ಚಿನ್ನಸ್ವಾಮಿಯಲ್ಲಿ ಸಾವಿನ ಸಂಭ್ರಮಾಚರಣೆ – ದುರಂತಕ್ಕೆ ಹೊಣೆ ಯಾರು?

ಚಿನ್ನಸ್ವಾಮಿಯಲ್ಲಿ ಸಾವಿನ ಸಂಭ್ರಮಾಚರಣೆ – ದುರಂತಕ್ಕೆ ಹೊಣೆ ಯಾರು?

ಅದೆಷ್ಟು ಸಂಭ್ರಮ.. ಅದೆಷ್ಟು ಸಡಗರ.. ಮಂಗಳವಾರ ರಾತ್ರಿಯಿಂದಲೇ ಕರುನಾಡಿನ ಉದ್ದಗಲಕ್ಕೂ ಆರ್​​ಸಿಬಿ ಗೆಲುವನ್ನ ಸೆಲೆಬ್ರೇಟ್ ಮಾಡ್ತಿದ್ರು. 18 ವರ್ಷಗಳ ಬಳಿಕ ಕಪ್ ಗೆದ್ದ ಖುಷಿಯಲ್ಲಿ ಮಿಂದೇಳ್ತಿದ್ರು. ಇನ್ನೇನು ಚಿನ್ನಸ್ವಾಮಿ ಮೈದಾನಕ್ಕೆ ಕಪ್ ಬರೋದಷ್ಟೇ ಬಾಕಿ. ಅಷ್ಟ್ರಲ್ಲೇ ಸಂತಸವೇ ತುಂಬಿದ್ದ ನಾಡಿಗೆ ಬರಸಿಡಿಲೇ ಬಡಿದಿದೆ.  ವಿಜಯೋತ್ಸವದ ಹೊತ್ತಲ್ಲಿ ಸಾವು ರಣಕೇಕೆ ಹಾಕಿದೆ. ಟ್ರೋಫಿಗಾಗಿ ಕಾಯ್ತಿದ್ದ ಸ್ಟೇಡಿಯಮ್​ನಲ್ಲಿ ಸೂತಕ ಆವರಿಸಿದೆ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗ್ಬೇಕಿದ್ದ ಕಂಗಳಲ್ಲಿ ಕಣ್ಣೀರೇ ತುಂಬಿದೆ. ಹಾಗಾದ್ರೆ ಅಭಿಮಾನಿಗಳ ಅತಿರೇಕವೇ ಇಂಥಾದ್ದೊಂದು ದುರಂತಕ್ಕೆ ಕಾರಣವಾಯ್ತಾ? ಸನ್ಮಾನದ ಭರದಲ್ಲಿ ಭದ್ರತೆ ಮರೆಯಿತಾ ಸರ್ಕಾರ..? ಈ ಸಾವುಗಳಿಗೆ ಹೊಣೆ ಯಾರು? 24 ಗಂಟೆಗಳ ಒಳಗೆ ಕಪ್ ಗೆದ್ದು ಖುಷಿಯನ್ನ ಕಸಿದ ಘನಘೋರ ದುರಂತದ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ – ಮಾತೇ ಬರುತ್ತಿಲ್ಲ, ತುಂಬಾ ದುಃಖವಾಗಿದೆ ಎಂದ ವಿರಾಟ್‌  

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅದೆಂಥಾ ಫ್ಯಾನ್ ಬೇಸ್ ಇದೆ ಅನ್ನೋದು ಇಡೀ ಜಗತ್ತಿಗೇ ಗೊತ್ತಿದೆ. ಕಪ್ ಗೆಲ್ಲದೆಯೇ ಆ ಮಟ್ಟಿಗೆ ಮೆರೆಸಿದ ಅಭಿಮಾನಿಗಳು ಕಪ್ ಗೆದ್ದಾಗ ಬಿಡ್ತಾರಾ. ಈ ಐತಿಹಾಸಿಕ ಕ್ಷಣವನ್ನ ವಿಜೃಂಭಣೆಯಿಂದ ಆಚರಿಸಬೇಕು. ಈ ಗೆಲುವು ಚರಿತ್ರೆಯಾಗಬೇಕು ಅಂತಾ ಕೋಟಿ ಕೋಟಿ ಫ್ಯಾನ್ಸ್ ಕಾಯ್ತಿದ್ರು. ಕಪ್ ಹೊತ್ತು ಬರೋ ಆಟಗಾರರಿಗಾಗಿ ಚಿನ್ನಸ್ವಾಮಿಯತ್ತ ನುಗ್ಗಿದ್ರು. ಆದ್ರೆ ಮುಂದೆ ನಡೆದಿದ್ದೆಲ್ಲೂ ಭಯಾನಕ.

ಆಟಗಾರರಿಗೆ ಸನ್ಮಾನ.. ಅಭಿಮಾನಿಗಳ ಮಾರಣ ಹೋಮ!

ಒಂದ್ಕಡೆ ಕಪ್ ಗೆದ್ದು ಬಂದ ಆಟಗಾರರಿಗೆ ವಿಧಾನಸೌಧದ ಮುಂಭಾಗ ಸರ್ಕಾರದ ವತಿಯಿಂದ ಸನ್ಮಾನ ನಡೀತಾ ಇತ್ತು. ತುಂಬಿ ತುಳುಕ್ತಿದ್ದ ಅಭಿಮಾನಿಗಳನ್ನ ನೋಡಿ ಆಟಗಾರರು ಕೂಡ ಬೆರರಾಗಿದ್ರು. ಇದಪ್ಪಾ ಅಭಿಮಾನ ಅಂದ್ರೆ ಅಂತಾ ಹೆಮ್ಮೆ ಪಡ್ತಿದ್ರು. ಆದ್ರೆ ಮತ್ತೊಂದು ಕಡೆ ಚಿನ್ನಸ್ವಾಮಿ ಮೈದಾನ ಹಿಂದೆಂದೂ ಕಾಣದ ಘನಘೋರ ದೃಶ್ಯಕ್ಕೆ ಸಾಕ್ಷಿಯಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಸಂಭ್ರಮಾಚರಣೆ ನೋಡೋಕೆ ಲಕ್ಷಾಂತರ ಫ್ಯಾನ್ಸ್ ಬಂದಿದ್ರು. ಅವ್ರನ್ನ ಕಂಟ್ರೋಲ್ ಮಾಡೋದು ಪೊಲೀಸರಿಗೂ ಕಷ್ಟವಾಗಿತ್ತು. ನೋಡ ನೋಡುತ್ತಲೆ ಎಲ್ಲವೂ ಕೈಮೀರಿ ಹೋಗಿತ್ತು. ಕಾಲ್ತುಳಿತ ಶುರುವಾಗಿತ್ತು. 30ಕ್ಕೂ ಹೆಚ್ಚು ಅಭಿಮಾನಿಗಳು ಕುಸಿದು ಬಿದ್ದಿದ್ರು. ಕೂಡಲೇ ಎಲ್ಲರನ್ನೂ  ಆಸ್ಪತ್ರೆಗೆ ದಾಖಲು ಮಾಡಿದ್ರು. ಆದ್ರೆ ಅಷ್ಟ್ರಲ್ಲಿ ಆಗ್ಲೇ ಕಾಲ ಮಿಂಚಿ ಹೋಗಿತ್ತು. ಒಬ್ಬರು, ಇಬ್ರು, ಮೂರು ಜನ ಎನ್ನುತ್ತಾ ಸಾವಿನ ಸಂಖ್ಯೆ ಹೆಚ್ಚುತ್ತಲೇ ಹೋಯ್ತು. ನೋಡ ನೋಡುತ್ತಲೇ 11 ಅಭಿಮಾನಿಗಳು ಉಸಿರು ಚೆಲ್ಲಿದ್ದಾರೆ.

ಅಭಿಮಾನಿಗಳ ಸಾವಿಗೆ ಹೊಣೆ ಯಾರು?

ನಿಜಕ್ಕೂ ಇದು ಇಡೀ ಕ್ರಿಕೆಟ್ ಜಗತ್ತನ್ನೇ ಆಘಾತಕ್ಕೊಳಿಸಿರೋ ಇನ್ಸಿಡೆಂಟ್. ಅದ್ರಲ್ಲೂ ಐಪಿಎಲ್ ಇತಿಹಾಸದಲ್ಲೇ ಕಪ್ಪು ಚುಕ್ಕೆ ಅಂದ್ರೂ ತಪ್ಪಾಗಲ್ಲ. ಅಂಥಾದ್ದೊಂದು ದುರಂತಕ್ಕೆ ಇವತ್ತು ಬೆಂಗಳೂರು ಸಾಕ್ಷಿಯಾಗಿದೆ. ಹಾಗಾದ್ರೆ ಇಷ್ಟೆಲ್ಲಾ ಅವಾಂತರಕ್ಕೆ ನೇರ ಹೊಣೆ ಯಾರು ಅನ್ನುವಂತ ಪ್ರಶ್ನೆ ಮೂಡುತ್ತೆ. ಲಕ್ಷಗಟ್ಟಲೆ ಫ್ಯಾನ್ಸ್ ಬರ್ತಾರೆ ಅಂತಾ ಗೊತ್ತಿದ್ರೂ ಅವ್ರನ್ನ ನಿಯಂತ್ರಿಸುವಲ್ಲಿ ಸರ್ಕಾರ ಎಡವಿತಾ? ವ್ಯವಸ್ಥೆ ಸರಿ ಇಲ್ವಾ ಅನ್ನೋ ಆಕ್ರೋಶ ಮೂಡುತ್ತೆ. ಖಂಡಿತ ಹೌದು. ಇದು ಸರ್ಕಾರದ ವೈಫಲ್ಯವೇ? ವಿಜಯೋತ್ಸವಕ್ಕೆ ಒಪ್ಪಿಗೆ ಕೊಟ್ಟ ಮೇಲೆ ಆರಂಭದಿಂದಲೇ ಎಲ್ಲರನ್ನೂ ನಿಯಂತ್ರಣಕ್ಕೆ ತರಬೇಕಿತ್ತು. ಆದ್ರೆ ಅದು ಸಾಧ್ಯವಾಗ್ಲಿಲ್ಲ. ಹಾಗಂತ ಸರ್ಕಾರ ಮಾತ್ರವೇ ಹೊಣೆನಾ ಅಂದ್ರೆ ನಿಜವಾಗ್ಲೂ ಅಲ್ಲ. ಅಭಿಮಾನಿಗಳಿಗೂ ವೈಯಕ್ತಿಕ ರೆಸ್ಪಾನ್ಸಿಬಿಲಿಟಿ ಇರ್ಬೇಕಿತ್ತು. ಅತಿರೇಕದ ವರ್ತನೆ ಬೇಡವಾಗಿತ್ತು. ಉಸಿರುಗಟ್ಟೋ ವಾತಾವರಣವಿದ್ರೂ ಗಂಟೆಗಟ್ಟಲೆ ಕಾಯುವಂತ ಹುಂಬತನ ಬೇಡದಿತ್ತು. ಸೋ ಎರಡೂ ಕಡೆಯ ಬೇಜವಾಬ್ದಾರಿಯಿಂದಲೇ ಈಗ ಮಾರಣಹೋಮವೇ ನಡೆದು ಹೋಗಿದೆ.

ಒಟ್ನಲ್ಲಿ ಎದೆಯತ್ತರಕ್ಕೆ ಬೆಳೆದಿದ್ದ ಮಕ್ಕಳು.. ಮನೆಗೆ ಆಧಾರವಾಗಿದ್ದ ಗಂಡಂದಿರು.. ಸರ್ವಸ್ವವೂ ಆಗಿದ್ದ ಮಹಿಳೆಯರು ಹೀಗೆ 10ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಒಂದಂತೂ ಸತ್ಯ. ಆರ್​ಸಿಬಿ ಕಪ್ ಗೆದ್ದ ಖುಷಿ ಕರುನಾಡಲ್ಲಿ ಒಂದು ದಿನವೂ ಪೂರ್ಣಗೊಳ್ಳೋಕೆ ಆಗಲಿಲ್ಲ. ಈಗ ಟ್ರೋಫಿ ಸಿಕ್ತು ಅನ್ನೋ ಖುಷಿಗಿಂತ ಸಾವಿನ ಸುದ್ದಿಯೇ ಮನಸ್ಸುಗಳನ್ನ ಛಿದ್ರ ಮಾಡಿದೆ.

Shwetha M

Leave a Reply

Your email address will not be published. Required fields are marked *