ಬಳೆಗೆ ಕಿಚ್ಚನ ಚಪ್ಪಾಳೆ, ಕಿಚ್ಚನಿಗೆ ಮುದ್ದಿನ ಹೆಂಡತಿಯ ಚಪ್ಪಾಳೆ – ‘ಈ ಬಳೆಗೆ ನೀವು ಕೊಟ್ಟ ಚಪ್ಪಾಳೆಗೆ ನನ್ನ ಚಪ್ಪಾಳೆ ಕೂಡ ಇದೆ’ ಎಂದ ಪ್ರಿಯಾ ಸುದೀಪ್

ಬಳೆಗೆ ಕಿಚ್ಚನ ಚಪ್ಪಾಳೆ, ಕಿಚ್ಚನಿಗೆ ಮುದ್ದಿನ ಹೆಂಡತಿಯ ಚಪ್ಪಾಳೆ – ‘ಈ ಬಳೆಗೆ ನೀವು ಕೊಟ್ಟ ಚಪ್ಪಾಳೆಗೆ ನನ್ನ ಚಪ್ಪಾಳೆ ಕೂಡ ಇದೆ’ ಎಂದ ಪ್ರಿಯಾ ಸುದೀಪ್

ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಗಳು ಯಾವ ವಿಚಾರಕ್ಕೆ ಸದ್ದು ಮಾಡಿದ್ದರೋ ಬಿಟ್ಟರೋ.. ಆದರೆ, ಬಳೆ ವಿಚಾರ ಮಾತ್ರ ರಾಜ್ಯಾದ್ಯಂತ ಸದ್ದು ಮಾಡಿದೆ. ಬಳೆಯ ಶಬ್ಧ ಜೋರಾಗಿಯೇ ಸೌಂಡ್ ಮಾಡಿದೆ. ಹೀಗಾಗಿಯೇ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚನ ಚಪ್ಪಾಳೆ ಕೂಡಾ ಬಳೆಗೆ ಸಿಕ್ಕಿದೆ. ಅದು ಕೂಡಾ ಮೊದಲ ಬಾರಿಗೆ ಒಂದು ವಸ್ತುವಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿರುವುದು. ಇದನ್ನು ಈಗ ಕಿಚ್ಚ ಸುದೀಪ್ ಪತ್ನಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಆನೆಯ ಮದ ಇಳಿಸಿದ ಕಿಚ್ಚ ಸುದೀಪ್ – ಎಲಿಮಿನೇಷನ್ ಪ್ರಕ್ರಿಯೆಯಲ್ಲೂ ಕೊನೇ ತನಕ ಆತಂಕದಲ್ಲೇ ಇದ್ದ ವಿನಯ್..!

ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ನಾಲ್ಕನೇ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ತಮ್ಮ ಮೆಚ್ಚುಗೆಯ ಚಪ್ಪಾಳೆಯನ್ನ ಕೊಟ್ಟಿದ್ದು ಬಳೆಗಳಿಗೆ. ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ವಸ್ತುವಿಗೆ ಕಿಚ್ಚ ಸುದೀಪ್ ಚಪ್ಪಾಳೆ ನೀಡಿದರು. ಕಿಚ್ಚ ಸುದೀಪ್ ಅವರ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಮುಖ್ಯವಾಗಿ ಕಿಚ್ಚನ ಮುದ್ದಿನ ಮಡದಿ ಪ್ರಿಯಾ ಸುದೀಪ್ ಕೂಡಾ ಕಿಚ್ಚನ ಚಪ್ಪಾಳೆಗೆ ತನ್ನದೂ ಒಂದು ಚಪ್ಪಾಳೆ ಎಂದಿರುವುದು ಅಭಿಮಾನಿಗಳ ಸಂತಸ ಇಮ್ಮಡಿಯಾಗಿದೆ.

ಬಳೆ ಬಲದ ಸಂಕೇತ ಎಂದ ಕಿಚ್ಚ ಸುದೀಪ್‌ಗೆ ಅಭಿಮಾನಿಗಳು ಹಾಗೂ ವೀಕ್ಷಕರು ಶಿಳ್ಳೆ ಹೊಡೆಯುತ್ತಿದ್ದಾರೆ. ಬಲಶಾಲಿ ಬಳೆ ಎಂದು ಹೇಳಿ ಬಳೆಗೆ ಹಾಗೂ ಬಳೆಯ ಹಿಂದಿನ ಶಕ್ತಿಗೆ ಕಿಚ್ಚ ಸುದೀಪ್ ತಮ್ಮ ಮೆಚ್ಚುಗೆಯ ಚಪ್ಪಾಳೆಯನ್ನ ನೀಡಿದರು. ಈ ಬಗ್ಗೆ ಸುದೀಪ್ ಪತ್ನಿ ಪ್ರಿಯಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ‘ಈ ಬಳೆಗೆ ನೀವು ಕೊಟ್ಟ ಚಪ್ಪಾಳೆಗೆ ನನ್ನ ಚಪ್ಪಾಳೆ ಕೂಡ ಇದೆ’ ಎಂದು ಪ್ರಿಯಾ ಸುದೀಪ್ ಪೋಸ್ಟ್ ಹಾಕಿದ್ದಾರೆ. ಪ್ರಿಯಾ ಸುದೀಪ್ ಅವರ ಪೋಸ್ಟ್ ವೈರಲ್ ಆಗಿದೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಬಳೆಗೆ ಸಿಕ್ಕಿರುವ ಚಪ್ಪಾಳೆಯನ್ನು ನಟಿಯರು ಸ್ವಾಗತಿಸಿದ್ದಾರೆ. ನಾನು ಹೆಣ್ಣು. ಬಳೆ ಬಲದ ಸಂಕೇತ. ಕಿಚ್ಚ ಸುದೀಪ್ ಅವರಿಗೆ ಧನ್ಯವಾದಗಳು. ಹೆಣ್ಣಿಗೆ ಗೌರವಿಸುವ ಪುರುಷರನ್ನ ಗೌರವಿಸಿ. ಬಳೆ ಬಲದ ಸಂಕೇತ’’ ಎಂದು ಇನ್ಸ್ಟಾಗ್ರಾಮ್ನಲ್ಲಿ ನಟಿ ಕಾವ್ಯ ಶಾಸ್ತ್ರಿ ಬರೆದುಕೊಂಡಿದ್ದಾರೆ. ಜೊತೆಗೆ ತಾವು ಕೈತುಂಬಾ ಬಳೆಗಳನ್ನ ತೊಟ್ಟಿರುವ ಫೋಟೋವನ್ನು ಕಾವ್ಯ ಶಾಸ್ತ್ರಿ ಹಂಚಿಕೊಂಡಿದ್ದಾರೆ.

ಇನ್ನೂ, ನಟಿ ಹಾಗೂ ಬಾಡಿ ಬಿಲ್ಡರ್ ಚಿತ್ರಲ್ ರಂಗಸ್ವಾಮಿ ಕೂಡ ತಾವು ಬಳೆಗಳನ್ನ ತೊಟ್ಟಿರುವ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಬಳೆ ಬಲಹೀನತೆಯ ಸಂಕೇತ’ ಎಂಬರ್ಥದಲ್ಲಿ ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ರಂಪಾಟ ಮಾಡಿದ್ದರು. ಬಳೆಗಳ ರಾಜ ಎಂದು ಕರೆಯುವ ಮೂಲಕ ಬಳೆಯನ್ನು ನಿಕೃಷ್ಟವಾಗಿ ನೋಡಿದ್ದಾರೆ ಎಂದು ವೀಕ್ಷಕರು ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದರು. ಕಿಚ್ಚ ಸುದೀಪ್ ಸ್ಪೆಷಲ್ ಕ್ಲಾಸ್ ತಗೊಂಡು, ಬಳೆಗೆ ಚಪ್ಪಾಳೆ ತಟ್ಟಿದ್ಮೇಲೆ ವಿನಯ್ ಕ್ಷಮೆ ಕೇಳಿದರು. ಬಲ ಇಲ್ಲ ಅಂತ ತೋರಿಸೋಕೆ ಅಲ್ಲ. ಫ್ಲೋನಲ್ಲಿ ಬಂದಂತಹ ಒಂದು ಮಾತು. ತಪ್ಪು ಮಾತು ನನ್ನ ಬಾಯಿಂದ ಬಂದಿದೆ. ಐ ಆಮ್ ಸಾರಿ. ಹೆಂಗಸರನ್ನ ನಾನು ಯಾವತ್ತೂ ಕೆಳಗೆ ಹಾಕಿ ಮಾತನಾಡಿದವನು ಅಲ್ಲ. ತುಂಬಾ ಗೌರವ ಕೊಟ್ಟು ಮಾತನಾಡುವವನು ನಾನು. ಕೆಲವೊಂದು ಘಟನೆಯಾದಾಗ ಪ್ರೊವೋಕಿಂಗ್ ಆದಾಗ ಮಾತುಗಳು ನನ್ನ ಬಾಯಿಂದ ಬಂತು. ತಕ್ಷಣ ನಾನು ಸಾರಿ ಕೇಳಿದೆ. ನನಗೂ ಹೆಂಡತಿ ಇದ್ದಾಳೆ. ನಮ್ಮ ಮನೆಯಲ್ಲಿ ಅವಳೇ ತುಂಬಾ ಪವರ್ಫುಲ್. ಮಹಿಳೆಯರಿಗೆ ಅಗೌರವ ತೋರಿಸೋದು ನನ್ನ ಉದ್ದೇಶ ಅಲ್ಲ. ನನ್ನ ಪದಗಳಿಂದ ಯಾರಿಗಾದರೂ ಬೇಜಾರಾಗಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಕ್ಷಮೆ ಇಡೀ ಕರ್ನಾಟಕಕ್ಕೆ’’ ಎಂದು ಹೇಳಿ ಕ್ಷಮೆಯಾಚಿಸಿದರು ವಿನಯ್.

Sulekha