ಚೆನ್ನೈ ತಂಡದಲ್ಲಿ ಸಂಜುಗೆ ಹೊಸ ಅನುಭವ – ಚೇಟಾ ಕೈ ಖಾಲಿ.. ಖಾಲಿ.. ಹೇಗಿರಲಿದೆ ಫೀಲ್ಡಿಂಗ್?

ರಾಜಸ್ಥಾನ್ ರಾಯಲ್ಸ್ ಟೀಮ್ನಲ್ಲಿ ಕೆಲ ವರ್ಷಗಳ ಕಾಲ ಕೀಪಿಂಗ್ನಲ್ಲಿ ಕಮಾಲ್ ಮಾಡಿದವರು ಸಂಜು ಸ್ಯಾಮ್ಸನ್. ಇದೀಗ ಸಂಜು ಚೆನ್ನೈ ಸೂಪರ್ ಕಿಂಗ್ಸ್ ತೆಕ್ಕೆಗೆ ಸೇರಿದ್ದಾರೆ. ಆದರೆ, ಇಲ್ಲಿ ಸಂಜು ಕೈಯಲ್ಲಿ ಗ್ಲೌಸ್ ಇಲ್ಲ. ಹೀಗಾಗಿ ಸಂಜುಗೆ ಈ ಬಾರಿಯ ಐಪಿಎಲ್ ನಿಜಕ್ಕೂ ಹೊಸತನ, ಹೊಸ ಅನುಭವ ನೀಡಲಿದೆ.
ಇದನ್ನೂ ಓದಿ:ಮುಂಬೈಗೆ ಸೂರ್ಯ ಕ್ಯಾಪ್ಟನ್? – ಪಾಂಡ್ಯನೇ ಪಟ್ಟ ಬಿಟ್ಟು ಕೊಡ್ತಾರಾ?
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಅಭ್ಯಾಸದಲ್ಲಿ ಬ್ಯುಸಿಯಾಗಿದೆ. ಇದರ ಮಧ್ಯೆ ತಂಡಕ್ಕೆ ಸೇರಿರುವ ಸಂಜು ಸ್ಯಾಮ್ಸನ್, ವಿಕೆಟ್ ಕೀಪಿಂಗ್ ಬದಲು ಔಟ್ಫೀಲ್ಡರ್ ಆಗಿ ಅಭ್ಯಾಸ ನಡೆಸುತ್ತಿದ್ದಾರೆ. ಎಂ.ಎಸ್. ಧೋನಿ ವಿಕೆಟ್ ಕೀಪಿಂಗ್ ಮುಂದುವರಿಸುವ ಸಾಧ್ಯತೆಗಳಿದ್ದು, ಸಂಜು ಅವರು ಈ ಬಾರಿಯ ಐಪಿಎಲ್ ನಲ್ಲಿ ಹೊಸ ಪಾತ್ರ ನಿಭಾಯಿಸಲಿದ್ದಾರೆ. ರಾಜಸ್ಥಾನ ರಾಯಲ್ಸ್ನಿಂದ CSKಗೆ ಬಂದಿರುವ ಸಂಜು ಸ್ಯಾಮ್ಸನ್, ಔಟ್ಫೀಲ್ಡ್ನಲ್ಲಿ ಫೀಲ್ಡಿಂಗ್ ಪ್ರಾಕ್ಟೀಸ್ ಮಾಡುತ್ತಿರುವ ಫೋಟೋಗಳು ಈಗ ಕುತೂಹಲಕ್ಕೆ ಕಾರಣವಾಗಿದೆ. ಚೆ್ನೈನ ಮಾಜಿ ಆಟಗಾರ ಅಶ್ವಿನ್ ‘X’ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಎಲ್ಲಾ ಚರ್ಚೆಗಳಿಗೆ ಕಾರಣವಾಗಿದೆ. ಫೀಲ್ಡಿಂಗ್ ಕೋಚ್ ಜೇಮ್ಸ್ ಫೋಸ್ಟರ್ ಅವರ ಗೈಡೆನ್ಸ್ನಲ್ಲಿ ಸಂಜು ಔಟ್ಫೀಲ್ಡ್ನಲ್ಲಿ ಹೈ ಕ್ಯಾಚ್ಗಳನ್ನು ಹಿಡಿಯುವ ಅಭ್ಯಾಸ ಮಾಡುತ್ತಿರುವುದನ್ನು ಫೋಟೋಗಳಲ್ಲಿ ನೋಡಬಹುದು. ‘ಇದೇನಾದ್ರೂ ಸೂಚನೇನಾ, ಅಥವಾ ನಿಧಾನವಾಗಿ ಅಭ್ಯಾಸ ಮಾಡ್ಕೊಳ್ತಿದ್ದಾರಾ?’ ಎಂದು ಅಶ್ವಿನ್ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಎಂ.ಎಸ್. ಧೋನಿಯಿಂದ ಸಂಜು ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ತಾರೆ ಅಂತ ಎಲ್ಲರೂ ಅಂದ್ಕೊಂಡಿದ್ದರು. ಆದರೆ, ಹೊಸ ವರದಿಗಳ ಪ್ರಕಾರ, ಧೋನಿಯೇ ವಿಕೆಟ್ ಹಿಂದೆ ಮುಂದುವರಿಯಲಿದ್ದು, ಸಂಜು ಸ್ಪೆಷಲಿಸ್ಟ್ ಔಟ್ಫೀಲ್ಡರ್ ಆಗಿ ಆಡುವ ಸಾಧ್ಯತೆ ಇದೆ. ಸಂಜು ಒಬ್ಬ ಅತ್ಯುತ್ತಮ ಅಥ್ಲೀಟ್ ಆಗಿದ್ದು, ಔಟ್ಫೀಲ್ಡ್ನಲ್ಲೂ ನಂಬಿಕಸ್ಥ ಫೀಲ್ಡರ್ ಅನ್ನೋದು ಈ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. 2026ರ ಟಿ20 ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಂತರ ಸಂಜು ಚೆನ್ನೈ ಕ್ಯಾಂಪ್ ಸೇರಿದ್ದಾರೆ. ಭಾರತ ಕಪ್ ಗೆದ್ದ ಆ ಟೂರ್ನಿಯಲ್ಲಿ ಸಂಜು ‘ಸರಣಿ ಶ್ರೇಷ್ಠ’ ಪ್ರಶಸ್ತಿ ಪಡೆದಿದ್ದರು. ಕೊನೆಯ ಮೂರು ಪ್ರಮುಖ ಪಂದ್ಯಗಳಲ್ಲಿ ಸತತವಾಗಿ ಅರ್ಧಶತಕ ಬಾರಿಸಿ ಸಂಜು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. 11 ವರ್ಷಗಳ ಕಾಲ ರಾಜಸ್ಥಾನ ರಾಯಲ್ಸ್ ಜೊತೆಗಿನ ಸಂಬಂಧವನ್ನು ಮುಗಿಸಿಕೊಂಡು ಸಂಜು ಚೆನ್ನೈಗೆ ಬಂದಿದ್ದಾರೆ. ಈ ಟ್ರಾನ್ಸ್ಫರ್ನಲ್ಲಿ ರಾಜಸ್ಥಾನ ತಂಡ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ಪಡೆದುಕೊಂಡಿದೆ. ಮಾರ್ಚ್ 30ರಂದು ಗುವಾಹಟಿಯಲ್ಲಿ ಸಂಜು ತಮ್ಮ ಹಳೆಯ ತಂಡವಾದ ರಾಜಸ್ಥಾನ ರಾಯಲ್ಸ್ ವಿರುದ್ಧವೇ ಚೆನ್ನೈ ಜೆರ್ಸಿಯಲ್ಲಿ ಮೊದಲ ಪಂದ್ಯ ಆಡಲಿದ್ದಾರೆ. ಅಂದು ಸಂಜು ಅವರ ಪಾತ್ರ ಏನಿರಲಿದೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ನೋಡಿರಿ

