ದಿಢೀರ್ ಹೊರ ಬಂದ ಸಹನಾ – ಅಕ್ಷರ ಆಚೆ ನಡೆಿದಿದ್ದು ಯಾಕೆ?

ದಿಢೀರ್ ಹೊರ ಬಂದ ಸಹನಾ – ಅಕ್ಷರ ಆಚೆ ನಡೆಿದಿದ್ದು ಯಾಕೆ?

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋ ಈಗಾಗಲೇ ಜನರ ಮನ ಗೆದ್ದಿದೆ. ನಾನ್‌ ಡ್ಯಾನ್ಸ್‌ಗಳಿಗೆ ಜೀ ಕನ್ನಡ ವೇದಿಕೆ ಕಲ್ಪಿಸಿದ್ದು, ಕುಣಿಯೋಕೆ ಬರದವರಿಗೆ ಈ ಅವಕಾಶ ನೀಡಿಲಾಗಿದೆ. ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕಲಾವಿದರು, ಇಲ್ಲಿಯ ತನಕ ಒಂದು ಬಾರಿಯೂ ಡ್ಯಾನ್ಸ್‌ ಮಾಡದವರು ಈ ಶೋನಲ್ಲಿ ಸ್ಪರ್ಧಿಸಿ, ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸಹನಾ ಪಾತ್ರ ಮಾಡುತ್ತಿದ್ದ ನಟಿ ಅಕ್ಷರ ದಿಢೀರ್‌ ಅಂತಾ ಶೋನಿಂದ ಹೊರ ನಡೆದಿದ್ದಾರೆ. ಅಷ್ಟಕ್ಕೂ ಅಕ್ಷರ ಶೋನಿಂದ ಏಕಾಏಕಿ ಹೊರ ನಡೆದಿದ್ದು ಯಾಕೆ? ಝೀ ಕುಟುಂಬದಲ್ಲಿದ್ದ ಸಹನಾ, ಅದೇ ಚಾನೆಲ್ ಪ್ರೋಗ್ರಾಮ್ ನಿಂದ ಹೊರಬಂದಿರೋದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಒಂದು ಪಾತ್ರ.. ಒಂದೇ ಕಾಸ್ಟ್ಯೂಮ್‌!! – ದೀಪಾ ಡ್ರೆಸ್‌ ಬದಲಾಗಲ್ವಾ?

ಜೀ ಕನ್ನಡ ವಾಹಿನಿ ಮನರಂಜನೆ ಕೊಡೊದ್ರಲ್ಲಿ ಎತ್ತಿದ ಕೈ.. ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಾ ಬಂದಿದೆ. ಒಂದಾದ ಮೇಲೊಂದು ಹೊಸ ಕಾರ್ಯಕ್ರಮಗಳನ್ನು ಪ್ರಸಾರ ಮಾಡ್ತಾ ಬರುತ್ತಿದೆ. ಜೀ ಕನ್ನಡದಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಪ್ರೀಮಿಯರ್ ಶೋ ಕೂಡಾ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದೆ. ಮಾತಿನ ಮಲ್ಲಿ, ಚಿನಕುರಳಿ ಅನುಶ್ರೀ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಶೋನಲ್ಲಿ ಸೆಂಚುರಿ ಸ್ಟಾರ್‌ ಶಿವರಾಜ್ ಕುಮಾರ್, ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ, ಚಿನ್ನಿ ಪ್ರಕಾಶ್ ಮಾಸ್ಟರ್ ಹಾಗೂ ರಕ್ಷಿತಾ ಪ್ರೇಮ್ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಪ್ರತಿ ಸೀಸನ್​ನಲ್ಲೂ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಾ ಬಂದಿರೋ ಡಿಕೆಡಿ ಶೋ ಈ ಬಾರಿ ಕೊಂಚ ವಿಭಿನ್ನತೆಯಿಂದ ಕೂಡಿದೆ.  ಈ ಬಾರಿ ಡ್ಯಾನ್ಸರ್ ಮತ್ತು ಸೆಲೆಬ್ರಿಟಿಗಳ ಕಾಂಬಿನೇಷನ್‌ನಲ್ಲಿ ಡಿಕೆಡಿ ಮೂಡಿ ಬರುತ್ತಿದೆ. ಶೋ ಶುರುವಾದ ದಿನದಿಂದ ಇಲ್ಲಿಯವರೆಗೆ ವೀಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇವೆಲ್ಲದ್ರ ಮಧ್ಯೆ ಡಿಕೆಡಿ ಶೋಯಿಂದ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸಹನಾ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಅಕ್ಷರ ಆಚೆ ಬಂದಿದ್ದಾರೆ.

ಹೌದು, ಕಳೆದ ಎರಡು ಎಪಿಸೋಡ್​ಗಳಲ್ಲಿ ನಟಿ ಅಕ್ಷರ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಗೊಂದಲ ಮನೆ ಮಾಡಿತ್ತು. ಮುಂದಿನ ಸಂಚಿಕೆಯಲ್ಲಿ ಆಕೆ ಭಾಗವಹಿಸಬಹುದು ಅಂತಾ ನಿರೀಕ್ಷೆ ಮಾಡಿದ್ರು.. ಆದ್ರೆ, ಶೋನಲ್ಲಿ ಅಕ್ಷರ ಬದಲು ಶ್ರಾವಣಿ ಸುಬ್ರಮಣ್ಯ ಸೀರಿಯಲ್​ ನಟಿ ಶ್ರೀವಲ್ಲಿಯನ್ನ ಪರಿಚಯಿಸಲಾಗಿದೆ. ನಟಿ ಕೀರ್ತಿ ವೆಂಕಟೇಶ್  ಅವರು ಡಿಕೆಡಿಯಲ್ಲಿ ಮುಂದುವರಿಯುತ್ತಾರೆ ಎಂದ ಆಂಕರ್‌ ಅನುಶ್ರೀ..  ಬಳಿಕ ಅಕ್ಷರ ಶೋನಿಂದ ಹೊರಬಂದ ಬಗ್ಗೆ ವೇದಿಕೆ ಮೇಲೆಯೇ ಸ್ಪಷ್ಟನೆ ನೀಡಿದ್ದಾರೆ., ಸಹನಾ ಅವರು ಕಾರಣಾಂತರಗಳಿಂದ ಈ ಶೋನಿಂದ ಹೊರ ನಡೆದಿದ್ದಾರೆ ಅಂತಾ ಮಾತ್ರ ಹೇಳಿದ್ದಾರೆ.

ಇನ್ನು ಡಿಕೆಡಿಯಿಂದ ಹೊರ ಬಂದಿರುವ ಬಗ್ಗೆ ನಟಿ ಅಕ್ಷರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೇದಿಕೆ ಮೇಲೆ ಆಗಲಿ, ಸೋಷಿಯಲ್​ ಮೀಡಿಯಾದಲ್ಲಿ ಆಗಲಿ ಎಲ್ಲೂ ಕೂಡ ಮಾತನಾಡಿಲ್ಲ. ಇದರಿಂದ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ. ಅಷ್ಟು ಚೆನ್ನಾಗಿ ಡ್ಯಾನ್ಸ್​ ಮಾಡುತ್ತಿದ್ದ ನಟಿಗೆ ಏನಾಯ್ತು ಎಂದು ಕಾಮೆಂಟ್ಸ್​ ಮಾಡುವ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಬೇರೆ ಸೀರಿಯಲ್ ನಲ್ಲಿ ಒಳ್ಳೆ ಚಾನ್ಸ್‌ ಸಿಕ್ಕಿತ್ತು. ಹೀಗಾಗಿ ಶೋ ನಿಂದ ಹೊರ ಬಂದಿರ್ಬೋದು ಅಂತಾ ಕಾಮೆಂಟ್‌ ಮಾಡ್ತಿದ್ದಾರೆ.

ಇನ್ನು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಹಿರಿಮಗಳು ಸಹನಾ ಆಗಿ ಅಭಿನಯಿಸುತ್ತಿರುವ ಅಕ್ಷರ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿದ್ದು ಪೋಷಕ ಪಾತ್ರದ ಮೂಲಕ. ‘ರಕ್ಷಾಬಂಧನ’ ಧಾರಾವಾಹಿಯಲ್ಲಿ ಕಾರ್ತಿಕ್ ತಂಗಿಯಾಗಿ ನಟಿಸುವ ಮೂಲಕ ಅಭಿನಯಕ್ಕೆ ಕಾಲಿಟ್ಟ ಈಕೆ ನಟಿಸಿದ್ದು ಪೋಷಕ ಪಾತ್ರದಲ್ಲಿ. ಆದರೂ ನಟನೆಯ ಮೂಲಕ ಗಮನ ಸೆಳೆದ ಬೆಡಗಿ. ತದ ನಂತರ ನಾಯಕಿಯಾಗಿ ಭಡ್ತಿ ಪಡೆದ ಅಕ್ಷರ, ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಉದಯ ವಾಹಿನಿಯಲ್ಲಿ ರಮೇಶ್ ಇಂದಿರಾ ಅವರ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ ಭಕ್ತಿಪ್ರಧಾನ ಧಾರಾವಾಹಿ ‘ಅಮ್ನೋರು’ನಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು.  ಹೀಗೆ ಅನೇಕ ಸೀರಿಯಲ್‌ ಮೂಲಕ ಮಿಂಚಿದ್ದ ನಟಿ ಅಕ್ಷರ ಡಿಕೆಡಿಯಲ್ಲೂ ವೀಕ್ಷರ ಮನಗೆದ್ದಿದ್ರು. ಇದೀಗ ಏಕಾಏಕಿ ಶೋನಿಂದ ಹೊರಬಂದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇನ್ನಾದ್ರೂ ಅಕ್ಷರ ಈ ಬಗ್ಗೆ ಸ್ಪಷ್ಟನೆ ಕೊಡ್ತಾರಾ ಅಂತಾ ಕಾದು ನೋಡ್ಬೇಕಿದೆ.

Shwetha M

Leave a Reply

Your email address will not be published. Required fields are marked *