ನನ್ನ ತಾಯಿಯನ್ನೂ ಬಿಡದಂತೆ ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ಅವಮಾನಿಸಿದ್ದಾರೆ – ನರೇಂದ್ರ ಮೋದಿ

ನನ್ನ ತಾಯಿಯನ್ನೂ ಬಿಡದಂತೆ ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ಅವಮಾನಿಸಿದ್ದಾರೆ – ನರೇಂದ್ರ ಮೋದಿ

ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ. ನಿಧನರಾಗಿರುವ ನನ್ನ ತಾಯಿಯನ್ನೂ ಬಿಡದಂತೆ ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ಅವಮಾನಿಸಿದ್ದಾರೆ ಎಂದು ಪ್ರಧಾನಿ ಮೋದಿ ತೀವ್ರ ವಿಷಾದವನ್ನು ವ್ಯಕ್ತ ಪಡಿಸಿದ್ದಾರೆ. ನನ್ನ ತಾಯಿಯನ್ನು ಅವಮಾನಿಸುವ ಮೂಲಕ ಸಮಸ್ತ ತಾಯಿಯಂದಿರಿಗೆ ಅವಮಾನ ಮಾಡಿದ್ದಾರೆ ಎಂದು ಮೋದಿ ವಿಷಾದ ವ್ಯಕ್ತ ಪಡಿಸಿದ್ದಾರೆ.

ಇತ್ತೀಚೆಗೆ ಬಿಹಾರದಲ್ಲಿ ನಡೆದ ಕಾಂಗ್ರೆಸ್ ಮತ್ತು ಆರ್‌ಜೆಡಿ ಜಂಟಿಯಾಗಿ ನಡೆಸಿದ ವೋಟರ್ ಅಧಿಕಾರ್ ಯಾತ್ರೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ,  ನಿಧನರಾಗಿರುವ ಹೀರಾಬೆನ್ ಮೋದಿಯನ್ನು ನಿಂದಿಸಿರುವ ಘಟನೆ ನಡೆದಿದೆ. ಈ ಬಗ್ಗೆ, ಖುದ್ದು ಪ್ರಧಾನಿಗಳೇ ಮಾಹಿತಿಯನ್ನು ನೀಡಿದ್ದಾರೆ. ನನ್ನ ತಾಯಿಯನ್ನು ನಿಂದಿಸುವ ಮೂಲಕ, ದೇಶದ ಪ್ರತಿಯೊಬ್ಬ ತಾಯಿ, ಸಹೋದರಿಯರನ್ನು ನಿಂದಿಸಿದಂತಾಗಿದೆ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ವಿರೋಧ ಪಕ್ಷದ ಮೈಂಡ್ ಸೆಟ್, ಯಾವರೀತಿ ಇದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದು ಮೋದಿ ವಿಷಾದ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ – ಅಪ್ಪನ ಪಕ್ಷದಿಂದ ಎಂಎಲ್‌ಸಿ ಕವಿತಾ ಹೊರಕ್ಕೆ

ಈ ಸಂಬಂಧ ಒಬ್ಬರನ್ನು ದರ್ಬಾಂಗ್ ಪೋಲಿಸರು ಬಂಧಿಸಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಯಾದವ್ ನೇತೃತ್ವದಲ್ಲಿ ನಡೆದ ರ‍್ಯಾಲಿಯಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಮೈತ್ರಿಕೂಟದ ಸದಸ್ಯ ಪಕ್ಷಗಳು, ಕಾಂಗ್ರೆಸ್ ಮತ್ತು ಆರ್‌ಜೆಡಿ ವಿರುದ್ದ ಮುಗಿಬಿದ್ದಿದ್ದು, ರಾಹುಲ್ ಗಾಂಧಿಯವರು ರಾಜಮನೆತನದಲ್ಲಿ ಹುಟ್ಟಿದ್ದರಿಂದ, ಬಡ ತಾಯಿಯ ಕಷ್ಟ ಅವರಿಗೆಲ್ಲಿ ಅರಿವಾಗುತ್ತದೆ ಎಂದು ಟೀಕಿಸಿವೆ. ನರೇಂದ್ರ ಮೋದಿಯವರ ತಾಯಿ ಹೀರಾಬೆನ್, ಡಿಸೆಂಬರ್ 30, 2022ರಲ್ಲಿ ನಿಧನರಾಗಿದ್ದರು, ಅವರಿಗೆ 99 ವರ್ಷ ವಯಸ್ಸಾಗಿತ್ತು.

ವಿರೋಧ ಪಕ್ಷಗಳು ಪ್ರತಿಭಟನೆಯನ್ನು ನಡೆಸಲಿ, ಹೋರಾಟವನ್ನು ಮಾಡಲಿ, ನನ್ನ ಅಥವಾ ನಮ್ಮ ಮೈತ್ರಿಕೂಟದ ವಿರುದ್ದ ವಾಗ್ದಾಳಿ ನಡೆಸಲಿ, ಅದು ಅವರ ಹಕ್ಕು. ಆದರೆ, ನನ್ನ ತಾಯಿಯನ್ನು ನಿಂದಿಸುವ ಹಕ್ಕು ಅವರಿಗೆ ನೀಡಿದ್ದು ಯಾರು? ನಾನು ನಿಮ್ಮನ್ನು ಕ್ಷಮಿಸಿದರೂ, ಬಿಹಾರದ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ನನ್ನ ತಾಯಿ ನನ್ನ ಜಗತ್ತು, ನನ್ನ ಆತ್ಮ ಗೌರವ. ಇಂತಹ ಘಟನೆ ಬಿಹಾರದಲ್ಲಿ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ. ನೀವು ನನ್ನ ತಾಯಿಯನ್ನು ಮಾತ್ರ ನಿಂದಿಸಿಲ್ಲ, ನೀವು ಭಾರತ ಮಾತೆಯನ್ನು ನಿಂದಿಸಿದ್ದೀರಿ, ಸಮಸ್ತ ಮಹಿಳೆಯರಿಗೆ ಮಾಡಿದ ಅವಮಾನವಿದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಧ್ವಜವನ್ನು ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬ ವೋಟರ್ ಅಧಿಕಾರ್ ಯಾತ್ರೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಅವಾಚ್ಯ ಶಬ್ದವನ್ನು ಬಳಸಿದ್ದ. ಇದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಕೂಡಲೇ, ಬಿಹಾರ ಪೊಲೀಸರು ಆತನನ್ನು ಹೆಡೆಮುರಿ ಕಟ್ಟಿದ್ದರು.

ಆರ್‌ಜೆಡಿ ಸರ್ಕಾರವನ್ನು ಕಿತ್ತೊಗೆದಿದ್ದಕ್ಕೆ ಮಹಿಳೆಯರ ಮೇಲೆ ಸೇಡು ತೀರಿಸಿಕೊಳ್ಳಲು ಆ ಪಾರ್ಟಿಯ ನಾಯಕರು/ ಕಾರ್ಯಕರ್ತರು ಮುಂದಾಗಿದ್ದಾರೆ. ಇದನ್ನು ಕೇಳಿದ ನಂತರ, ನನಗೆಷ್ಟು ನೋವಾಗುತ್ತದೋ, ಅಷ್ಟೇ ನೋವು, ಬಿಹಾರದ ಮಹಿಳೆಯರಿಗೆ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಹಾರ ರಾಜ್ಯ ಜೀವಿಕಾ ನಿಧಿ ಸಾಖ್ ಸಹಕಾರಿ ಸಂಘವನ್ನು ಉದ್ಘಾಟಿಸಿದ ವೇಳೆ ಪ್ರಧಾನಿ ಮೋದಿ, ತಾಯಿಯನ್ನು ನಿಂದಿಸಿದ ವಿಷಯವನ್ನು ಪ್ರಸ್ತಾವಿಸಿದ್ದಾರೆ. ಈ ಸಂಘ, ಬಿಹಾರದ ಮಹಿಳೆಯರಿಗೆ ಸುಲಭ ರೀತಿಯಲ್ಲಿ ಸಾಲವನ್ನು ನೀಡುವ ಸಂಘವಾಗಿದೆ.

Kishor KV