ಚೆಸ್ ವಿಶ್ವಕಪ್ ಫೈನಲ್ ಗೆ ಲಗ್ಗೆ ಇಟ್ಟ ಭಾರತದ ಆರ್.ಪ್ರಜ್ಞಾನಂದ – ವಿಶ್ವನಾಥನ್ ಆನಂದ್ ಬಳಿಕ 18ರ ಬಾಲಕನ ಅಮೋಘ ಸಾಧನೆ

ಚೆಸ್ ವಿಶ್ವಕಪ್ ಫೈನಲ್ ಗೆ ಲಗ್ಗೆ ಇಟ್ಟ ಭಾರತದ ಆರ್.ಪ್ರಜ್ಞಾನಂದ – ವಿಶ್ವನಾಥನ್ ಆನಂದ್ ಬಳಿಕ 18ರ ಬಾಲಕನ ಅಮೋಘ ಸಾಧನೆ

ಚೆಸ್ ಜಗತ್ತಿನಲ್ಲಿ ಭಾರೀ ಭರವಸೆ ಮೂಡಿಸಿರುವ ಭಾರತದ ಯುವ ಚೆಸ್‌ ಗ್ರ್ಯಾನ್‌ ಮಾಸ್ಟರ್‌ ಆರ್‌. ಪ್ರಜ್ಞಾನಂದ ಮತ್ತೊಂದು ದಾಖಲೆ ಬರೆದಿದ್ದಾರೆ. ಎಫ್‌ಐಡಿಇ ಚೆಸ್‌ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಫ್ಯಾಬಿಯಾನೊ ಕರುವಾನಾ ವಿರುದ್ಧ ಗೆಲುವು ಪಡೆದು ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮತ್ತೊಂದೆಡೆ ವಿಶ್ವದ ನಂ.1 ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಕೂಡ ಫೈನಲ್‌ ತಲುಪಿದ್ದಾರೆ. ಈ ಇಬ್ಬರು ಮುಂದಿನ ಕೆನಡಾದಲ್ಲಿ ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಭಾರತದ ಉದಯೋನ್ಮುಖ ಚೆಸ್‌ ಆಟಗಾರ ಆರ್‌.ಪ್ರಜ್ಞಾನಂದ ಅವರು ಅಝರ್‌ಬೈಜಾನ್‌ ಬಾಕುವಿನಲ್ಲಿ ನಡೆಯುತ್ತಿರುವ ಎಫ್‌ಐಡಿಇ ಚೆಸ್ ವಿಶ್ವಕಪ್‌ ಟೂರ್ನಿಯಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಸೆಮಿಫೈನಲ್‌ ಹಣಾಹಣಿಯಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಆರಂಭದಲ್ಲಿ ಸಮಬಲ ಹೋರಾಟ ನಡೆಸಿದರೂ ಅಂತಿಮವಾಗಿ 18ರ ಪ್ರಾಯದ ಪ್ರಜ್ಞಾನಂದ ಅವರು 3.5-2.5 ಅಂತರದಲ್ಲಿ ಫ್ಯಾಬಿಯಾನೊ ಅವರನ್ನು ಮಣಿಸಿದರು. ಆ ಮೂಲಕ 21 ವರ್ಷಗಳ ಬಳಿಕ ಚೆಸ್‌ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ ತಲುಪಿದ ಮೊದಲ ಭಾರತೀಯ ಎಂಬ ಸಾಧನೆಯನ್ನು ತಮಿಳುನಾಡು ಬಾಲಕ ಮಾಡಿದ್ದಾನೆ. 2024ರಲ್ಲಿ ಕೆನಡಾದಲ್ಲಿ ನಡೆಯುವ ಫೈನಲ್‌ನಲ್ಲಿ ವಿಶ್ವದ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್‌ ವಿರುದ್ಧ ಭಾರತೀಯ ಚೆಸ್‌ ಪಟು ಸೆಣಸಲಿದ್ದಾರೆ.

ಇದನ್ನೂ ಓದಿ : 2023ರ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟ – ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಗೆ ಸ್ಥಾನ

ಸೆಮಿಫೈನಲ್‌ ಪಂದ್ಯದ ಕ್ಲಾಸಿಕಲ್‌ ಆರಂಭಿಕ ಎರಡು ಗೇಮ್‌ಗಳಲ್ಲಿ ಪ್ರಜ್ಞಾನಂದ ಅವರು, ಫ್ಯಾಬಿಯಾನೊ ವಿರುದ್ಧ 1-1 ಟೈ ಮಾಡಿಕೊಂಡಿದ್ದರು. ಆದರೆ, ಅಮೆರಿಕನ್ ಗ್ರ್ಯಾನ್ ಮಾಸ್ಟರ್‌ ಎದುರು ಭಾರತೀಯ ಗ್ರ್ಯಾನ್‌ ಮಾಸ್ಟರ್‌ ತಮ್ಮ ಬುದ್ಧಿವಂತಿಕೆ ಹಾಗೂ ತಂತ್ರದಲ್ಲಿ ಮೇಲುಗೈ ಸಾಧಿಸಿದರು. ಆ ಮೂಲಕ ಗೆಲುವು ತನ್ನ ತೆಕ್ಕೆಗೆ ಹಾಕಿಕೊಂಡರು.

ವಿಶ್ವನಾಥನ್ ಆನಂದ್ ನಂತರ 21 ವರ್ಷಗಳ ಬಳಿಕ ಚೆಸ್ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಭಾಜನರಾದರು. ಭಾರತೀಯ ಚೆಸ್‌ ದಂತಕತೆ ವಿಶ್ವನಾಥನ್‌ ಆನಂದ್ ಅವರು 2000 ಹಾಗೂ 2002ರಲ್ಲಿ ವಿಭಿನ್ನ ಮಾದರಿಗಳಲ್ಲಿ ಎರಡು ಬಾರಿ ವಿಶ್ವಕಪ್‌ ಮುಡಿಗೇರಿಸಿಕೊಂಡಿದ್ದರು. ವಿಶ್ವದ ಮೂರನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಸೆಮಿಫೈನಲ್‌ ಗೆದ್ದ ಆರ್‌ ಪ್ರಜ್ಞಾನಂದ ಅವರನ್ನು ಚೆಸ್‌ ದಂತಕತೆ ವಿಶ್ವನಾಥನ್ ಆನಂದ ಗುಣಗಾನ ಮಾಡಿದ್ದಾರೆ. “ಪ್ರಜ್ಞಾನಂದ ಅವರು ಫೈನಲ್‌ ತಲುಪಿದ್ದಾರೆ. ಇವರು ಫ್ಯಾಬಿಯಾನೊ ಕರುವಾನಾ ವಿರುದ್ಧ ಟೈಬ್ರೇಕ್‌ನಲ್ಲಿ ಗೆದ್ದಿದ್ದಾರೆ ಹಾಗೂ ಫೈನಲ್‌ನಲ್ಲಿ ಮ್ಯಾಗ್ನಸ್‌ ಕಾರ್ಲ್‌ಸನ್‌ ವಿರುದ್ಧ ಸೆಣಸಲಿದ್ದಾರೆ. ಎಂಥಾ ಪ್ರದರ್ಶನ!,” ಎಂದು ವಿಶ್ವನಾಥನ್ ಆನಂದ್‌ ಟ್ವೀಟ್‌ ಮಾಡಿ ಗುಣಗಾನ ಮಾಡಿದ್ದಾರೆ.

ಪ್ರಜ್ಞಾನಂದ ಅವರು ಫೈನಲ್‌ನಲ್ಲಿ ಕಾರ್ಲ್‌ಸನ್ ವಿರುದ್ಧ ಕಾದಾಟಕ್ಕೆ ಸಿದ್ಧರಾಗಲಿದ್ದಾರೆ. ಈ ಟೂರ್ನಿಯುದ್ದಕ್ಕೂ ತೋರಿದ ಪ್ರದರ್ಶನವನ್ನೇ ಫೈನಲ್‌ ಹಣಾಹಣಿಯಲ್ಲಿಯೂ ತೋರಲು ಅವರು ಎದುರು ನೋಡುತ್ತಿದ್ದಾರೆ. ಇದರ ಜೊತೆಗೆ ಚೆಸ್‌ ಶ್ರೀಮಂತ ಇತಿಹಾಸವನ್ನು ಹೊಂದಿರುವ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುವ ಭರವಸೆ ಮೂಡಿಸಿದ್ದಾರೆ. ಪ್ರಜ್ಞಾನಂದ ಅವರ ಈ ಸಾಧನೆಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ.

18 ವರ್ಷದ ಪ್ರಜ್ಞಾನಂದ ಮುಂದಿನ ವರ್ಷದ ಅಭ್ಯರ್ಥಿಗಳ ಸ್ಪರ್ಧೆಯಲ್ಲಿ ಈಗಾಗಲೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ಹೀಗೆ ಸ್ಥಾನ ಪಡೆದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.

suddiyaana