ಯಾರಿಗೂ ಸಿಗದ ಹೀರೋಯಿನ್ ರುಕ್ಮಿಣಿ.. ಕಾಂತಾರದಲ್ಲೂ ರುಕ್ಕು ದುರಂತ ನಾಯಕಿ! – 7 ಸಿನಿಮಾ.. ಹೀರೋ ಸಿಕ್ಕಿಲ್ಲ ಯಾಕೆ?

ಯಾರಿಗೂ ಸಿಗದ ಹೀರೋಯಿನ್ ರುಕ್ಮಿಣಿ.. ಕಾಂತಾರದಲ್ಲೂ ರುಕ್ಕು ದುರಂತ ನಾಯಕಿ! – 7 ಸಿನಿಮಾ.. ಹೀರೋ ಸಿಕ್ಕಿಲ್ಲ ಯಾಕೆ?

ಕಾಂತಾರ ಚಾಪ್ಟರ್‌ 1.. ಡಿವೈನ್‌ ಸ್ಟಾರ್‌ ನಿರ್ದೇಶಿಸಿ, ನಟಿಸಿರುವ ಕಾಂತಾರಾ ಚಾಪ್ಟರ್‌ 1 ಸಿನಿಮಾ ದೇಶ ವಿದೇಶಗಳಲ್ಲಿ ಅಬ್ಬರಿಸ್ತಿದೆ. ಕಥೆ, ಚಿತ್ರಕಥೆ, ಅಬ್ಬರಕ್ಕೆ ಸಿನಿರಸಿಕರು ಮನಸೋತಿದ್ದಾರೆ. ಈ ಸಿನಿಮಾದಲ್ಲಿ ರಾಜಕುಮಾರಿ ಕನಕವತಿಯಾಗಿ ನಟಿಸಿದ್ದು ರುಕ್ಮಿಣಿ ವಸಂತ್. ಸಿನಿಮಾ ಟ್ರೈಲರ್ ರಿಲೀಸ್ ಆದಾಗಿನಿಂದ ರುಕ್ಮಿಣಿ ಟ್ರೆಂಡಿಂಗ್ ನಲ್ಲಿದ್ದಾರೆ. ಅವ್ರ ಅಂದಕ್ಕೆ ಫ್ಯಾನ್ಸ್‌ ಮನಸೋತಿದ್ದಾರೆ.. ಯುವಕರು ರಾಜಕುಮಾರಿ ಕನಕವತಿ ಗುಂಗಲ್ಲೇ ಇದ್ದಾರೆ.. ಕಾಂತಾರ ಚಾಪ್ಟರ್‌ 1 ಸಿನಿಮಾದಿಂದಾಗಿ ರುಕ್ಮಿಣಿ ವಸಂತ್‌ ನ್ಯಾಷನಲ್‌ ಕ್ರಶ್‌ ಆಗಿದ್ದಾರೆ.. ಆದ್ರೆ ರುಕ್ಮಿಣಿ ವಸಂತ್‌ ಬಗ್ಗೆ ಒಂದು ಇಂಟ್ರೆಸ್ಟಿಂಗ್‌ ವಿಚಾರವೊಂದಿದೆ. ಕನ್ನಡದಲ್ಲಿ ನಟಿಸಿರೋ ಯಾವ ಸಿನಿಮಾಗಳಲ್ಲೂ ರುಕ್ಮಿಣಿ ವಸಂತ್‌ ಗೆ ಹೀರೋ ಸಿಕ್ಕಿಲ್ಲ.

ಇದನ್ನೂ ಓದಿ: ಮೂರನೇ ಪತ್ನಿಗೂ ಕೈ ಕೊಟ್ಟ ಸಾನಿಯಾ ಮಿರ್ಜಾ ಮಾಜಿ ಗಂಡ – ಸನಾ ಜಾವೇದ್ ಮತ್ತು ಶೋಯೆಬ್ ಮಲಿಕ್ ದೂರ ದೂರ?

ರುಕ್ಮಿಣಿ ವಸಂತ್‌.. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ಸ್ಟಾರ್‌ ನಟಿಯಾಗಿದ್ದಾರೆ. ಬೀರ್‌ಬಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ರುಕ್ಮಿಣಿ ವಸಂತ್, ಸಪ್ತಸಾಗರದಾಚೆ ಎಲ್ಲೋ ಸೈಡ್ ಎ  ಮತ್ತು ಸೈಡ್ ಬಿ ಚಿತ್ರಗಳ ಮೂಲಕ ಕರುನಾಡಿನಾದ್ಯಂತ ಮನೆ ಮಾತಾದ್ರು. ಅಕ್ಕ-ಪಕ್ಕದ ರಾಜ್ಯದವರ ಕಣ್ಣಿಗೂ ಬಿದ್ದರು. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾದಲ್ಲೂ ಚಾನ್ಸ್‌ ಪಡ್ಕೊಂಡಿದ್ದಾರೆ. ಇದೀಗ ಕಾಂತಾರಾ ಚಾಪ್ಟರ್‌ 1 ನಲ್ಲಿ ರುಕ್ಮಿಣಿ ರಾಜಕಕುಮಾರಿ ಕನಕವತಿಯಾಗಿ ತೆರೆಮೇಲೆ ಮಿಂಚಿದ್ದಾರೆ. ಆ ಭಾಷೆ ಈ ಭಾಷೆ.. ಎನ್ನದೇ ಎಲ್ಲರೂ ರಾಣಿ ಕನಕವತಿ ಹೆಸರನ್ನೇ ಕನವರಿಸುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲೂ ರುಕ್ಮಿಣಿ ವಸಂತ್‌ ಅಭಿನಯ, ಸೌಂದರ್ಯದ ಗುಣಗಾನವೇ ನಡೆಯುತ್ತಿದೆ.. ಇದೀಗ ಕನಕವತಿ ನ್ಯಾಷನಲ್‌ ಕ್ರಶ್‌ ಆಗಿದ್ದಾರೆ.. ಆದ್ರೆ ಬ್ಯಾಡ್‌ ಲಕ್‌ ಅಂದ್ರೆ ಕಾಂತಾರದಲ್ಲೂ ರುಕ್ಮಿಣಿಗೆ ಹೀರೋ ಸಿಕ್ಕಿಲ್ಲ..

ಕಾಂತಾರ ಚಾಪ್ಟರ್‌ 1 ಸಿನಿಮಾದಲ್ಲಿ ರುಕ್ಮಿಣಿ ವಸಂತ್‌ ರಾಜಕುಮಾರಿ ಕನಕವತಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್‌ ಪಾತ್ರ  ರಿವೀಲ್‌ ಆಗ್ತಿದ್ದಂತೆ ಫ್ಯಾನ್ಸ್‌ ಖುಷಿಪಟ್ಟಿದ್ರು. ಈ ಸಿನಿಮಾದಲ್ಲಾದ್ರೂ ನಟಿಗೆ ಹೀರೋ ಸಿಕ್ತಾರೆ ಅಂತಾ ಅಂದ್ಕೊಂಡಿದ್ರು.. ಆದ್ರೆ ಸಿನಿ ಪ್ರೇಕ್ಷಕರ ನಿರೀಕ್ಷೆ ಹುಸಿಯಾಗಿದೆ.. ಕಾಂತಾರಾ ಚಾಪ್ಟರ್‌ 1 ಸಿನಿಮಾ ಕತೆಯಲ್ಲಿ ಡೈರೆಕ್ಟರ್‌ ಬಿಗ್‌ ಟ್ವಿಸ್ಟ್‌ ಕೊಟ್ಟಿದ್ದಾರೆ.. ಸಿನಿಮಾದ ಕ್ಲೈಮ್ಯಾಕ್ಸ್‌ ನಲ್ಲಿ ಕನಕವತಿ ಪಾತ್ರದ ಅಂತ್ಯವಾಗಿದೆ. ಕನಕವತಿ ಕುಂತಂತ್ರ ಗೊತ್ತಾಗ್ತಿದ್ದಂತೆ ಬೆರ್ಮೆ ದೈವದ ಅವತಾರ ತಾಳಿ ಕನಕವತಿಯನ್ನ ಸಂಹಾರ ಮಾಡ್ತಾನೆ. ಫಸ್ಟ್‌ ಹಾಫ್‌ ನಲ್ಲಿ ಸಿನಿಮಾ ನೋಡಿದವರು, ಸೆಕೆಂಡ್‌ ಹಾಫ್‌ ನಲ್ಲಿ ರಿಷಭ್‌ ರುಕ್ಮಿಣಿ ಒಂದಾಗ್ತಾರೆ ಅನ್ನೋ ಕುತೂಹಲ ಇತ್ತು. ಆದ್ರೆ ಇಲ್ಲೂ ಒಂದಾಗದೆ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ದೊಡ್ಡ ಟ್ವಿಸ್ಟ್‌ ಇಟ್ಟ ರಿಷಭ್‌,  ಹೀರೋ ಹಿರೋಯಿನ್‌ ಒಂದಾಗದಂತೆ ಮಾಡಿದ್ದಾರೆ.. ಹೀಗಾಗಿ ಕಾಂತಾರ ಚಾಪ್ಟರ್‌ 1 ನಲ್ಲೂ ರುಕ್ಮಿಣಿಗೆ ಹೀರೋ ಸಿಗೋದಿಲ್ಲ. ಇದು ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದೆ.

ಅಂದ್ಹಾಗೆ ರುಕ್ಮಿಣಿ ವಸಂತ್‌ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದು, ಬೀರಬಲ್ ಟ್ರಯಾಲಜಿ ಚಿತ್ರದ ಮೂಲಕ. ಒಂದು ಕೊಲೆಯ ಸುತ್ತ ಈ ಸಿನಿಮಾ ಕತೆ ಸಾಗಿದೆ. ಇದ್ರಲ್ಲಿ ರುಕ್ಮಿಣಿ ವಸಂತ್‌ ನಾಯಕಿ  ಜಾಹ್ನವಿ ಪಾತ್ರದಲ್ಲಿ ನಟಿಸಿದ್ರು. ಮೊದಲ ಸಿನಿಮಾದಲ್ಲೂ ನಟಿಗೆ ನಾಯಕ ಸಿಗೋದೇ ಇಲ್ಲ.

ಇನ್ನು ಬೀರಬಲ್‌ ಟ್ರಯಾಲಜಿ ಸಿನಿಮಾ ಬೆನ್ನಲೇ ರುಕ್ಮಿಣಿಗೆ ದೊಡ್ಡ ಅವಕಾಶವೇ ಹುಡುಕಿಕೊಂಡು ಬಂತು.. ಸಪ್ತಸಾಗರದಾಚೆ ಎಲ್ಲೋ ಸೈಡ್‌ ಎ ನಲ್ಲಿ ಚಾನ್ಸ್‌ ಸಿಕ್ಕಿತ್ತು.. ಸೈಡ್‌ ಎ ನಲ್ಲಿ ರಕ್ಷಿತ್‌ ಶೆಟ್ಟಿ ನಾಯಕನಾಗಿ ಮನು ಪಾತ್ರದ ಮೂಲಕ ಮಿಂಚಿದ್ರು. ರುಕ್ಮಿಣಿ ಪ್ರಿಯಾ ಪಾತ್ರಕ್ಕೆ ಜೀವ ತುಂಬಿದ್ರು. ಈ ಚಿತ್ರದಲ್ಲಿ ಸುಂದರ ಲವ್‌ ಸ್ಟೋರಿಯನ್ನ ತೋರಿಸಲಾಗಿತ್ತು.. ಆದರೆ, ಇಲ್ಲಿ ಮನುಗೆ ಪ್ರಿಯಾ ಸಿಗೋದೇ ಇಲ್ಲ. ಮನು ಈ ಪ್ರಿಯಾಗೋಸ್ಕರವೇ ಪ್ರೀತಿಯಲ್ಲಿಯೇ ಕಳೆದು ಹೋಗ್ತಾರೆ. ಅದಾದ್ಮೇಲೆ ಸಪ್ತ ಸಾಗರದಾಚೆ ಎಲ್ಲೋ ಸೈ ಬಿ ನಲ್ಲೂ ರುಕ್ಮಿಣಿ ವಸಂತ್‌ ನಟಿಸಿದ್ದು.. ಇಲ್ಲೂ ಪ್ರಿಯಾ ಹಾಗೂ ಮನು ಒಂದಾಗಲ್ಲ.

ಇನ್ನು ರುಕ್ಮಿಣಿ ವಸಂತ್ ಸ್ಯಾಂಡಲ್‌ವುಡ್‌ ನ ಮತ್ತೊಂದು ಸಿನಿಮಾದಲ್ಲೂ ನಟಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನದಾರಿಯಲ್ಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ರು. ಈ ಸಿನಿಮಾದಲ್ಲಿ ಲೀಲಾ ಪಾತ್ರಕ್ಕೆ ಜೀವ ತುಂಬಿದ್ದು, ಅದ್ಭುತವಾಗಿ ನಟಿಸಿದ್ದಾರೆ. ಆದರೆ, ಈ ಒಂದು ಪಾತ್ರಕ್ಕೆ ಇಲ್ಲಿ ದುರಂತ ಅಂತ್ಯವೇ ಇದೆ. ಹಾಗಾಗಿಯೇ ಈ ಸಿನಿಮಾದಲ್ಲೂ ನಾಯಕ ಗೋಲ್ಡನ್ ಸ್ಟಾರ್ ಗಣೇಶ್‌ಗೆ ರುಕ್ಮಿಣಿ ವಸಂತ್ ಸಿಗೋದೇ ಇಲ್ಲ.

ರುಕ್ಮಿಣಿ ವಸಂತ್‌ ನಾಯಕಿಯಾಗಿ ನಟಿಸಿರೋ ಮತ್ತೊಂದು ಸಿನಿಮಾ  ಬಘೀರ..  ಈ ಚಿತ್ರದಲ್ಲೂ ರುಕ್ಮಿಣಿ ವಸಂತ್ ಡಾಕ್ಟರ್ ಸ್ನೇಹಾ ಆಗಿ ತೆರೆಮೇಲೆ ಮಿಂಚಿದ್ದಾರೆ. ಈ ಮೂಲಕ ಎರಡನೇ ಸಲ ಡಾಕ್ಟರ್ ಪಾತ್ರವನ್ನೆ ಮಾಡಿದ್ದಾರೆ. ಆದರೆ, ಇಲ್ಲೂ ನಾಯಕ ಬಘೀರನಿಗೆ ಈ ಡಾಕ್ಟರ್ ಸಿಗೋದೇ ಇಲ್ಲ ಅನ್ನೋದು ಬೇಸರ ಸಂಗತಿ.

ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರದಲ್ಲು ರುಕ್ಮಿಣಿ ವಸಂತ್ ಹೀರೋಯಿನ್‌. ರುಕ್ಮಿಣಿ ವಸಂತ್ ಡಾಕ್ಟರ್ ವೈಶಾಲಿ ಪಾತ್ರದಲ್ಲಿ ನಟಿಸಿದ್ರು.. ಈ ಪಾತ್ರದಲ್ಲೂ ರುಕ್ಮಿಣಿ ವಸಂತ್ ಸ್ಪೆಷಲ್ ಫೀಲ್ ಕೊಟ್ಟು ಹೋಗುತ್ತಾರೆ. ಭೈರತಿಯನ್ನ ತುಂಬಾನೆ ಪ್ರೀತಿಸೋ ಡಾಕ್ಟರ್ ವೈಶಾಲಿ ಕಡೆಗೆ ಭೈರತಿಯನ್ನ ಬಿಟ್ಟು ಹೋಗುತ್ತಾರೆ. ಅದಕ್ಕೆ ಕಾರಣ ಕೂಡ ಇದೆ. ಭೈರತಿ ಮೊದಲು ನ್ಯಾಯಕ್ಕಾಗಿಯೇ ಹೋರಾಡ್ತಾರೆ. ಆ ಮೇಲೆ ಆ ನ್ಯಾಯ ಪಡೆಯಲು ಅನ್ಯಾಯದ ದಾರಿ ತುಳಿಯುತ್ತಾರೆ. ಹೀಗಾಗಿ ವೈಶಾಲಿ ಬೈರತಿಯಿಂದ ದೂರ ಆಗ್ತಾಳೆ.

ಒಟ್ಟಾರೆ.. ರುಕ್ಮಿಣಿ ವಸಂತ್‌ ಕನ್ನಡ ಸಿನಿಮಾಗಳಲ್ಲಿ ಯಾವ ನಾಯಕನಿಗೂ ಸಿಗದೇ ಇರೋ ನಾಯಕಿಯಾಗಿದ್ದಾರೆ. ಬೇಕಂತಲೇ ರುಕ್ಮಿಣಿ ಇಂಥ ಪಾತ್ರ ಆಯ್ಕೆ ಮಾಡ್ತಿದ್ದಾ? ಅಥವಾ ಇಂತಹದ್ದೇ ಪಾತ್ರ ಆಕೆಯನ್ನ ಹುಡುಕಿಕೊಂಡು ಬರುತ್ತೋ ಗೊತ್ತಿಲ್ಲ. ಆದ್ರೆ ಸಿಕ್ಕ ಎಲ್ಲಾ ಪಾತ್ರದಲ್ಲೂ ಅದ್ಭುತವಾಗಿ ನಟಿಸಿ, ಜನರ ಮನದಲ್ಲಿ ವಿಶೇಷ ಜಾಗ ಮಾಡಿಕೊಂಡಿದ್ದಾರೆ. ಇದೀಗ ಕಾಂತಾರ ಚಾಪ್ಟರ್‌ 1 ಸಿನಿಮಾದಲ್ಲಿ ರಾಜಕುಮಾರಿ ಕನಕವತಿಯಾಗಿ ಸಿನಿ ಪ್ರೇಕ್ಷಕರ ಮನಸನ್ನ ಗೆದ್ದಿದ್ದಾರೆ. ಆದ್ರೆ ಈ ಸಿನಿಮಾದಲ್ಲೂ ರುಕ್ಮಿಣಿ ಹೀರೋ ಸಿಕ್ಕಿಲ್ಲ ಅನ್ನೋದು ಸಿನಿ ಪ್ರೇಮಿಗಳಿಗೆ ಕೊಂಚ ಬೇಸರ ತರಿಸಿದೆ. ಮುಂದಿನ ಸಿನಿಮಾಗಳಲ್ಲಾದ್ರೂ ರುಕ್ಮಿಣಿಗೆ ನಾಯಕ ಸಿಗ್ತಾನಾ ಅಂತಾ ಕಾದು ನೋಡ್ಬೇಕು.

Shwetha M