ಬದ್ಧ ವೈರಿ ಚೆನ್ನೈ ವಿರುದ್ಧ ಗೆದ್ದ RCB – CSKಗೆ ಹ್ಯಾಟ್ರಿಕ್ ಸೋಲು, ಪಾಯಿಂಟ್ಸ್ ಟೇಬಲ್ ಟಾಪ್‌ನಲ್ಲಿ ಬೆಂಗಳೂರು

ಬದ್ಧ ವೈರಿ ಚೆನ್ನೈ ವಿರುದ್ಧ ಗೆದ್ದ RCB  – CSKಗೆ ಹ್ಯಾಟ್ರಿಕ್ ಸೋಲು, ಪಾಯಿಂಟ್ಸ್ ಟೇಬಲ್ ಟಾಪ್‌ನಲ್ಲಿ ಬೆಂಗಳೂರು

 ಟಿಮ್‌ ಡೇವಿಡ್‌  ಸ್ಪೋಟಕ ಬ್ಯಾಟಿಂಗ್‌ ಹಾಗೂ  ಬೌಲರ್‌ಗಳ ಬೆಂಕಿ ಬೌಲಿಂಗ್‌ನಿಂದ ಆರ್‌ಸಿಬಿ  ಬದ್ಧ ವೈರಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 43 ರನ್‌ಗಳ ಭರ್ಜರಿ  ಗೆಲುವು ಪಡೆಯಿತು. ಆ ಮೂಲಕ ಸತತ ಎರಡು ಪಂದ್ಯಗಳ ಗೆಲುವಿನ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಆರ್‌ಸಿಬಿ ಅಗ್ರ ಸ್ಥಾನಕ್ಕೆ ಪ್ರವೇಶ ಮಾಡಿದೆ. ಇನ್ನು ಬ್ಯಾಟಿಂಗ್‌ನಲ್ಲಿ ಕಠಿಣ ಹೋರಾಟ ನಡೆಸಿದರೂ ಬೌಲಿಂಗ್‌ ವೈಫಲ್ಯದಿಂದಾಗಿ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ ಈ ಸೀಸನ್‌ನಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿತು.

ಭಾನುವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ 11ನೇ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 251 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸಿಎಸ್‌ಕೆಗೆ ಜೇಕಬ್‌ ಡಫಿ ಹೊಸ ಚೆಂಡಿನಲ್ಲಿ ಆರಂಭಿಕ ಆಘಾತ ನೀಡಿದರು. ಅವರು ಋತುರಾಜ್‌ ಗಾಯಕ್ವಾಡ್‌ ಮತ್ತು ಸಂಜು ಸ್ಯಾಮ್ಸನ್‌ ಅವರನ್ನು ಔಟ್‌ ಮಾಡಿದರು ಹಾಗೂ ಆರ್‌ಸಿಬಿ ಉತ್ತಮ ಆರಂಭ ತಂದುಕೊಟ್ಟಿದ್ದರು. ನಂತರ ಭುವನೇಶ್ವರ್‌ ಕುಮಾರ್‌ ಅವರು, ಆಯುಷ್‌ ಮ್ಹಾತ್ರೆಗೆ ಪೆವಿಲಿಯನ್‌ ಹಾದಿ ತೋರಿಸಿದರು. ಆ ಮೂಲಕ ಸಿಎಸ್‌ಕೆ ಕೇವಲ 30 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು.

ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಸರ್ಫರಾಝ್‌ ಖಾನ್‌, ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಒತ್ತಡವನ್ನು ಸಮರ್ಪಕವಾಗಿ ನಿರ್ವಹಿಸಿದರು. ಅವರು ಆಡಿದ 25 ಎಸೆತಗಳಲ್ಲಿ 200ರ ಸ್ಟ್ರೈಕ್‌ ರೇಟ್‌ನಲ್ಲಿ ಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 50 ರನ್‌ ಸಿಡಿಸಿದರು. ಆ ಮೂಲಕ ಸಿಎಸ್‌ಕೆಗೆ ಪವರ್‌ಪ್ಲೇನಲ್ಲಿ 77 ರನ್‌ಗಳನ್ನು ತಂದುಕೊಟ್ಟಿದ್ದರು. ಆದರೆ, ಅವರನ್ನು ಕೃಣಾಲ್‌ ಪಾಂಡ್ಯ ಔಟ್‌ ಮಾಡಿದರು. ಶಿವಂ ದುಬೆ (18) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಅಭಿನಂದನ್‌ ಸಿಂಗ್‌ ಬಿಡಲಿಲ್ಲ.

ಇದನ್ನೂಓದಿ: ನಮ್ಮ ಮೆಟ್ರೋ ಪಿಂಕ್‌ ಲೈನ್‌ ಬಗ್ಗೆ ಬಿಗ್‌ ಅಪ್‌ಡೇಟ್‌! – ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತ!

ಪ್ರಶಾಂತ್‌ ವೀರ್‌ ಹಾಗೂ ಜೇಮಿ ಓವರ್ಟನ್‌ 57 ರನ್‌ ಜೊತೆಯಾಟವನ್ನು ಆಡಿದರು. ಪ್ರಶಾಂತ್‌ 29 ಎಸೆತಗಳಲ್ಲಿ 43 ರನ್‌ಗಳನ್ನು ಗಳಿಸಿ ಎಲ್ಲರ ಗಮನ ಸೆಳೆದರೆ, ಜೇಮಿ ಓವರ್ಟನ್‌ ಅವರು ಕೇವಲ 16 ಎಸೆತಗಳಲ್ಲಿ 37 ರನ್‌ ಸಿಡಿಸಿದರು. ಅ ಮೂಲಕ ಸಿಎಸ್‌ಕೆಗೆ ಗೆಲುವಿನ ಭರವಸೆ ಮೂಡಿಸಿದರೂ ಈ ಇಬ್ಬರನ್ನೂ ಭುವನೇಶ್ವರ್‌ ಹಾಗೂ ಸುಯಾಶ್‌ ಔಟ್‌ ಮಾಡಿ ಆರ್‌ಸಿಬಿಗೆ ಬ್ರೇಕ್‌ ತಂದುಕೊಟ್ಟರು. ಅಂತಿಮವಾಗಿ ಸಿಎಸ್‌ಕೆ 19.4 ಓವರ್‌ಗಳಿಗೆ 207 ರನ್‌ಗಳಿಗೆ ಆಲ್‌ಔಟ್‌ ಆಯಿತು ಹಾಗೂ 43 ರನ್‌ಗಳಿಂದ ಸೋಲು ಅನುಭವಿಸಿತು.

Kishor KV