ತಾರ್‌ನಲ್ಲಿ ಗುದ್ದಿ ಬೈಕ್ ಸವಾರನ ಕಾಲು ಮುರಿದ ರಕ್ಷಕ್ – ಬುಲೆಟ್ ಪ್ರಕಾಶ್ ಮಗನ ವಿರುದ್ಧ FIR

ತಾರ್‌ನಲ್ಲಿ ಗುದ್ದಿ ಬೈಕ್ ಸವಾರನ ಕಾಲು ಮುರಿದ ರಕ್ಷಕ್ – ಬುಲೆಟ್  ಪ್ರಕಾಶ್ ಮಗನ ವಿರುದ್ಧ FIR

ಬಿಗ್‌ಬಾಸ್ ಖ್ಯಾತಿಯ ರಕ್ಷಕ್‌ ಬುಲೆಟ್ ಯಡವಟ್ಟಿನ ಮೇಲೆ ಯಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಪ್ರಥಮ್ ವಿಷ್ಯದಲ್ಲಿ ಕಿರಿಕ್ ಆದ ಬೆನ್ನಲ್ಲೇ ಎಫ್ಐಆರ್ ದಾಖಲಾಗಿದೆ. ರಕ್ಷಕ್ ಬುಲೆಟ್ ಅವರು ಅಜಾಗರೂಕತೆಯಿಂದ ತಾರ್ ( ಕಾರು) ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇದ್ರಂದ ಬೈಕ್ ಸವಾರನ ಎಡಗಾಲು ಮುರಿತವಾಗಿದೆ. ಈ ಪ್ರಕರಣ ಸಂಬಂಧ ಹೆಣ್ಣೂರು ಸಂಚಾರ ಠಾಣೆಯಲ್ಲಿ ರಕ್ಷಕ್ ಬುಲೆಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಟ ರಕ್ಷಕ್‌ ಎಸಗಿದ ಅಪಘಾತದಿಂದ ಕಾಲು ಮುರಿದುಕೊಂಡಿರುವ ಖಾಸಗಿ ಕಂಪನಿ ಉದ್ಯೋಗಿ 27 ವರ್ಷದ ವೇಣುಗೋಪಾಲ್‌   ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ರಕ್ಷಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅಜಾಗರೂಕವಾಗಿ ಜೀಪು ಚಾಲನೆ ಮಾಡಿ ಬೈಕ್‌ ಡಿಕ್ಕಿ ಹೊಡೆಸಿ ಬೈಕ್‌ ಸವಾರನ ಕಾಲುಮುರಿತಕ್ಕೆ ಕಾರಣವಾಗಿದೆ.

ತನ್ನ ಸ್ನೇಹಿತೆಯನ್ನು ಬೈಕ್‌ ಹಿಂಬದಿ ಕೂರಿಸಿಕೊಂಡು ವೇಣುಗೋಪಾಲ್‌ ಥಣಿಸಂದ್ರದ ಮಾನ್ಯತಾ ಟೆಕ್‌ಪಾರ್ಕ್ ಬಳಿ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಥಾರ್‌ ಜೀಪಿನಲ್ಲಿ ಬಂದ ರಕ್ಷಕ್‌ ಬುಲೆಟ್ , ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ವೇಣುಗೋಪಾಲ್‌ ಹಾಗೂ ಸ್ನೇಹಿತೆ ಇಬ್ಬರೂ ಕೆಳಗೆ ಉರುಳಿದ್ದಾರೆ. ಈ ವೇಳೆ ಅಪಘಾತದಲ್ಲಿ ವೇಣುಗೋಪಾಲ್‌ ಎಡಕಾಲು ಮುರಿದಿದೆ. ಇನ್ನೂ ವೇಣುಗೋಪಾಲ್‌ ಅವರ ಸ್ನೇಹಿತೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಬಂಧ ಶುಕ್ರವಾರ ಗಾಯಾಳು ದೂರು ನೀಡಿದ್ದಾರೆ. ಇನ್ನೂ ರಕ್ಷಕ್‌ ಬುಲೆಟ್‌ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಲು ಸಿದ್ಧತೆ ನಡೆಸಲಾಗಿದೆ. ಅಪಘಾತದ ಬಳಿಕ ರಕ್ಷಕ್‌ ಬುಲೆಟ್‌ ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Kishor KV