11 ಅಭಿಮಾನಿಗಳ ಸಾವಿನ ಬಳಿಕ ಎಚ್ಚೆತ್ತ ಸರ್ಕಾರ – ಚಿನ್ನಸ್ವಾಮಿ ಮೈದಾನ ಸಿಟಿಯಿಂದ ಬೇರೆ ಕಡೆ ಶಿಫ್ಟ್!

18 ವರ್ಷಗಳ ಬಳಿಕ ಕಪ್ ಗೆದ್ದು ಆರ್ಸಿಬಿ ಚರಿತ್ರೆಯನ್ನೇ ಸೃಷ್ಟಿಸಿತ್ತು. ಆದ್ರೆ ಅದೇ ಕಪ್ಗೆ ದಿನ ಕಳೆಯೋ ಮುನ್ನವೇ ರಕ್ತದ ಕಲೆ ಮೆತ್ತಿಕೊಳ್ತು. ವಿಜಯೋತ್ಸವದಲ್ಲಿ ಮಿಂದೇಳ್ಬೇಕಿದ್ದ ಬೆಂಗಳೂರು ಮಹಾನಗರ ಮಾರಣಹೋಮಕ್ಕೆ ಸಾಕ್ಷಿಯಾಗಿತ್ತು. ಸಂಭ್ರಮದ ಅಲೆಯಲ್ಲಿ ಸೂತಕದ ಛಾಯೆ ಆವರಿಸಿಕೊಳ್ತು. ಇಂದಿಗೂ ಕೂಡ ಆ ಸಂಕಟ ಮರೆಯಾಗಿಲ್ಲ. ಇಷ್ಟೆಲ್ಲಾ ಸಾವು, ನೋವುಗಳಿಗೆ ಸಾಕ್ಷಿಯಾದ ಚಿನ್ನಸ್ವಾಮಿ ಮೈದಾನದ ಅಸ್ತಿತ್ವವೇ ಈಗ ತೂಗುಯ್ಯಾಲೆಯಲ್ಲಿದೆ. ಮೈದಾನವನ್ನೇ ಶಿಫ್ಟ್ ಮಾಡೋಕೆ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ : ENGನಲ್ಲಿ ಚರಿತ್ರೆ ಸೃಷ್ಟಿಸುತ್ತಾ ಭಾರತ – 18 ವರ್ಷದಿಂದ ಗೆದ್ದಿಲ್ಲ.. ಸವಾಲುಗಳೆಷ್ಟು?
ಜನಸಾಗರ.. ಅಕ್ಷರಶಃ ಜನಸಾಗರ.. ಯಾವ ದಿಕ್ಕಿಗೆ ಕಣ್ಣಾಯಿಸಿದ್ರೂ ಜನವೋಜನ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಮರುದಿನವೇ ಬೆಂಗಳೂರಲ್ಲಿ ಜನಪ್ರವಾಹವೇ ಹರಿದು ಬಂದಿತ್ತು. ಈ ಸಲ ಕಪ್ ನಮ್ದು ಅಂತಾ ಕೂಗಿ ಕೂಗಿ ಹೇಳೋಕೆ ರಾಜ್ಯದ ಮೂಲೆ ಮೂಲೆಯಿಂದ ಜನ ಜಮಾಯಿಸಿದ್ರು. ಆದ್ರೆ ಟ್ರೋಫಿ ಬೆಂಗಳೂರು ತಲುಪಿ 2 ಗಂಟೆಗಳು ಕಳೆಯೋ ಮುನ್ನವೇ 11 ಜನ ಉಸಿರನ್ನೇ ಚೆಲ್ಲಿದ್ರು. ಈ 11 ಜನರ ಸಾವು ಈಗ ಸರ್ಕಾರದ ಕಣ್ತೆರೆಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಬಳಿ ಜೂನ್ 4ರಂದು ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣ ಬಿಟ್ಟಿದ್ರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರ ವಿಕ್ಟರಿ ಪರೇಡ್ಗೆ ಸಾಕ್ಷಿಯಾಗ್ಬೇಕು ಅಂತಾ ಬಂದವರು ಶವವಾಗಿ ವಾಪಸ್ ಆಗಿದ್ರು. 30ಕ್ಕೂ ಹೆಚ್ಚು ಮಂದಿ ಗಾಯಗೊಂಡು ಈಗಲೂ ಸಹ ಆಸ್ಪತ್ರೆಗಳಲ್ಲಿ ನರಳಾಡ್ತಿದ್ದಾರೆ. ಈ ದುರಂತ ರಾಜ್ಯ ಸರ್ಕಾರ ನುಂಗಲಾರದ ತುತ್ತಾಗಿದೆ. ಈ ಸಮಸ್ಯೆಗೆ ಉತ್ತರವಾಗಿ ಈಗ ಸರ್ಕಾರ ಚಿನ್ನಸ್ವಾಮಿ ಸ್ಟೇಡಿಯಮ್ನೇ ಬೇರೆಡೆ ಸ್ಥಳಾಂತರ ಮಾಡೋಕೆ ಚಿಂತನೆ ನಡೆದಿದೆ. ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯರೇ ಹೇಳಿಕೆ ನೀಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನ್ನು ಬೇರೆಡೆ ಶಿಫ್ಟ್ ಮಾಡೋ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡಲಾಗುವುದು ಎಂದಿದ್ದಾರೆ. ಕಾಲ್ತುಳಿತದ ಸಮಸ್ಯೆಗೆ ದೀರ್ಘಕಾಲದ ಪರಿಹಾರ ಕಂಡುಕೊಳ್ಳಲು ಹೊಸ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ಇಂಥ ಅಹಿತಕರ ಘಟನೆಗಳು ಇನ್ಮುಂದೆ ಯಾವುದೇ ಸರ್ಕಾರದ ಅವಧಿಯಲ್ಲಾಗಲೀ ನಡೆಯಬಾರದು ಎಂದಿದ್ದಾರೆ. ಸಿಎಂರ ಈ ಮಾತು ತುಂಬಾ ಮಹತ್ವ ಪಡ್ಕೊಂಡಿದ್ದು ಕ್ರೀಡಾಂಗಣ ಎಲ್ಲಿಗೆ ಸ್ಥಳಾಂತರ ಆಗುತ್ತೆ ಅನ್ನೋ ಚರ್ಚೆಯೂ ನಡೆಯುತ್ತಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರ!
ಚಿನ್ನಸ್ವಾಮಿ ಕ್ರೀಡಾಂಗಣ ನ್ನೂ ಶಿಫ್ಟ್ ಮಾಡುವಂತೆ ಒತ್ತಾಯ
ಮೂಲತಃ ಆರ್ಮಿಗೆ ಸೇರಿದ್ದು,. ಸರ್ಕಾರದಿಂದ ಕೆಎಸ್ಸಿಎ ಲೀಸ್ಗೆ
ಗಿಡ-ಮರಗಳು ಹಾಳಾಗಿದ್ದು, ಪಂದ್ಯಗಳು ನಡೆದರೆ ಟ್ರಾಫಿಕ್ ಜಾಮ್
ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂನತ್ತ ಬೆಳಗ್ಗೆಯಿಂದಲೇ ಜನಜಂಗುಳಿ
ಮೈದಾನ ನಗರದ ಮಧ್ಯಭಾಗ ಆಗಿರೋದ್ರಿಂದ ಪರಿಸ್ಥಿತಿ ನಿಯಂತ್ರಣ ಕಷ್ಟ
ಅವಾಂತರಕ್ಕೆಲ್ಲಾ ಕಾರಣ ಆಗ್ತಾ ಇರೋದು ಸಿಟಿ ಸೆಂಟರ್ ಒಳಗೆ ಇರೋದು
ಏರ್ ಪೋರ್ಟ್ ಪಕ್ಕದಲ್ಲಿ KSCAಗೆ ಸೇರಿದ 100 ಎಕರೆ ಜಾಗ ಇದೆ
ಮೈದಾನ ಶಿಫ್ಟ್ ಆದ್ರೆ ನಗರದ ಹೊರಭಾಗವಾದ್ರೆ ಜನರ ನಿಯಂತ್ರಣ
ಪಾರ್ಕಿಂಗ್ ಗೂ ಸಮಸ್ಯೆಯಾಗೋದಿಲ್ಲ ಅನ್ನೋದು ಸರ್ಕಾರದ ಪ್ಲ್ಯಾನ್
ಅಷ್ಟಕ್ಕೂ ಸರ್ಕಾರ ಇಂಥಾದ್ದೊಂದು ದಿಟ್ಟ ನಿರ್ಧಾರ ಕೈಗೊಳ್ಳೋಕೆ ಕಾರಣವೂ ಇದೆ. ಇದೊಂದು ದುರಂತದಿಂದಾಗಿ ಸರ್ಕಾರದ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಸಾವು ನೋವುಗಳಿಗೆ ಸರ್ಕಾರವೇ ಹೊಣೆ ಅಂತಾ ವಿಪಕ್ಷ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಭದ್ರತಾ ವೈಫಲ್ಯ ಜಗಜ್ಜಾಹೀರಾಗಿದೆ. ಇದಕ್ಕೆ ಪ್ರತಿಯಾಗಿ ಈಗಾಗಲೇ ಪೊಲೀಸ್ ಇಲಾಖೆಯ ಹಲವು ಹಿರಿಯ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿದ್ದಾರೆ. ಹಾಗೇ ಇಂಟಲಿಜೆನ್ಸ್ ಫೆಲ್ಯೂರ್ ಆಗಿರುವ ಕಾರಣಕ್ಕೆ ವಿಭಾಗದ ಮುಖ್ಯಸ್ಥರಿಗೂ ಟ್ರಾನ್ಸ್ಫರ್ ಶಿಕ್ಷೆ ಸಿಕ್ಕಿದೆ. ಅದೂ ಅಲ್ದೇ ಕೆಎಸ್ಸಿಎ ಕಾರ್ಯದರ್ಶಿಗಳೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹಾಗಂತ ಇದು ಒಂದು ದಿನದ ಸಮಸ್ಯೆಯಲ್ಲ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಇಂಥಾದ್ದೊಂದು ಕ್ರಮಕ್ಕೆ ಮುಂದಾಗಿದೆ.