ಸರ್ಕಾರಿ ಬಂಗಲೆ ಖಾಲಿ ಮಾಡಲು ಇಂದೇ ಕೊನೆ ದಿನ – ರಾಹುಲ್ ಗಾಂಧಿ ಮುಂದಿನ ಪಯಣ ಗೊತ್ತಾ?

ಸರ್ಕಾರಿ ಬಂಗಲೆ ಖಾಲಿ ಮಾಡಲು ಇಂದೇ ಕೊನೆ ದಿನ – ರಾಹುಲ್ ಗಾಂಧಿ ಮುಂದಿನ ಪಯಣ ಗೊತ್ತಾ?

ನವದೆಹಲಿ: ಲೋಕಸಭಾ ಸದಸ್ಯತ್ವ ರದ್ದಾಗಿರುವುದರಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಏ.22 ರ ಒಳಗೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭಾ ವಸತಿ ಸಮಿತಿ ಸೂಚಿಸಿತ್ತು. ಈ ಹಿನ್ನೆಲೆ ರಾಹುಲ್ ಗಾಂಧಿ ಶುಕ್ರವಾರವೇ ಸರ್ಕಾರಿ ಬಂಗಲೆಯಿಂದ ಎಲ್ಲಾ ವಸ್ತುಗಳನ್ನು ಸ್ಥಳಾಂತರಿಸಿದ್ದಾರೆ.

ಇದನ್ನೂ ಓದಿ: ರೌಡಿಗೆ ಕೈ ಮುಗಿಯುತ್ತಾರೆ, ಭ್ರಷ್ಟರಿಗೆ ಕರೆ ಮಾಡ್ತಾರೆ – ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ಮೋದಿ ಸರ್​ನೇಮ್​ ವಿವಾದ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಯಾಗಿ ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ, ಲೋಕಸಭೆಯ ವಸತಿ ಸಮಿತಿಯು ಏಪ್ರಿಲ್ 22ರೊಳಗೆ ಒಳಗಡೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ನೀಡಿತ್ತು. ನಿಯಮಗಳ ಪ್ರಕಾರ ಸಂಸದ ಸ್ಥಾನದಿಂದ ಅನರ್ಹಗೊಂಡವರು ಸರ್ಕಾರಿ ಸೌಲಭ್ಯಗಳನ್ನು ಉಪಯೋಗಿಸುವಂತಿಲ್ಲ. ಹೀಗಾಗಿ ರಾಹುಲ್ ಗಾಂಧಿ ಸರ್ಕಾರಿ ಬಂಗಲೆ ಖಾಲಿ ಮಾಡಿ ತಮ್ಮ ತಾಯಿ ಸೋನಿಯಾ ಗಾಂಧಿಯವರೊಂದಿಗೆ ಜನಪಥ್ ನಿವಾಸದಲ್ಲಿ ವಾಸಿಸಲಿದ್ದಾರೆ. ಶನಿವಾರ ಮಾಜಿ ವಯನಾಡ್ ಸಂಸದ ಅಧಿಕೃತವಾಗಿ ಬಂಗಲೆಯನ್ನು ಲೋಕಸಭೆಯ ಸೆಕ್ರೆಟರಿಯೇಟ್‌ಗೆ ಹಸ್ತಾಂತರಿಸಲಿದ್ದಾರೆ.

2019ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಎಲ್ಲಾ ಕಳ್ಳರಿಗೂ ಮೋದಿ ಎಂಬ ಸರ್​ನೇಮ್ ಇದೆ, ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಎಂದು ಉದಾಹರಣೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿ ಗುಜರಾತ್​ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು. ಅದರ ತೀರ್ಪು ಕಳೆದ ತಿಂಗಳು ಪ್ರಕಟವಾಗಿದ್ದು, ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಲಾಯಿತು. ಜೊತೆಗೆ ಕಾಂಗ್ರೆಸ್ ನಾಯಕನಿಗೆ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು.

suddiyaana