ಚೀನಾದಲ್ಲಿ ನ್ಯುಮೋನಿಯಾ ಹೆಚ್ಚಳ – ಭಾರತದಲ್ಲಿ ಹೈ ಅಲರ್ಟ್‌ ಘೋಷಣೆ!

ಚೀನಾದಲ್ಲಿ ನ್ಯುಮೋನಿಯಾ ಹೆಚ್ಚಳ – ಭಾರತದಲ್ಲಿ ಹೈ ಅಲರ್ಟ್‌ ಘೋಷಣೆ!

ಕೊರೊನಾ ತವರು ಚೀನಾದಲ್ಲಿ ಹೊಸ ಹೊಸ ಕಾಯಿಲೆಗಳು ಉಲ್ಬಣಗೊಳ್ಳುತ್ತಲೇ ಇದೆ. ಇದೀಗ ಕೆಲವು ದಿನಗಳಿಂದ ನ್ಯುಮೋನಿಯಾ ಹೆಚ್ಚಾಗುತ್ತಿದೆ. ಈ ರೋಗ ಹೆಚ್ಚಾಗಿ ಮಕ್ಕಳನ್ನೇ ಟಾರ್ಗೆಟ್‌ ಮಾಡುತ್ತಿದೆ. ಇದರಿಂದಾಗಿ ಇತರ ದೇಶಗಳಿಗೂ ಆತಂಕ ಶುರುವಾಗಿದೆ. ಇದೀಗ ಭಾರತದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಚೀನಾದಲ್ಲಿ ನ್ಯುಮೋನಿಯಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯು ಭಾರತದಲ್ಲಿ ಹೈ ಅಲರ್ಟ್ ಘೋಷಿಸಿದೆ. ಆರೋಗ್ಯ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ತಕ್ಷಣವೇ ಪರಿಶೀಲಿಸುವಂತೆ ಕೇಂದ್ರವು ರಾಜ್ಯ ಸರ್ಕಾರಗಳಿಗೆ ಖಡಕ್‌ ಸೂಚನೆ ಕೊಟ್ಟಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ಹೊಸ ಸೋಂಕು ಪತ್ತೆ! – ಮಕ್ಕಳ ಜೀವ ಹಿಂಡುತ್ತಿದೆ ಈ ನಿಗೂಢ ರೋಗ!

ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಔಷಧಗಳು, ಇನ್ಫ್ಲುಯೆನ್ಸಾ ಲಸಿಕೆಗಳು, ಆಕ್ಸಿಜನ್‌, ಆ್ಯಂಟಿಬಯೊಟಿಕ್‌, ವೈಯಕ್ತಿಕ ಸುರಕ್ಷತೆಯ ಸಾಧನಗಳು ಇತರೇ ಪರೀಕ್ಷಾ ಕಿಟ್‌ಗಳಂತಹ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಅಲ್ಲದೇ ಆಕ್ಸಿಜನ್‌ ಪ್ಲಾಂಟ್‌, ವೆಂಟಿಲೇಟರ್‌ಗಳ ಕಾರ್ಯವೈಖರಿ, ಸೋಂಕು ನಿಯಂತ್ರಿಸುವ ಅಗತ್ಯ ಕ್ರಮಗಳ ಬಗ್ಗೆ ಎಚ್ಚರ ವಹಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.

ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯವಿದ್ದರೆ ಕೋವಿಡ್‌ ಸಂದರ್ಭದಲ್ಲಿ ಅನುಸರಿಸಲಾದ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು. ಅಲ್ಲದೇ ಸೋಂಕಿನ ಲಕ್ಷಣಗಳು ಮತ್ತು ತೀವ್ರ ಉಸಿರಾಟದ ಸಮಸ್ಯೆಗಳು ಹೊಂದಿರುವವರ ಮೇಲೆ ತೀವ್ರ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಯೋಜನೆ ಅಡಿಯಲ್ಲಿ ಹದಿಹರೆಯದವರು ಮತ್ತು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಜೊತೆಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಇತರೇ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಐಎಲ್‌ಐ ಮತ್ತು ಸಾರಿ ಪ್ರಕರಣಗಳು ಪತ್ತೆಯಾದಲ್ಲಿ, ಅಂತಹ ಪ್ರಕರಣಗಳ ಮಾಹಿತಿಯನ್ನ ಐಡಿಎಸ್‌ಪಿ-ಐಹೆಚ್‌ಐಪಿ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಅಲ್ಲದೇ ಗಂಟಲು ದ್ರವ ಮತ್ತು ಸಾರಿ ಪ್ರಕರಣಗಳ ಪರೀಕ್ಷೆ ಕೈಗೊಳ್ಳಬೇಕು. ಅದರಲ್ಲೂ ಮಕ್ಕಳ ಮಾದರಿ ಪರೀಕ್ಷೆ ಮಾಡಿ ಮಾದರಿಗಳನ್ನು ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳಿಗೆ ಕಳುಹಿಸಬೇಕು ಎಂದು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

ಚೀನಾದಲ್ಲಿ ಮಕ್ಕಳು ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ. ನ್ಯೂಮೋನಿಯಾ ಮಾದರಿಯ ಲಕ್ಷಣಗಳುಳ್ಳ ಈ ವೈರಸ್‌ ನೇರವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರಲಿದ್ದು, ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಚೀನಾದಲ್ಲಿ ಈಗಾಗಲೇ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಲ್ಲಿ ಹಾಸಿಗೆಗಳೂ ಫುಲ್‌ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕೇಂದ್ರ ನಿಗಾ ವಹಿಸಿದೆ.

Shwetha M