ನಟಿಯನ್ನ ಮದುವೆಯಾಗುವ ಮೂಲಕ ಭಾರೀ ಸುದ್ದಿಯಾಗಿದ್ದ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅರೆಸ್ಟ್

ನಟಿಯನ್ನ ಮದುವೆಯಾಗುವ ಮೂಲಕ ಭಾರೀ ಸುದ್ದಿಯಾಗಿದ್ದ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅರೆಸ್ಟ್

ದೇಶದಲ್ಲೇ ಸಂಚಲನ ಸೃಷ್ಟಿಸಿದ್ದ ಜೋಡಿ ಇದು. ಸಿನಿಮಾ ನಟಿ ಮಹಾಲಕ್ಷ್ಮಿ ಜೊತೆಗೆ ಮದುವೆ ಆಗುವ ಮೂಲಕ ನಿರ್ಮಾಪಕ ರವೀಂದರ್ ಚಂದ್ರಶೇಖರನ್‌ ಭಾರಿ ಸುದ್ದಿಯಾಗಿದ್ದರು. ಆದರೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು,  ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ರವೀಂದರ್ ಚಂದ್ರಶೇಖರನ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವ್ಯವಹಾರವೊಂದಕ್ಕೆ ಸಂಬಂಧಪಟ್ಟಂತೆ ಉದ್ಯಮಿಯೊಬ್ಬರಿಗೆ 15.83 ಕೋಟಿ ರೂಪಾಯಿ ವಂಚಿಸಿರುವ ಆರೋಪ ರವೀಂದರ್ ಚಂದ್ರಶೇಖರನ್ ಮೇಲೆ ಕೇಳಿಬಂದಿದೆ.

ಇದನ್ನೂ ಓದಿ : ಗರ್ಲ್‌ಫ್ರೆಂಡ್‌ ಜೊತೆ ಸುತ್ತಾಡಲು ಸಂಬಂಧಿಕರ ಮನೆಯಲ್ಲೇ ಕಳ್ಳತನ – ಶೋಕಿಲಾಲ ಸಿಕ್ಕಿಬಿದ್ದಿದ್ದು ಹೇಗೆ?

ಮಾಧವ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಬಾಲಾಜಿ ಕಪಾ ಎಂಬುವವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, 2020ರ ಅಕ್ಟೋಬರ್‌ನಲ್ಲಿ ಲಿಬ್ರಾ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ನ ರವೀಂದರ್ ಚಂದ್ರಶೇಖರನ್ ಅವರನ್ನು ಸಂಪರ್ಕಿಸಲಾಗಿತ್ತು. ಅವರು ಪುರಸಭೆಯ ಘನ ತ್ಯಾಜ್ಯವನ್ನು ವಿದ್ಯುತ್ ಆಗಿ ಪರಿವರ್ತಿಸುವ ಹೊಸ ವ್ಯವಹಾರದ ಪ್ರಸ್ತಾಪವನ್ನು ಮುಂದಿಟ್ಟಿದ್ದರು ಮತ್ತು ಅದಕ್ಕಾಗಿ ಹಣಕಾಸಿನ ನೆರವು ಕೋರಿದ್ದರು. 2020ರ ಸೆಪ್ಟೆಂಬರ್ 17ರಂದು ಹೂಡಿಕೆ ಒಪ್ಪಂದವನ್ನು ಮಾಡಿಕೊಂಡಿದ್ದು, 15.83 ಕೋಟಿ ರೂ. ಪಾವತಿ ಮಾಡಲಾಗಿದೆ. ಆದರೆ ಆನಂತರ ರವೀಂದರ್ ಅವರು ಅತ್ತ ವಿದ್ಯುತ್ ವ್ಯವಹಾರವನ್ನು ಪ್ರಾರಂಭಿಸಲಿಲ್ಲ, ಇತ್ತ ನಮ್ಮ ಹಣವನ್ನೂ ಹಿಂದಿರುಗಿಸಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಆದರೆ ತನಿಖೆಯ ವೇಳೆ ರವೀಂದರ್ ಅವರು ಹಣದ ಹೂಡಿಕೆಗೆ ನಕಲಿ ದಾಖಲೆಗಳನ್ನು ಬಳಕೆ ಮಾಡಿಕೊಂಡಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಬಾಲಾಜಿ ಮಾತ್ರವಲ್ಲ, ಇನ್ನೂ ಕೆಲವು ಮಂದಿಗೆ ರವೀಂದರ್ ವಂಚಿಸಿದ್ದಾರೆ ಎನ್ನಲಾಗಿದೆ. ಸದ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಅಂದಹಾಗೆ, ಖಾಸಗಿ ವಾಹಿನಿಯಲ್ಲಿ ನಿರೂಪಕಿ ಆಗಿದ್ದ ಹಾಗೂ ನಟಿ ಮಹಾಲಕ್ಷ್ಮಿ ಎಂಬುವವರ ಜೊತೆಗೆ ರವೀಂದರ್ ಮದುವೆ ಆಗಿದ್ದು ಭಾರಿ ಸುದ್ದಿಯಾಗಿತ್ತು. 90ರ ದಶಕದ  ನಿರೂಪಕಿ ಆಗಿದ್ದ ಮಹಾಲಕ್ಷ್ಮಿ, ವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವುದರ ಜೊತೆಗೆ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಈ ಮೊದಲು ಅನಿಲ್‌ಕುಮಾರ್‌ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ ಮಹಾಲಕ್ಷ್ಮಿ ಅವರು, 2016ರಲ್ಲಿ ಅವರಿಗೆ ವಿಚ್ಛೇದನ ನೀಡಿದ್ದರು. ನಂತರ 2022ರ ಸೆಪ್ಟೆಂಬರ್‌ನಲ್ಲಿ ನಿರ್ಮಾಪಕ ರವೀಂದರ್ ಜತೆಗೆ ಮಹಾಲಕ್ಷ್ಮಿ ಎರಡನೇ ಮದುವೆಯಾಗಿದ್ದರು. ಈಚೆಗಷ್ಟೇ ಮಹಾಲಕ್ಷ್ಮಿ ಮತ್ತು ರವೀಂದರ್ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.

ತಮಿಳು ಸಿನಿಮಾಗಳ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರವೀಂದರ್ ಚಂದ್ರಶೇಖರನ್, ಸಿದ್ದು ಎನ್ನಾ, ಮುರುಂಗೈಕೈ ಚಿಪ್ಸ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಕೂಡ ನಡೆಸುತ್ತಿರುವ ರವೀಂದರ್ ಸಿನಿಮಾ ವಿಮರ್ಶೆ, ಸಿನಿಮಾ ಅಪ್‌ಡೇಟ್‌ ನೀಡುತ್ತಿರುತ್ತಾರೆ. ಮಹಾಲಕ್ಷ್ಮಿ ಜೊತೆ ಮದುವೆಯಾದ ಮೇಲೆ ರವೀಂದರ್ ಚಂದ್ರಶೇಖರನ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗಿದ್ದರು.

suddiyaana