ಪೃಥ್ವಿರಾಜ್ ಸುಕುಮಾರನ್ ಆಸ್ಪತ್ರೆಯಿಂದ ಡಿಸ್ಚಾರ್ಜ್‌ –  ಆದರೂ ಅಭಿಮಾನಿಗಳಿಗೆ ಕಹಿ ಸುದ್ದಿ!

ಪೃಥ್ವಿರಾಜ್ ಸುಕುಮಾರನ್ ಆಸ್ಪತ್ರೆಯಿಂದ ಡಿಸ್ಚಾರ್ಜ್‌ –  ಆದರೂ ಅಭಿಮಾನಿಗಳಿಗೆ ಕಹಿ ಸುದ್ದಿ!

ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಚಿತ್ರೀಕರಣದ ವೇಳೆ ಗಾಯಗೊಂಡಿದ್ದರು. ಶೂಟಿಂಗ್‌ ವೇಳೆ  ಸುಕುಮಾರನ್ ಅವರ ಕಾಲಿಗೆ ಗಂಭೀರವಾಗಿ ಏಟು ಬಿದ್ದಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದೀಗ ಸಕುಮಾರನ್‌ ಅವರು ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ.

ಇದನ್ನೂ ಓದಿ: ಶೂಟಿಂಗ್ ವೇಳೆ ಪೃಥ್ವಿರಾಜ್ ಸುಕುಮಾರನ್‌ಗೆ ಗಂಭೀರ ಏಟು – ಆಸ್ಪತ್ರೆಗೆ ದಾಖಲು

ಪೃಥ್ವಿರಾಜ್​ ಸುಕುಮಾರನ್ ಅವರ ಕಾಲಿಗೆ ಗಂಭೀರ ಗಾಯ ಆಗಿರೋದ್ರಿಂದ ಸರ್ಜರಿಯೂ ನಡೆದಿದ್ದು, ಯಶಸ್ವಿಯಾಗಿದೆ. ಆದರೂ ಕೂಡ ಸುಕುಮಾರನ್‌ ಅವರು ತಿಂಗಳ ಕಾಲ ಬೆಡ್‌ ರೆಸ್ಟ್‌ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ಸುಕುಮಾರನ್​ ಅವರು ಕೆಲವು ತಿಂಗಳುಗಳ ಕಾಲ ಯಾವುದೇ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಇದರಿಂದಾಗಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆದಷ್ಟು ಬೇಗ ಸುಕುಮಾರನ್‌ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಇನ್ನು ಪೃಥ್ವಿರಾಜ್​ ಸುಕುಮಾರನ್​ ಅವರಿಗೆ ಸಖತ್​ ಬೇಡಿಕೆ ಇದೆ. ಹಲವು ವರ್ಷಗಳಿಂದ ಅವರು ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದಾರೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಅವರು ಯಶಸ್ಸು ಕಂಡಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ಸೇರಿದಂತೆ ಅನೇಕ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಜೊತೆಗೆ ಅವರು ಸಿನಿಮಾ ಮಾಡುತ್ತಿದ್ದಾರೆ. ಇಂಥ ಸಮಯದಲ್ಲಿ ಅವರಿಗೆ ಪೆಟ್ಟಾಗಿದ್ದು, ಎಲ್ಲ ಕೆಲಸಗಳಿಗೆ ಅನಿವಾರ್ಯವಾಗಿ ಬ್ರೇಕ್‌ ನೀಡಬೇಕಾಗಿದೆ.

ಇಡುಕಿ ಜಿಲ್ಲೆಯಲ್ಲಿ ‘ವಿಲಾಯತ್​ ಬುದ್ಧ’ ಸಿನಿಮಾದ ಶೂಟಿಂಗ್​ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಆ್ಯಕ್ಷನ್​ ದೃಶ್ಯಗಳಲ್ಲಿ ನಟಿಸುತ್ತಿದ್ದ ಪೃಥ್ವಿರಾಜ್​ ಸುಕುಮಾರನ್​ ಅವರು ಗಾಯಗೊಂಡರು. ಆ ಸುದ್ದಿ ತಿಳಿದಾಗ ಅಭಿಮಾನಿಗಳಿಗೆ ಆತಂಕ ಆಗಿತ್ತು. ಆದರೆ ಈಗ ಅವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ತಾವು ಚೇತರಿಸಿಕೊಳ್ಳುತ್ತಿರುವುದಾಗಿ ಸ್ವತಃ ಪೃಥ್ವಿರಾಜ್​ ಸುಕುಮಾರನ್​ ಮಾಹಿತಿ ನೀಡಿದ್ದಾರೆ. ಅಲ್ಲದೇ ತಮ್ಮ ಬಗ್ಗೆ ಕಾಳಜಿ ತೋರಿಸಿದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.

ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಸಿನಿಮಾದಲ್ಲಿ ಪೃಥ್ವಿರಾಜ್​ ಸುಕುಮಾರನ್​ ಅವರಿಗೆ ಒಂದು ಪ್ರಮುಖ ಪಾತ್ರ ಇದೆ. ಪ್ರಭಾಸ್​ ನಾಯಕನಾಗಿರುವ ಈ ಚಿತ್ರದಲ್ಲಿ ಪೃಥ್ವಿರಾಜ್​ ಅವರದ್ದು ನೆಗೆಟಿವ್​ ರೋಲ್​ ಎಂದು ಸಿನಿಪ್ರಿಯರು ಊಹಿಸುತ್ತಿದ್ದಾರೆ. ಈ ಹಿಂದೆ ಬಿಡುಗಡೆಯಾದ ಫಸ್ಟ್​ ಲುಕ್​ ಪೋಸ್ಟರ್​ನಲ್ಲಿ ಅವರ ಗೆಟಪ್​ ಗಮನ ಸೆಳೆದಿತ್ತು. ಈ ಚಿತ್ರಕ್ಕೆ ಶೂಟಿಂಗ್​ ಮುಕ್ತಾಯವಾಗಿದೆ. ಪೃಥ್ವಿರಾಜ್​ ಸುಕುಮಾರನ್​ ಅವರು ವಿಶ್ರಾಂತಿ ಪಡೆದು, ಸಂಪೂರ್ಣ ಚೇತರಿಸಿಕೊಳ್ಳುವ ವೇಳೆಗೆ ಈ ಚಿತ್ರದ ಪ್ರಚಾರ ಕಾರ್ಯಗಳು ಆರಂಭ ಆಗಲಿವೆ ಎಂದು ಹೇಳಲಾಗುತ್ತಿದೆ.

suddiyaana