ಮಗ ವಿದೇಶದಲ್ಲಿ.. ತಂದೆ ಜೈಲಿನಲ್ಲಿ! – ವಿಚಾರಣೆ ವೇಳೆಯೂ ಕೈಯ್ಯಲ್ಲಿ 3 ನಿಂಬೆಹಣ್ಣು ಹಿಡಿದಿದ್ದ ರೇವಣ್ಣ!

ಮಗ ವಿದೇಶದಲ್ಲಿ.. ತಂದೆ ಜೈಲಿನಲ್ಲಿ! – ವಿಚಾರಣೆ ವೇಳೆಯೂ ಕೈಯ್ಯಲ್ಲಿ 3 ನಿಂಬೆಹಣ್ಣು ಹಿಡಿದಿದ್ದ ರೇವಣ್ಣ!

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ಪ್ರಕರಣಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಸಿಗುತ್ತಾ ಇದೆ. ಈ ಪ್ರಕರಣ ಇದೀಗ ಜಾಗತಿಕವಾಗಿ ಭಾರೀ ಸದ್ದು ಮಾಡುತ್ತಿದೆ. ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮಾಜಿ ಮನೆ ಕೆಲಸದಾಕೆಯ ಅಪಹರಣ ಪ್ರಕರಣದ ಸಂಬಂಧ ಹೆಚ್‌ಡಿ ರೇವಣ್ಣ ಅರೆಸ್ಟ್‌ ಆಗಿದ್ದಾರೆ. ಇದೀಗ ಅವರ ವಿಚಾರಣೆ ನಡೆಯುತ್ತಿದೆ. ಆದರೆ ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿದ್ದು, ಮಗನ ಬಂಧನ ಯಾವಾಗ ಅನ್ನೋ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಅಲ್ಲದೆ ಸೋಮವಾರ ಬೆಂಗಳೂರಿಗೆ ಸಂಸದ ಪ್ರಜ್ವಲ್ ರೇವಣ್ಣ ‌ವಾಪಾಸ್ಸಾಗ್ತಾರೆ ಅನ್ನೋ ಮಾತುಗಳು ಸಹ ಕೇಳಿಬಂದಿವೆ.

ಇದನ್ನೂ ಓದಿ: ‘ಹೂವು’ ಚಿಹ್ನೆಗೆ ವೋಟು ಹಾಕುತ್ತೇನೆ ಎಂದ ಮಹಿಳೆ – ಕಪಾಳಮೋಕ್ಷ ಮಾಡಿದ ಕೈ ಅಭ್ಯರ್ಥಿ!

ಪ್ರಜ್ವಲ್‌ ರೇವಣ್ಣಗೆ ಎಸ್‌ಐಟಿ ಅಧಿಕಾರಿಗಳು ಈಗಾಗಲೇ ನೋಟಿಸ್‌ ಜಾರಿ ಮಾಡಿದ್ದಾರೆ.  7 ವಿವಿಧ ನೋಟಿಸ್‌ ಜಾರಿ ಮಾಡಿದ್ದು, ಭಾರತದ ಯಾವುದೇ ಏರ್ಪೋರ್ಟ್‌ಗೆ ಬಂದಿಳಿದರೂ ಸಹ ಪ್ರಜ್ವಲ್ ಲಾಕ್ ಆಗಲಿದ್ದಾರೆ. ಆದರೂ ಎರಡನೇ ಹಂತದ ಮತದಾನ ಮುಗಿಯುವವರೆಗೆ ಪ್ರಜ್ವಲ್ ವಾಪಸ್‌ ಆಗೋದು ಡೌಟ್ ಎಂದೂ ಸಹ ಕೆಲವು ಮೂಲಗಳಿಂದ ತಿಳಿದುಬಂದಿದೆ. ಅಂದರೆ ಮೇ.7 ರವರೆಗೂ ಪ್ರಜ್ವಲ್ ಬರುವುದಿಲ್ಲ ಎನ್ನಲಾಗಿದೆ. ಇನ್ನು ಕುಟುಂಬಸ್ಥರೇ ಪ್ರಜ್ವಲ್‌ ರೇವಣ್ಣಗೆ ಆದಷ್ಟು ಬೇಗ ಬಂದು ಶರಣಾಗುವಂತೆ ಸಲಹೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ನ್ಯಾಯಾಧೀಶರ ಮುಂದೆಯೂ ಕೈಯ್ಯಲ್ಲಿ 3 ನಿಂಬೆಹಣ್ಣು ಹಿಡಿದಿದ್ದ ರೇವಣ್ಣ!

ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಕೇಸ್​ನಲ್ಲಿ ಮೊದಲ ಆರೋಪಿಯಾಗಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಶನಿವಾರ ಅರೆಸ್ಟ್‌ ಮಾಡಿದ್ದಾರೆ. ಎಸ್ ಐ ಟಿ ಅಧಿಕಾರಿಗಳ ವಿಚಾರಣೆ ವೇಳೆ ಹಾಗೂ ನ್ಯಾಯಾಧೀಶರ ಎದುರು ಹಾಜರುಪಡಿಸುವ ಸಂದರ್ಭದಲ್ಲಿ ಎಚ್‌.ಡಿ.ರೇವಣ್ಣ ಅವರು ಮೂರು ನಿಂಬೆಹಣ್ಣು ಕೈಯಲ್ಲಿ ಹಿಡಿದುಕೊಂಡಿದ್ದರು. ಪೊಲೀಸ್ ವಾಹನದಿಂದ ಇಳಿದಿದ್ದ ರೇವಣ್ಣ, ನಿಂಬೆ ಹಣ್ಣುಗಳ ಸಮೇತ ನ್ಯಾಯಾಧೀಶರ ಮನೆಯತ್ತ ಹೆಜ್ಜೆ ಹಾಕಿದರು. ವಿಶೇಷ ಕೊಠಡಿಯಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೂ ರೇವಣ್ಣ ನಿಂಬೆ ಹಣ್ಣು ಬಿಟ್ಟಿರಲಿಲ್ಲ.

ಇನ್ನು ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾರೆ. ತನ್ನದು ಯಾವುದೇ ತಪ್ಪಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ರಾಜಕೀಯ ಬೆಳವಣಿಗೆ ಸಹಿಸದವರು ಈ ರೀತಿ ಮಾಡಿದ್ದಾರೆ. ನನಗೆ ನ್ಯಾಯ ಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ನ್ಯಾಯಾಧೀಶರ ನಿವಾಸದಲ್ಲಿ ಎಚ್​.ಡಿ. ರೇವಣ್ಣ ಪರ ವಕೀಲ ಮತ್ತು ಎಸ್​ಐಟಿ ಅಧಿಕಾರಿಗಳ ನಡುವಿನ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ರವೀಂದ್ರ ಕಟ್ಟಿಮನಿ ಅವರು, ರೇವಣ್ಣರನ್ನು ಮೇ.08ರವರೆಗೆ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ್ದಾರೆ.

Shwetha M