ಗ್ಯಾಂಗ್ ವಾರ್ ನಲ್ಲಿ ಮತ್ತೊಬ್ಬ ಖಲಿಸ್ತಾನಿ ಉಗ್ರನ ಹತ್ಯೆ – ಭಾರತ ಮತ್ತು ಕೆನಡಾ ನಡುವಿನ ಪರಿಸ್ಥಿತಿ ಮತ್ತಷ್ಟು ಉದ್ವಿಘ್ನ

ಗ್ಯಾಂಗ್ ವಾರ್ ನಲ್ಲಿ ಮತ್ತೊಬ್ಬ ಖಲಿಸ್ತಾನಿ ಉಗ್ರನ ಹತ್ಯೆ – ಭಾರತ ಮತ್ತು ಕೆನಡಾ ನಡುವಿನ ಪರಿಸ್ಥಿತಿ ಮತ್ತಷ್ಟು ಉದ್ವಿಘ್ನ

ಕೆನಡಾದಲ್ಲಿ ಖಲಿಸ್ತಾನಿ ಉಗ್ರನ ಹತ್ಯೆ ಬೆನ್ನಲ್ಲೇ ಭಾರತ ಮತ್ತು ಕೆನಡಾದ ನಡುವಿನ ಸಂಬಂಧ ತೀರಾ ಹದಗೆಡುತ್ತಿದೆ. ಇದೀಗ ಕೆನಡಾದಲ್ಲಿ ಮತ್ತೊಬ್ಬ ಖಲಿಸ್ತಾನಿ ಉಗ್ರನ ಹತ್ಯೆಯಾಗಿದೆ. ಕೆನಡಾದಲ್ಲಿನ ಖಲಿಸ್ತಾನಿ ಉಗ್ರ ಸುಖ್ದೋಲ್‌ ಸಿಂಗ್‌ ಅಲಿಯಾಸ್‌ ಸುಖ ದುನೆಖೆ ಗುರುವಾರ ಬೆಳಗ್ಗೆ ನಡೆದ ಗ್ಯಾಂಗ್‌ ವಾರ್‌ನಲ್ಲಿ ಹತ್ಯೆಗೀಡಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ʼಮೋದಿ ಈಸ್‌ ಟೆರರಿಸ್ಟ್‌, ಪಂಜಾಬ್‌ ಈಸ್‌ ನಾಟ್‌ ಇಂಡಿಯಾʼ!- ಕೆನಡಾ ದೇಗುಲದ ಮೇಲೆ ಮತ್ತೆ ಖಲಿಸ್ತಾನ ಉಗ್ರರ ಬರಹ!

ಈಗಾಗಲೇ ಉಗ್ರ ಹರ್ದೀಪ್ ನಿಜ್ಜರ್ ಹತ್ಯೆ ಬಳಿಕ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಕೆನಡಾದ ಪ್ರಧಾನಿ ಈ ಹತ್ಯೆಗೆ ಭಾರತವೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಮತ್ತೊಬ್ಬ ಉಗ್ರನನ್ನ ಹತ್ಯೆಗೈಯಲಾಗಿದ್ದು ಪರಿಸ್ಥಿತಿ ಉದ್ವಿಘ್ನ ಸ್ಥಿತಿಗೆ ತಲುಪಿದೆ. ಹತ್ಯೆಗೀಡಾದ ಸುಖ ದುನೆಖೆ ಕೆನಡಾದಲ್ಲಿ ನಡೆಯುತ್ತಿದ್ದ ಖಲಿಸ್ತಾನ್ ಚಳವಳಿಯ ಭಾಗವಾಗಿದ್ದ ಎಂದು ತಿಳಿದುಬಂದಿದೆ. ಈತ ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾ ಜೊತೆ ನಿಕಟ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ. ಸುಖ ದುನೆಖೆಯನ್ನು ವಿನ್‌ಪಿಂಗ್‌ ಪ್ರದೇಶದಲ್ಲಿ ಆತನ ಎದುರಾಳಿ ಗ್ಯಾಂಗ್‌ನವರು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಸುಖ್ದೋಲ್‌ ಸಿಂಗ್‌ ಪಂಜಾಬ್‌ ಮೋಗಾ ಪ್ರದೇಶಕ್ಕೆ ಸೇರಿದವನಾಗಿದ್ದು, ಖಲಿಸ್ತಾನಿ ಟೈಗರ್‌ ಫೋರ್ಸ್‌ನ ಉಗ್ರ ಅರ್ಶ್‌ದೀಪ್‌ ಸಿಂಗ್‌ನ ಆಪ್ತನಾಗಿದ್ದ. ಜೂನ್‌ನಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಾದ ಬಳಿಕ ಅರ್ಶ್‌ ದಲ್ಲಾ ಹಾಗೂ ಸುಖ್ದೋಲ್‌ ಸಿಂಗ್‌ ಖಲಿಸ್ತಾನಿ ಟೈಗರ್‌ ಫೋರ್ಸ್‌ನ ಸಂಘಟನೆಯನ್ನು ವಿಸ್ತರಿಸಲು ಪ್ರಯತ್ನಿಸಿದ್ದರು. ಈಗ ಎದುರಾಳಿ ಗ್ಯಾಂಗ್‌ನಿಂದ ಸುಖ್ದೋಲ್‌ ಸಿಂಗ್‌ ಹತ್ಯೆಯಾಗಿದ್ದಾನೆ. ಇನ್ನು, ಪಂಜಾಬ್‌ನಲ್ಲಿ ಹಲವು ಅಪರಾಧಗಳಲ್ಲಿ ತೊಡಗಿದ್ದ ಸುಖ್ದೋಲ್‌ ಸಿಂಗ್‌ 2017ರಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಕೆನಡಾಗೆ ಪರಾರಿಯಾಗಿದ್ದ. ಅಲ್ಲಿ, ದವಿಂದರ್‌ ಬಾಂಬಿಹಾ ಎಂಬ ಗ್ಯಾಂಗ್‌ ಜತೆ ಸುಖ್ದೋಲ್‌ ಸಿಂಗ್‌ ಗುರುತಿಸಿಕೊಂಡಿದ್ದ. ಅದಲ್ಲದೇ ಖಲಿಸ್ತಾನಿ ಉಗ್ರರ ಜೊತೆ ಸಂಪರ್ಕ ಹೊಂದಿದ್ದ. ದವಿಂದರ್‌ ಬಾಂಬಿಹಾ ಗ್ಯಾಂಗ್‌ ಹಾಗೂ ವಿರೋಧಿ ಬಣದ ನಡುವೆ ಆಗಾಗ ಸಂಘರ್ಷಗಳು ನಡೆಯುತ್ತಿರುತ್ತವೆ. ಗುರುವಾರ ಬೆಳಗ್ಗೆ ನಡೆದ ದಾಳಿಯಲ್ಲಿ ಸುಖಾ ದುನೆಕೆ ಹತ್ಯೆಯಾಗಿದೆ.

ಕೆನಡಾದಲ್ಲಿ ಕಳೇದ ಜೂನ್‌ನಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಭಾರತದ ಸರ್ಕಾರಿ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ಬಹಿರಂಗ ಆರೋಪ ಮಾಡಿದ್ದರು. ಇದರ ಬೆನ್ನಲ್ಲಿಯೇ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು. ಟ್ರುಡೋ ಗಂಭೀರ ಆರೋಪದ ಬಳಿಕ ಉಭಯ ದೇಶಗಳು ಪರಸ್ಪರ ರಾಯಭಾರಿಗಳನ್ನು ಅಮಾನತು ಮಾಡಿದ್ದವು. ಜೊತೆಗೆ ಕೆನಡಾದ ಪ್ರಧಾನಿಯ ಆರೋಪಗಳನ್ನು ಭಾರತ ನಿರಾಕರಿಸಿದ್ದು, ಆರೋಪಗಳು ಅಸಂಬದ್ಧ ಮತ್ತು ಪ್ರೇರಿತ ಎಂದಿದೆ. ಇದರ ಬೆನ್ನಲ್ಲಿಯೇ ಕೆನಡಾದಲ್ಲಿರುವ ಭಾರತೀಯರಿಗೆ ಎಚ್ಚರಿಕೆಯನ್ನು ಕೂಡ ಭಾರತ ಸರ್ಕಾರ ನೀಡಿತ್ತು. ಕೆನಡಾದಲ್ಲಿ ರಾಜಕೀಯ ಪ್ರೇರಿತ ದ್ವೇಷದ ದಾಳಿಗಳು ನಡೆಯುತ್ತಿವೆ. ಭಾರತೀಯ ನಾಗರೀಕರು ಎಲ್ಲಿಗಾದರೂ ಪ್ರಯಾಣಿಸುವ ವೇಳೆ ಎಚ್ಚರ ವಹಿಸುವಂತೆ ಭಾರತೀಯ ವಿದೇಶಾಂಗ ಇಲಾಖೆ ಸೂಚನೆ ನೀಡಿತ್ತು. ಈಗ ಮತ್ತೊಬ್ಬ ಖಲಿಸ್ತಾನಿ ಉಗ್ರನ ಹತ್ಯೆಯಾಗಿರುವುದು ಕೆನಡಾದಲ್ಲಿ ಪರಿಸ್ಥಿತಿ ಮತ್ತಷ್ಟು ವಿಷಮ ಸ್ಥಿತಿಗೆ ತೆರಳುವ ಸಾಧ್ಯತೆ ಇದೆ.

Shantha Kumari