಕ್ಷೇತ್ರಕ್ಕೆ ಮಾಜಿ ಸಚಿವ ಎ.ಮಂಜು ಅವರನ್ನು ಅಂತಿಮಗೊಳಿಸಲಾಗಿದೆ. ಇನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ ಕ್ಷೇತ್ರದಲ್ಲೂ ಅಭ್ಯರ್ಥಿ ಹುಡುಕಾಟ ನಡೆದಿದೆ. ಇಲ್ಲಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ಹಾಲಿ ಸಚಿವ ಕೆ. ಗೋಪಾಲಯ್ಯ ವಿರುದ್ದ ಕಣಕ್ಕಿಳಿಯಲು ಸಮರ್ಥ ಅಭ್ಯರ್ಥಿ ಯಾರು ಎಂಬುದು ಇಂದು ತಿಳಿಯಲಿದೆ.

suddiyaana