RCB ವಿಕ್ಟರಿ.. RRಗೆ ಸೋಲಿನ ಭೀತಿ – ಮೋಸ್ಟ್ ಡೇಂಜರಸ್ ಆಗಿದ್ದೇಗೆ ಕೊಹ್ಲಿ?
ಬೆಂಗಳೂರು ಟೀಂ ಪ್ಲಸ್, ಮೈನಸ್ ಏನು?

RCB ವಿಕ್ಟರಿ.. RRಗೆ ಸೋಲಿನ ಭೀತಿ – ಮೋಸ್ಟ್ ಡೇಂಜರಸ್ ಆಗಿದ್ದೇಗೆ ಕೊಹ್ಲಿ?ಬೆಂಗಳೂರು ಟೀಂ ಪ್ಲಸ್, ಮೈನಸ್ ಏನು?

ಜಂಟಲ್ ಮೆನ್ ಗೇಮ್ ಅಂತಾನೇ ಕರೆಸಿಕೊಳ್ಳೋ ಕ್ರಿಕೆಟ್​ನಲ್ಲಿ ಲಾಸ್ಟ್ ಬಾಲ್​ವರೆಗೂ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಲೇ ಇರುತ್ತೆ. ಫ್ರಾಕ್ಷನ್ ಆಫ್ ಸೆಕೆಂಡ್​ನಲ್ಲಿ ಫಲಿತಾಂಶವೇ ಉಲ್ಟಾಪಲ್ಟಾ ಆದ ಎಕ್ಸಾಂಪಲ್ಸ್ ಕಣ್ಮುಂದೆಯೇ ಇದೆ. ಈ ಸಲದ ಐಪಿಎಲ್ ಟೂರ್ನಿಯಲ್ಲಿ ಆರ್​ಸಿಬಿ ಜರ್ನಿ ಕೂಡ ಥೇಟ್ ಇದೇ ಥರ ಇತ್ತು. ಲೀಗ್​ನ ಫಸ್ಟ್ ಆಫ್ ಪಂದ್ಯಗಳಲ್ಲಿ ಬರೀ ಸೋಲು. ಟೂರ್ನಿಯಿಂದ ಬಹುಶಃ ಬೆಂಗಳೂರು ತಂಡವೇ ಫಸ್ಟ್ ಹೊರ ಬೀಳಬಹುದು ಅಂತಾ ಕ್ರಿಕೆಟ್ ಪಂಡಿತರೇ ಹೇಳ್ತಿದ್ರು. ಆದ್ರೆ ಹಾಲಿ ಚಾಂಪಿಯನ್ ಚೆನ್ನೈ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿ ರಾಯಲ್​ ಆಗೇ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದೆ ಫಾಫ್ ಪಡೆ. ಇದೀಗ ಪ್ಲೇಆಫ್​ನ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಕಣಕ್ಕಿಳಿಯಲಿದ್ದಾರೆ. ಆರ್​ಆರ್​ ಮತ್ತು ಆರ್​ಸಿಬಿ ನಡುವಿನ ಕದನದಲ್ಲಿ ಯಾರು ಸ್ಟ್ರಾಂಗ್? ಯಾರಿಗೆ ಗೆಲುವಿನ ಚಾನ್ಸ್ ಜಾಸ್ತಿ ಇದೆ? ಬೆಂಗಳೂರು ತಂಡಕ್ಕೆ ಇರೋ ಪ್ಲಸ್ ಪಾಯಿಂಟ್ ಹಾಗೂ ಮೈನಸ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:RCB Vs RR.. ಮಳೆ ಬಂದ್ರೆ? – ಪಂದ್ಯ ರದ್ದಾದ್ರೆ ಯಾರಿಗೆ ಪ್ಲಸ್?

ಕೊಲ್ಕತ್ತಾ ನೈಟ್ ರೈಡರ್ಸ್, ಸನ್​ರೈಸರ್ಸ್​ ಹೈದರಾಬಾದ್​​​, ರಾಜಸ್ಥಾನ್​ ರಾಯಲ್ಸ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇ ಆಫ್​ಗೆ ಎಂಟ್ರಿ ನೀಡಿವೆ. ಮೇ 22ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆಯಲಿರುವ ಎಲಿಮಿನೇಟರ್ ಮ್ಯಾಚ್​ನಲ್ಲಿ ರಾಜಸ್ಥಾನ ಮತ್ತು ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಎರಡೂ ತಂಡಗಳಿಗೆ ಡೂ ಆರ್ ಡೈ ಮ್ಯಾಚ್ ಆಗಿದೆ. ಯಾಕಂದ್ರೆ ಗೆದ್ದ ತಂಡ ಕ್ವಾಲಿಫೈಯರ್ 2 ರೌಂಡ್​ಗೆ ಸೆಲೆಕ್ಟ್ ಆದ್ರೆ ಸೋತ ತಂಡ ಟೂರ್ನಿಯಿಂದಲೇ ಹೊರ ಬೀಳಲಿದೆ. ಐಪಿಎಲ್​ನಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲು ಕಾಯ್ತಾ ಇರೋ ಆರ್​ಸಿಬಿಗೆ ಆರ್​ಆರ್​ ವಿರುದ್ಧದ ಪಂದ್ಯ ತುಂಬಾನೇ ಇಂಪಾರ್ಟೆಂಟ್ ಆಗಿದೆ.  ಅಷ್ಟಕ್ಕೂ ಉಭಯ ತಂಡಗಳ ಬಲಾಬಲ ಏನು? ಯಾವ ತಂಡದ ಪ್ರಾಬಲ್ಯ ಹೆಚ್ಚಿದೆ? ಹಿಂದಿನ ಸೀಸನ್​ಗಳಲ್ಲಿ ಸೋಲು ಗೆಲುವಿನ ಅಂಕಿ ಅಂಶ ಹೀಗಿದೆ..

ರಾಜಸ್ಥಾನಕ್ಕಿಂತ ಬೆಂಗಳೂರು ಸ್ಟ್ರಾಂಗ್!  

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ಐಪಿಎಲ್ ನಲ್ಲಿ ಒಟ್ಟಾರೆ 31 ಬಾರಿ ಮುಖಾಮುಖಿಯಾಗಿವೆ. ಈ ಪೈಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದಿರುವುದು 13 ಬಾರಿ. ಮತ್ತೊಂದೆಡೆ ಬೆಂಗಳೂರು ತಂಡ 15 ಬಾರಿ ಗೆಲುವು ದಾಖಲಿಸಿದೆ. ಅಂದರೆ ಇಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್​ಸಿಬಿ ಮೇಲುಗೈ ಹೊಂದಿರುವುದು ಸ್ಪಷ್ಟವಾಗಿದೆ. ಇನ್ನು ಪ್ಲೇಆಫ್ ಹಂತದಲ್ಲಿ ಆರ್​ಸಿಬಿ ಮತ್ತು ಆರ್​ಆರ್ ತಂಡಗಳು ಒಂದು ಬಾರಿ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದೆ. 2015 ರಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 71 ರನ್​ಗಳಿಂದ ಸೋಲಿಸಿ ಆರ್​ಸಿಬಿ ದ್ವಿತೀಯ ಕ್ವಾಲಿಫೈಯರ್  ಪ್ರವೇಶಿಸಿತ್ತು. ಹೀಗಾಗಿ ಈ ಸಲವೂ ಆರ್​ಆರ್ ವಿರುದ್ಧ ಆರ್​ಸಿಬಿ ತಂಡವೇ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ. ಮತ್ತೊಂದು ವಿಶೇಷ ಅಂದ್ರೆ ಈ ಬಾರಿಯ ಐಪಿಎಲ್​ನ ಮೊದಲಾರ್ಧದ ಪಂದ್ಯಗಳ ವೇಳೆ ಬೆಂಗಳೂರು ತಂಡ ಆಡಿದ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿತ್ತು. ಬಳಿಕ ನಡೆದ 6 ಪಂದ್ಯಗಳಿಗೆ ಆರು ಪಂದ್ಯಗಳು ಗೆದ್ದು ಪ್ಲೇ ಆಫ್​​ ಪ್ರವೇಶಿಸಿದೆ. ಅರ್ಧ ಸೀಸನ್​​ ಪೂರ್ತಿ ಐಪಿಎಲ್​ ಟೇಬಲ್​ನಲ್ಲಿ ಕೊನೇ ಸ್ಥಾನದಲ್ಲಿದ್ದ ಆರ್​​ಸಿಬಿ 4ನೇ ಸ್ಥಾನಕ್ಕೆ ಜಿಗಿದು ಟೇಬಲ್​ ಟಾಪರ್​ ಆಗಿದ್ದ ರಾಜಸ್ಥಾನ್​​ ವಿರುದ್ಧ ಸೆಣಸಲಿದೆ.

ಸೀಸನ್ 17 ಐಪಿಎಲ್ ಟೂರ್ನಿ ಸಾಕಷ್ಟು ದಾಖಲೆಗಳನ್ನ ಬರೆದಿದೆ. ಈ ಆವೃತ್ತಿಯಲ್ಲಿ ಕೆಕೆಆರ್ ಮತ್ತು ಎಸ್​ಆರ್​ಹೆಚ್ ತಂಡಗಳು ಬಲಿಷ್ಠ ತಂಡಗಳು ಎನಿಸಿಕೊಂಡಿದೆ. ಆದ್ರೆ ಅಸಲಿ ವಿಷ್ಯ ಅಂದ್ರೆ ಈ ಎರಡು ತಂಡಗಳಿಗಿಂತಲೂ ಆರ್​ಸಿಬಿ ಮೋಸ್ಟ್ ಡೇಂಜರಸ್. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಜರ್ನಿಯೇ ರೋಚಕವಾಗಿದೆ. ಲೀಗ್​ ಸ್ಟೇಜ್​​ನಲ್ಲಿ ಅತೀ ಹೆಚ್ಚು ಎಂದರೆ 2,758 ರನ್​ ಗಳಿಸಿದ ಟೀಮ್​ ಆರ್​​ಸಿಬಿ ಆಗಿದೆ. ಜತೆಗೆ ಕೇವಲ ಬೌಂಡರಿಗಳಿಂದಲೇ ಬರೋಬ್ಬರಿ 1,806 ರನ್​ಗಳು ಬಂದಿವೆ. ಒಂದು ಟೀಮ್​ ಆಗಿ ಆರ್​​ಸಿಬಿ ಬರೋಬ್ಬರಿ 17 ಅರ್ಧಶತಕಗಳು ದಾಖಲಿಸಿದ್ದು ಅಲ್ಲದೇ ಕೊನೆ 3 ಓವರ್​ಗಳಲ್ಲಿ 554 ರನ್​​ಗಳು ಕಲೆ ಹಾಕಿದೆ. ಹೀಗಾಗಿ ಈ ಸೀಸನ್​​ನಲ್ಲಿ ಮೋಸ್ಟ್​ ಡೇಂಜರಸ್​ ಟೀಮ್​​ ಕೆಕೆಆರ್​​-ಹೈದರಾಬಾದ್​ ಅಲ್ಲ, ಬದಲಿಗೆ ಆರ್​​ಸಿಬಿ ಅನ್ನೋದು ಪ್ರೂವ್ ಆಗಿದೆ. ಹೀಗಿದ್ರೂ ಆರ್​ಸಿಬಿಯ ಪ್ಲಸ್ ಹಾಗೂ ಮೈನಸ್ ಏನು ಅನ್ನೋದನ್ನೂ ಹೇಳ್ತೇನೆ ನೋಡಿ.

ಆರ್ ಸಿಬಿ ಪ್ಲಸ್ & ಮೈನಸ್! 

ಬೆಂಗಳೂರು ತಂಡದಲ್ಲಿ ಅಗ್ರ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅವರ ಫಾರ್ಮ್, ಆರ್‌ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಲು ಪ್ರಮುಖ ಕಾರಣವಾಗಿದೆ. ಕೊಹ್ಲಿ 14 ಇನ್ನಿಂಗ್ಸ್‌ಗಳಲ್ಲಿ ಆಡಿ ಒಂದು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ ಒಟ್ಟು 708 ರನ್ ಗಳಿಸಿದ್ದಾರೆ. ಆರೇಂಜ್‌ ಕ್ಯಾಪ್‌ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಕ್ರಮಣಕಾರಿ ಆಟ ಮಾತ್ರವಲ್ಲದೆ ಸ್ಥಿರತೆ ಕಾಪಾಡಿಕೊಂಡಿದ್ದಾರೆ. 155.6ರ ಸ್ಟ್ರೈಕ್‌ ರೇಟ್‌ನಲ್ಲಿ ಸ್ಕೋರ್ ಮಾಡುತ್ತಿದ್ದಾರೆ. ಇದು ತಂಡದ ಪ್ರಮುಖ ಬಲ. ಬೌಲರ್‌ಗಳು ಲಯಕ್ಕೆ ಮರಳಿದ್ದು, ವಿಕೆಟ್‌ ಕಬಳಿಸುತ್ತಿದ್ದಾರೆ. ಅದರಲ್ಲೂ ಸ್ವಪ್ನಿಲ್‌ ಸಿಂಗ್‌ ತಂಡಕ್ಕೆ ಎಂಟ್ರಿ ಕೊಟ್ಟಾಗಿನಿಂದ ಪವರ್‌ಪ್ಲೇನಲ್ಲೇ ತಂಡ ಮ್ಯಾಜಿಕ್‌ ಮಾಡುತ್ತಿದೆ. ಹಾಗೇ ಕ್ಯಾಮರೂನ್‌ ಗ್ರೀನ್‌ ಕೂಡಾ ಫಾರ್ಮ್‌ಗೆ ಮರಳಿದ್ದಾರೆ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಡೆತ್‌ ಓವರ್‌ ವೇಳೆ ಆಡಿದ ಮ್ಯಾಕ್ಸ್‌ವೆಲ್‌ ಬೌಂಡರಿ-ಸಿಕ್ಸರ್‌ ಸಿಡಿಸಿ ತಾನಿನ್ನೂ ಫಾರ್ಮ್‌ನಲ್ಲಿರುವುದಾಗಿ ತೋರಿಸಿಕೊಂಡಿದ್ದರು. ಇನ್ನು ದೌರ್ಬಲ್ಯಗಳು ಅಂದ್ರೆ ಆರ್‌ಸಿಬಿ ತಂಡವು ಪ್ರತಿಬಾರಿಯೂ ಬ್ಯಾಟಿಂಗ್‌ನಲ್ಲಿ ಸೀಮಿತ ಆಟಗಾರರನ್ನು ನೆಚ್ಚಿಕೊಳ್ಳುತ್ತದೆ. ಅದು ಕೂಡಾ ಅಗ್ರ ಕ್ರಮಾಂಕದ ಬ್ಯಾಟರ್‌ಗಳೇ ತಂಡದ ಶಕ್ತಿ. ಈ ಋತುವಿನಲ್ಲಿಯೂ ಪ್ರಮುಖ 3 ಆಟಗಾರರಾದ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಾಟೀದಾರ್ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದೆ. ಅವರಲ್ಲಿ ಇಬ್ಬರು ವಿಫಲರಾದರೂ, ಮಧ್ಯಮ ಮತ್ತು ಕೆಳ ಕ್ರಮಾಂಕದ ಒತ್ತಡದಲ್ಲಿ ಸಿಲುಕುತ್ತದೆ. ಅಲ್ಲಿ ದಿನೇಶ್‌ ಕಾರ್ತಿಕ್‌ ಹೊರತಾಗಿ ತಂಡದ ರಕ್ಷಣೆಗೆ ಗಟ್ಟಿಯಾಗಿ ನಿಲ್ಲುವವರಿಲ್ಲ. ಇದು ಬದಲಾಗಬೇಕು.

ಲೀಗ್ ಹಂತದ ಸೆಕೆಂಡ್ ಆಫ್ ನಲ್ಲಿ ಬೆಂಗಳೂರು ಪರ ರಜತ್ ಪಟೀದಾರ್ ಆರ್‌ಸಿಬಿ ಪಾಲಿಗೆ ಅತ್ಯಂತ ವಿನಾಶಕಾರಿ ಬ್ಯಾಟರ್ ಆಗಿದ್ದಾರೆ. ಸ್ಟ್ರೈಕ್ ರೇಟ್ ಕೂಡ 200 ಪ್ಲಸ್ ಇದೆ. ಹೀಗಾಗಿ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡವೇ ಗೆಲ್ಲುವ ಮೋಸ್ಟ್ ಫೇವರೆಟ್ ಟೀಂ ಆಗಿದೆ.

Shwetha M