ಹಿಮದೊಳಗೆ ಅಡಗಿದೆ ಭೀಕರ ವೈರಸ್ – ಮತ್ತೊಂದು ಮಹಾಮಾರಿ ಭೀತಿ?
48 ಸಾವಿರಕ್ಕೂ ಅಧಿಕ ವರ್ಷಗಳ ಹಳೆಯ ವೈರಸ್ ಪತ್ತೆ

ಹಿಮದೊಳಗೆ ಅಡಗಿದೆ ಭೀಕರ ವೈರಸ್ – ಮತ್ತೊಂದು ಮಹಾಮಾರಿ ಭೀತಿ?48 ಸಾವಿರಕ್ಕೂ ಅಧಿಕ ವರ್ಷಗಳ ಹಳೆಯ ವೈರಸ್ ಪತ್ತೆ

ಮಾಸ್ಕೋ: ಕಳೆದ ಮೂರು ವರ್ಷ ಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತಿನಲ್ಲೇ ಪ್ರಾಣ ಹಿಂಡಿತ್ತು. ಲಕ್ಷಾಂತರ ಮಂದಿ ಕೊರೊನಾಗೆ ಬಲಿಯಾಗಿದ್ದರು. ಕೊರೊನಾ ಹೊಡೆತದಿಂದ ಜಗತ್ತು ಚೇತರಿಸಿಕೊಳ್ಳುತ್ತಿರುವಾಗಲೇ ಮನುಕುಲಕ್ಕೆ ಮತ್ತೊಂದು ಆತಂಕ ಎದುರಾಗಿದೆ. ಹಿಮದ ಅಡಿಯಲ್ಲಿ ಹೂತುಹೋಗಿರುವ ಪುರಾತನ ವೈರಸ್‌ಗಳು ಹವಾಮಾನ ವೈಪರೀತ್ಯದ ಪರಿಣಾಮ ಜಗತ್ತಿಗೆ ಹೊಸ ಬೆದರಿಕೆ ಉಂಟುಮಾಡುವ ಅಪಾಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ಸಾವಿರಾರು ವರ್ಷಗಳಿಂದ ಹಿಮಾಚ್ಛಾದಿತ ಮಣ್ಣಿನ ತಳದಲ್ಲಿ ಹೂತುಹೋಗಿದ್ದ ಪುರಾತನ ಮಾದರಿಗಳನ್ನು ಯುರೋಪ್‌ನ ಸಂಶೋಧಕರು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ  48,500ಕ್ಕೂ ಅಧಿಕ ವರ್ಷಗಳ ಹಿಂದೆ ಸರೋವರದ ಅಡಿಯಲ್ಲಿ ಘನೀಕೃತಗೊಂಡಿದ್ದ ವೈರಸ್ ಸೇರಿದಂತೆ ಸುಮಾರು ಎರಡು ಡಜನ್ ವೈರಸ್‌ಗಳನ್ನು ಸಂಶೋಧಕರು ಪುನಶ್ಚೇತನಗೊಳಿಸಿದ್ದಾರೆ.

ಇದನ್ನೂ ಓದಿ: ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿದ ರಾಹುಲ್, ಗುಟ್ಟಾಗಿ ಲಸಿಕೆ ಹಾಕಿಸಿಕೊಂಡಿದ್ರು – ಅಮಿತ್ ಶಾ

13 ಹೊಸ ರೋಗಕಾರಕ ವೈರಸ್‌ಗಳನ್ನು ಪುನಶ್ಚೇತನಗೊಳಿಸಿದ್ದಾರೆ. ಅವುಗಳಿಗೆ ‘ಝೋಂಬಿ ವೈರಸ್’ ಎಂದು ಹೆಸರು ನೀಡಿದ್ದಾರೆ. ಶೀತಲೀಕರಣಗೊಂಡ ನೆಲದಡಿಯಲ್ಲಿ ಅನೇಕ ಶತಮಾನಗಳ ಕಾಲ ಹುಗಿದು ಹೋಗಿದ್ದರೂ, ಝೋಂಬಿ ವೈರಸ್‌ಗಳು ಈಗಲೂ ಸೋಂಕು ಹರಡುವಷ್ಟು ಪ್ರಬಲವಾಗಿ ಉಳಿದಿವೆ ಎಂಬ ಆಘಾತಕಾರಿ ಸಂಗತಿಯನ್ನು ತಜ್ಞರು ಬಹಿರಂಗಪಡಿಸಿದ್ದಾರೆ.

ವಾತಾವರಣದ ತಾಪಮಾನದ ಕಾರಣದಿಂದ ಕರಗುತ್ತಿರುವ ಹಿಮದ ಹೊದಿಕೆಯು, ಮೀಥೇನ್‌ನಂತಹ ಈ ಹಿಂದೆ ಹಿಮದಡಿ ಸಿಲುಕಿದ ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುವ ಮೂಲಕ ಹವಾಮಾನ ಬದಲಾವಣೆಯನ್ನು ಮತ್ತಷ್ಟು ಭೀಕರಗೊಳಿಸಲಿವೆ ಎಂದು ವಿಜ್ಞಾನಿಗಳು ಅನೇಕ ಸಮಯದಿಂದ ಎಚ್ಚರಿಸುತ್ತಾ ಬಂದಿದ್ದಾರೆ. ಆದರೆ ಸುಪ್ತ ರೋಗಕಾರಕಗಳ (ಪ್ಯಾಥೋಜೆನ್‌ಗಳು) ಪರಿಣಾಮದ ಬಗ್ಗೆ ಇನ್ನೂ ಹೆಚ್ಚಿನ ತಿಳುವಳಿಕೆ ಇಲ್ಲ ಎಂದಿದ್ದಾರೆ.

ರಷ್ಯಾ, ಜರ್ಮನಿ ಮತ್ತು ಫ್ರಾನ್ಸ್ ದೇಶಗಳ ಸಂಶೋಧಕರ ತಂಡ ಈ ವೈರಸ್‌ಗಳ ಕುರಿತು ಅಧ್ಯಯನ ನಡೆಸಿದೆ. ತಾವು ಅಧ್ಯಯನಕ್ಕೆ ಒಳಪಡಿಸಿದ ವೈರಸ್‌ಗಳ ಪುನಶ್ಚೇತನದ ಪರಿಣಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬಹುದಾಗಿದೆ. ಏಕೆಂದರೆ ತಾವು ಸಂಶೋಧನೆಗೆ ಒಳಪಡಿಸಿದ ಮಾದರಿಗಳು ಅಮೀಬಾ ಸೂಕ್ಷ್ಮಜೀವಿಗಳ ಮೇಲೆ ಸೋಂಕು ಉಂಟುಮಾಡುವಷ್ಟು ಸಮರ್ಥವಾಗಿವೆ ಎಂದು ಅವರು ಪ್ರತಿಪಾದಿಸಿದ್ದಾರೆ. ಆದರೆ ವೈರಸ್ ಒಂದರ ಪರಿಣಾಮಕಾರಿ ಪುನಶ್ಚೇತನವು ಪ್ರಾಣಿಗಳು ಅಥವಾ ಮನುಷ್ಯರಿಗೆ ಸೋಂಕು ಹರಡಿದರೆ ಹೆಚ್ಚಿನ ಸಮಸ್ಯೆ ಉಂಟಾಗಬಹುದು. ಅಪಾಯ ಇರುವುದು ಸತ್ಯ ಎಂಬುದನ್ನು ತಮ್ಮ ಅಧ್ಯಯನದ ಮೂಲಕ ಲೆಕ್ಕಹಾಕಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪುರಾತನ ಹಿಮಹಾಸುಗಳು ಕರಗಿ ಹೋದಂತೆ ಈ ಅಪರಿಚಿತ ವೈರಸ್‌ಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಬಯೋ ಆರ್‌ಎಕ್ಸ್‌ಐವಿಯಲ್ಲಿ ಪ್ರಕಟವಾದ ಲೇಖನದಲ್ಲಿ ವಿಜ್ಞಾನಿಗಳ ತಂಡ ಹೇಳಿದೆ.

ಹೊರಾಂಗಣ ಸನ್ನಿವೇಶಗಳಿಗೆ ಒಮ್ಮೆ ತೆರೆದುಕೊಂಡ ಬಳಿಕ ಈ ವೈರಸ್‌ಗಳು ಎಷ್ಟು ಕಾಲ ಸೋಂಕುಕಾರಕವಾಗಿರುತ್ತವೆ ಮತ್ತು ಅವುಗಳನ್ನು ಹೇಗೆ ಎದುರಿಸಲು ಸಾಧ್ಯವಾಗುತ್ತದೆ ಹಾಗೂ ಸೂಕ್ತ ಜೀವಿಗೆ ಸೋಂಕು ಹರಡುತ್ತವೆ ಎನ್ನುವುದನ್ನು ಅಂದಾಜಿಸಲು ಅಸಾಧ್ಯ ಎಂದು ವರದಿ ತಿಳಿಸಿದೆ.

ಆದರೆ ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಹಿಮ ಹಾಸಿನ ಕರಗುವಿಕೆ ಹೆಚ್ಚುತ್ತಲೇ ಇದೆ. ಅಧಿಕ ಜನರು ಕೈಗಾರಿಕಾ ಉದ್ದೇಶಗಳ ಕಾರಣ ಆರ್ಕ್‌ಟಿಕ್ ಪ್ರದೇಶಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಇದರಿಂದ ಹಿಮ ಪ್ರದೇಶ ಕಣ್ಮರೆಯಾಗುತ್ತಿದ್ದು, ವೈರಸ್‌ಗಳ ಅಪಾಯ ದೊಡ್ಡ ಮಟ್ಟದಲ್ಲಿ ಉಂಟಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

suddiyaana