ಲವ ಮತ್ತು ಕುಶ ವಯನಾಡ್‌ನ ಅಳಿಯಂದಿರು – ಏನಿದು ಚೆಟ್ಟಿ ಸಮುದಾಯದ ರಾಮಾಯಣದ ಕಥೆ?

ಲವ ಮತ್ತು ಕುಶ ವಯನಾಡ್‌ನ ಅಳಿಯಂದಿರು – ಏನಿದು  ಚೆಟ್ಟಿ ಸಮುದಾಯದ ರಾಮಾಯಣದ ಕಥೆ?

vನಮ್ಮ ಈ ಭಾರತದ ನಾಡು ಸಂಸ್ಕೃತಿಯ ತವರು.  ಇಲ್ಲಿ ಕಲೆಯ ಸಾಕಷ್ಟು ಕಥೆಗಳು ನಮ್ಮನ್ನ ಸೆಳೆಯುತ್ತೆ. ಈ ನೆಲದ ಬುಡಕಟ್ಟು ಸಮುದಾಯಗಳೂ ಸೇರಿದಂತೆ ಒಂದೊಂದು ಸಮುದಾಯಗಳಲ್ಲಿ ರಾಮಾಯಣದ ಬಗ್ಗೆ ವಿಶಿಷ್ಟ ಮತ್ತು ಅಪರೂಪದ ಕಥೆಗಳಿವೆ. ಜನಪದರು ತಮ್ಮ ಕಲ್ಪನೆಗೆ ನಿಲುಕಿದಂತೆ ರಾಮಾಯಣದ ಕಥೆಗೆ ಹೊಸ ಬಣ್ಣ ಹಚ್ಚಿದ್ದಾರೆ. ಆ ಪೈಕಿ ಕೇರಳದ ವಯನಾಡ್ ಜಿಲ್ಲೆಯ ದಲಿತ ಸಮುದಾಯಗಳಲ್ಲಿ ಒಂದಾದ ವಯನಾಡನ್ ಚೆಟ್ಟಿ ಸಮುದಾಯದಲ್ಲಿ ಕಂಡುಬರುವ ರಾಮಾಯಣದ ಮೌಖಿಕ ಕಥೆ ಕೂಡ ಬಲು ಅಪರೂಪದ್ದು.

ಕೇರಳದ ವಯನಾಡ್ ಜಿಲ್ಲೆಯ ವಯನಾಡನ್ ಚೆಟ್ಟಿ ಸಮುದಾಯದ ಜನರು ರಾಮಾಯಣದ ಸ್ಥಳೀಯ ಮೌಖಿಕ ಜಾನಪದ ಕಥೆಗಳನ್ನು ನಂಬುತ್ತಾರೆ ಮತ್ತು ಗೌರವಿಸುತ್ತಾರೆ. ಅದರ ಜೊತೆಜೊತೆಗೆ ಅವರ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಾರೆ. ಹೆಸರಾಂತ ಇತಿಹಾಸಕಾರ ರಾವ್ ಬಹದ್ದೂರ್ ಗೋಪಾಲನ್ ನಾಯರ್ ಅವರು ತಮಿಳುನಾಡು ಮತ್ತು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ತಮ್ಮ ವಂಶಾವಳಿಯ ಬೇರನ್ನು ಹರಡಿಸಿದವರು. ಅವರು ತಮ್ಮ ಪೂರ್ವಜರ ನಂಬಿಕೆಯಿಂದ ಬಂದಂತಹ ರಾಮಾಯಣದ ಮೌಖಿಕ ಕಥೆಗಳನ್ನು ವಯನಾಡಿನ ಮಣ್ಣಿನಲ್ಲಿ ದಾಖಲಿಸಿಟ್ಟು ಹೋಗಿದ್ದಾರೆ.
ಆದಿ ರಾಮಾಯಣದಂತೆಯೇ, ವಯನಾಡನ್ ಚೆಟ್ಟಿ ರಾಮಾಯಣದಲ್ಲಿಯೂ ಸಹ ಸೀತೆಯೇ ನಾಯಕಿ. ಇಲ್ಲಿಯ ಅವಧಿಯು ನಿಖರವಾಗಿ ತ್ರೇತಾಯುಗವಾಗಿದ್ದರೂ ಸಹ, ಒಂದೊಂದು ಘಟನೆಗಳು ವಯನಾಡ್‌ನ ದೂರದ ಹುಲ್ಲುಗಾವಲುಗಳಲ್ಲಿ ಸಂಭವಿಸುತ್ತವೆ, ಸಮಯ ಮತ್ತು ಜನಪದರ ಮೌಖಿಕ ಸಾಹಿತ್ಯದಲ್ಲಿ ಉಲ್ಲೇಖವಾದ ಸ್ಥಳದ ನಿಖರತೆಯೊಂದಿಗೆ, ವಯನಾಡಿನ ಹಳ್ಳಿಗಳನ್ನು ಚೆಟ್ಟಿಗಳ ರಾಮಾಯಣ ಕಲ್ಪನೆಗಳಲ್ಲಿ ಅಳವಡಿಸಲಾಗಿದೆ.

ಇಲ್ಲಿನ ಸೀತಾ ಕುಲಂ/ಕಣ್ಣೀರ್ ಥಡಕಂ ಎಂಬ ಹಳ್ಳಿಯ ಕೊಳ (ಜನಪದರ ಪ್ರಕಾರ ಸೀತೆಯ ಕಣ್ಣೀರಿನಿಂದ ರೂಪುಗೊಂಡ ಸರೋವರ) ಮತ್ತು ಆಶ್ರಮಮ್ ಕೊಲ್ಲಿ ಎಂಬ ಗ್ರಾಮ (ವಾಲ್ಮೀಕಿಯ ಮಠವೆಂದು ಹೇಳಲಾಗುತ್ತದೆ) ಸೇರಿದಂತೆ ಇನ್ನೂ ಅನೇಕ ರಾಮಾಯಣದೊಂದಿಗೆ ಸಂಬಂಧ ಕಲ್ಪಿಸಿಕೊಂಡ ಸ್ಥಳಗಳು ಈಗಲೂ ಉದಾಹರಣೆಯಾಗಿ ಕಾಣುತ್ತದೆ. ಚೆಟ್ಟಿಗಳಲ್ಲಿ ರಾಮಾಯಣದ ಅನೇಕ ಮೌಖಿಕ ನಿರೂಪಣೆಗಳಿವೆ. ಕೆಲವು ಕಥೆಗಳಲ್ಲಿ ಲವ ಮತ್ತು ಕುಶ ವಯನಾಡಿನ ಸ್ಥಳೀಯ ಮಹಿಳೆಯರೊಂದಿಗೆ ವಿವಾಹವಾಗಿರುವ ಬಗ್ಗೆಯೂ ಉಲ್ಲೇಖವಿದೆ.

ಆ ಪೈಕಿ ಒಂದು ಕಥೆಯ ಪ್ರಕಾರ, ಲವ ಮತ್ತು ಕುಶ ಪುಲ್ಪಲ್ಲಿ ಸಮೀಪದ ಅರಿಯಪಲ್ಲಿ ಗ್ರಾಮದಲ್ಲಿ ಅಸುರರಿಂದ ಅಪಹರಿಸಲ್ಪಟ್ಟ ಸ್ಥಳೀಯ ಕನ್ಯೆಯರನ್ನು ರಕ್ಷಿಸಿದ್ದರು. ಇದೇ ರೀತಿಯ ಒಂದು ಘಟನೆಯಲ್ಲಿ ಕುಶ ಎರುಮಪ್ಪಳ್ಳಿ ಚೆಟ್ಟಿಯ ಮಗಳು ಚಂಡಿಕಾ ದೇವಿಯನ್ನು ಅಸುರರಿಂದ ರಕ್ಷಿಸುತ್ತಾನೆ. ನಂತರ ಕುಶ ಅವಳನ್ನು ಮದುವೆಯಾಗುತ್ತಾನೆ. ಅತ್ತ ಲವ ಚಂಡಿಕಾ ದೇವಿಯ ಸಹೋದರಿ ಸುನೀತಾ ದೇವಿಯೊಂದಿಗೆ ಮದುವೆಯಾಗುತ್ತಾನೆ. ಹೀಗಾಗಿ ಜನಪದರ ಪ್ರಕಾರ ಲವ ಮತ್ತು ಕುಶ ವಯನಾಡ್‌ನ ಅಳಿಯಂದಿರು.
ವಯನಾಡ್ ಚೆಟ್ಟಿಗಳ ಸಾಂಪ್ರದಾಯಿಕ ದೇವತೆಗಳಾದ ಅತಿರುಕಲನ್, ಅರುಪುಲಿ, ತಂಪುರಟ್ಟಿ ಮತ್ತು ಬಮ್ಮಥನ್ ಕೂಡ ಇಲ್ಲಿ ರಾಮಾಯಣದ ಪಾತ್ರಗಳೊಂದಿಗೆ ಮಿಳಿತಗೊಂಡಿವೆ. ಲವ ಮತ್ತು ಕುಶರು ರಾಮನ ಕುದುರೆಯನ್ನು ವಶಪಡಿಸಿಕೊಂಡ ನಂತರ ಹನುಮಂತನಿಗೆ ಆ ಕಾಡಿನ ದೇವತೆಗಳು ಈ ವಿಷಯ ತಿಳಿಸುತ್ತಾರೆ. ಹೀಗೆ ರಾಮಾಯಣವು ಎಂದಿಗೂ ಏಕೈಕ ಅಭಿವ್ಯಕ್ತಿಯೊಂದಿಗೆ ಮಿತಿಯಾದ ಒಂದೇ ಪಠ್ಯವಾಗಿರಲಿಲ್ಲ ಅನ್ನೋದು ವಿವಿಧ ಸಮುದಾಯಗಳ ಕಥೆಗಳಿಂದ ತಿಳಿದು ಬರುತ್ತದೆ.

Kishor KV

Leave a Reply

Your email address will not be published. Required fields are marked *