ಪ. ಬಂಗಾಳದಲ್ಲಿ ಬಿಜೆಪಿ ನಾಯಕರ ಮೇಲೆ ಅಟ್ಯಾಕ್ – ಮಮತಾ ವಿರುದ್ಧ ಮೋದಿ ಗರಂ

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ಪೀಡಿತ ಜನರನ್ನು ಭೇಟಿಯಾಗಲು ತೆರಳಿದ್ದ ಬಿಜೆಪಿ ಸಂಸದ ಖಗೇನ್ ಮುರ್ಮು ಮತ್ತು ಪಕ್ಷದ ಶಾಸಕ ಶಂಕರ್ ಘೋಷ್ ಅವರ ಮೇಲಿನ ಹಲ್ಲೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯಗಳ ಕುರಿತು ಪ್ರಧಾನಿ ಆಡಳಿತಾರೂಢ ಟಿಎಂಸಿಯನ್ನು ಟೀಕಿಸಿದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೈಸರ್ಗಿಕ ವಿಕೋಪವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು. ಪಶ್ಚಿಮ ಬಂಗಾಳದ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಲೇ ಇದ್ದು, ವರುಣನ ಆರ್ಭಟದಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ. ಇದಲ್ಲದೆ, ಅತಿಯಾದ ಮಳೆಯಿಂದಾಗಿ, ಕಬ್ಬಿಣದ ಸೇತುವೆ ಕೂಡ ಕುಸಿದಿದೆ.
ಇದನ್ನೂ ಓದಿ: ತನ್ನದೇ ಯುದ್ಧ ವಿಮಾನಗಳ ಅವಶೇಷಗಳಡಿ ಭಾರತವನ್ನು ಹೂತುಹಾಕುತ್ತೇವೆ- ಭಾರತದ ವಿರುದ್ಧ ನಾಲಿಗೆ ಹರಿಬಿಟ್ಟ ಪಾಕ್
ಜಲ್ಪೈಗುರಿ ಜಿಲ್ಲೆಯ ನಾಗರಕಟದಲ್ಲಿ ಸೋಮವಾರ ಗುಂಪೊಂದು ದಾಳಿ ನಡೆಸಿದ್ದು, ಬಿಜೆಪಿ ಸಂಸದ ಖಗೇನ್ ಮುರ್ಮು ಮತ್ತು ಪಕ್ಷದ ಶಾಸಕ ಶಂಕರ್ ಘೋಷ್ ಗಾಯಗೊಂಡಿದ್ದಾರೆ. ಮಾಲ್ಡಾ ಉತ್ತರದ ಲೋಕಸಭಾ ಸಂಸದ ಮುರ್ಮು ಗಂಭೀರ ಗಾಯಗೊಂಡಿದ್ದು, ಸಿಲಿಗುರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ಮೋದಿ ಈ ದಾಳಿಯನ್ನು ಖಂಡಿಸಿದ್ದು, ರಾಜಕೀಯ ಸಂಘರ್ಷಕ್ಕಿಂತ ಪರಿಹಾರ ಕಾರ್ಯಗಳಿಗೆ ಆದ್ಯತೆ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. “ಪ್ರವಾಹ ಮತ್ತು ಭೂಕುಸಿತದಿಂದ ಪೀಡಿತ ಜನರಿಗೆ ಸೇವೆ ಸಲ್ಲಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದಲ್ಲಿ ಹಾಲಿ ಸಂಸದ ಮತ್ತು ಶಾಸಕ ಸೇರಿದಂತೆ ನಮ್ಮ ಪಕ್ಷದ ಸಹೋದ್ಯೋಗಿಗಳ ಮೇಲೆ ದಾಳಿ ಮಾಡಿದ ರೀತಿ ಸಂಪೂರ್ಣವಾಗಿ ಭಯಾನಕವಾಗಿದೆ. ಇದು ಟಿಎಂಸಿಯ ಅಸಂವೇದನಾಶೀಲತೆಯನ್ನು ಹಾಗೂ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ದಯನೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ” ಎಂದು ಮೋದಿ ಎಕ್ಸ್ನಲ್ಲಿ ಬರೆದಿದ್ದಾರೆ.
ಉತ್ತರ ಬಂಗಾಳದಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿರುವ ಬ್ಯಾನರ್ಜಿ, ಉತ್ತರ ಬಂಗಾಳದ ಜನರು ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತದ ಪರಿಣಾಮಗಳನ್ನು ಎದುರಿಸುತ್ತಿರುವಾಗ, ಭಾರತದ ಪ್ರಧಾನ ಮಂತ್ರಿಗಳು ಸೂಕ್ತ ತನಿಖೆಗಾಗಿ ಕಾಯದೆ ನೈಸರ್ಗಿಕ ವಿಕೋಪವನ್ನು ರಾಜಕೀಯಗೊಳಿಸಲು ಆಯ್ಕೆ ಮಾಡಿಕೊಂಡಿರುವುದು ದುರದೃಷ್ಟಕರ ಮತ್ತು ತೀವ್ರ ಕಳವಳಕಾರಿ” ಎಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿಯವರು ಯಾವುದೇ ದೃಢೀಕೃತ ಪುರಾವೆಗಳು, ಕಾನೂನು ತನಿಖೆ ಅಥವಾ ಆಡಳಿತಾತ್ಮಕ ವರದಿಯಿಲ್ಲದೆ ಟಿಎಂಸಿ ಮತ್ತು ಪಶ್ಚಿಮ ಬಂಗಾಳ ಸರ್ಕಾರವನ್ನು ಸಂಪೂರ್ಣವಾಗಿ ದೂಷಿಸಿದ್ದಾರೆ. ಇದು ಕೇವಲ ರಾಜಕೀಯ ಕೀಳುಮಟ್ಟದ್ದಲ್ಲ, ಪ್ರಧಾನಿಯವರು ಎತ್ತಿಹಿಡಿಯಲು ಪ್ರಮಾಣ ಮಾಡಿದ ಸಾಂವಿಧಾನಿಕ ನೀತಿಯ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದರು.

ನೋಡಿರಿ

