ವಿಮಾನ ಹತ್ತದೆ ವಿದೇಶದಲ್ಲೇ ಉಳಿದುಕೊಂಡ ಪ್ರಜ್ವಲ್ ರೇವಣ್ಣ! – ಎಸ್​ಐಟಿ ಅಧಿಕಾರಿಗಳ ನಡೆ ಏನು.?

ವಿಮಾನ ಹತ್ತದೆ ವಿದೇಶದಲ್ಲೇ ಉಳಿದುಕೊಂಡ ಪ್ರಜ್ವಲ್ ರೇವಣ್ಣ! – ಎಸ್​ಐಟಿ ಅಧಿಕಾರಿಗಳ ನಡೆ ಏನು.?

ಹಾಸನ ಪೆನ್‌ಡ್ರೈವ್‌ ಕೇಸ್‌ನ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಬುಧವಾರ ತಡರಾತ್ರಿ ಬೆಂಗಳೂರಿಗೆ ವಾಪಸ್‌ ಬರುತ್ತಿದ್ದಾರೆ ಅಂತಾ ಹೇಳಲಾಗುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಪಜ್ವಲ್​ ಫ್ಲೈಟ್​ ಟಿಕೆಟ್​ ಸಹ ಬುಕ್ ಮಾಡಿದ್ದರು. ಪ್ರಜ್ವಲ್‌ ರೇವಣ್ಣ ಬರುತ್ತಾರೆ ಅಂತಾ ಎಸ್‌ಐಟಿ ಅಧಿಕಾರಿಗಳು ಕೂಡ ಕಾದಿದ್ದೇ ಬಂತು. ಆದ್ರೆ ಪ್ರಜ್ವಲ್‌ ರೇವಣ್ಣ ಫ್ಲೈಟ್‌ ಹತ್ತದೇ ಜರ್ಮನಿಯಲ್ಲೇ ಉಳಿದಿದ್ದಾರೆ. ಈ ಮೂಲಕ ವಿದೇಶದಲ್ಲಿ ಇದ್ದುಕೊಂಡೇ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ.

ಇದನ್ನೂ ಓದಿ: ನಾನೇನೂ ತಪ್ಪು ಮಾಡಿಲ್ಲ.. ಷಡ್ಯಂತ್ರದ ಬಗ್ಗೆ ಮಾತನಾಡಲ್ಲ – ಕಾನೂನು ಹೋರಾಟದ ಜೊತೆಗೆ ರೇವಣ್ಣ ಟೆಂಪಲ್ ರನ್

ಪ್ರಜ್ವಲ್ ರೇವಣ್ಣ ಜರ್ಮನ್ ಕಾಲಮಾನದ ಪ್ರಕಾರ ಮೇ 15 ರಂದು 12.20ರ ವಿಮಾನದ ಟಿಕೆಟ್​ ಬುಕ್ ಮಾಡಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಪ್ರಜ್ವಲ್‌ ರೇವಣ್ಣ ಯಾವುದೇ ಕ್ಷಣದಲ್ಲಾದರೂ ಭಾರತಕ್ಕೆ ಬರಬಹುದು ಅಂತಾ ಎಸ್​ಐಟಿ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ. ಆದ್ರೆ ಪ್ರಜ್ವಲ್​ ಕೊನೆ ಕ್ಷಣದಲ್ಲಿ ವಿಮಾನ ಹತ್ತದೇ ಮತ್ತೊಮ್ಮೆ ಬೆಂಗಳೂರು ಪ್ರಯಾಣವನ್ನು ರದ್ದು ಮಾಡಿದ್ದಾರೆ. ಪ್ರಜ್ವಲ್ ಬುಕ್ ಮಾಡಿದ್ದ ವಿಮಾನ ಈಗಾಗಲೇ ಜರ್ಮಿನಿಂದ ಟೇಕಾಫ್ ಆಗಿದೆ. ಆದ್ರೆ, ಪ್ರಜ್ವಲ್ ವಿಮಾನದಲ್ಲಿ ಬೋರ್ಡಿಂಗ್ ಆಗದೆ ಅಲ್ಲೇ ಉಳಿದುಕೊಂಡಿದ್ದಾರೆ. ಪ್ಯಾಸೆಂಜರ್ ಲಿಸ್ಟ್​ನಲ್ಲಿ ಪ್ರಜ್ವಲ್​ ರೇವಣ್ಣ ಅವರ ಹೆಸರು ಸಹ ಇಲ್ಲ ಎಂದು ತಿಳಿದುಬಂದಿದೆ.

ಪ್ರಜ್ವಲ್​ ರೇವಣ್ಣ ಈಗಾಗಲೇ ಒಂದು ಸಲ ಟಿಕೆಟ್​ ಬುಕ್ ಮಾಡಿ ವಿಮಾನ ಹತ್ತದೇ ಅಲ್ಲೇ ಉಳಿದುಕೊಂಡಿದ್ದರು. ಇದೀಗ ಮತ್ತೊಮ್ಮೆ ಟಿಕೆಟ್​ ಬುಕ್ ಮಾಡಿದರೂ ಪ್ರಯಾಣ ಮಾಡದ ಜರ್ಮನಿಯಲ್ಲೇ ಉಳಿದುಕೊಂಡಿದ್ದಾರೆ.

ಇನ್ನು ಪ್ರಜ್ವಲ್​ ವಿದೇಶದ ಕುಳಿತುಕೊಂಡೇ ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದ್ದು, ವಕೀಲರು ನೀಡುತ್ತಿರುವ ಸಲಹೆ ಸೂಚನೆಗಳನ್ನು ಪ್ರಜ್ವಲ್ ಪಾಲನೆ ಮಾಡುತ್ತಿದ್ದಾರೆ. ವಕೀಲರು ಯಾವಾಗ ಬರಲು ಹೇಳುತ್ತಾರೋ ಅಂದು ಪ್ರಜ್ವಲ್​​ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ಪ್ರಜ್ವಲ್‌ ಕಣ್ಣಾಮುಚ್ಚಾಲೆ ಆಟದಿಂದಾಗಿ ಇತ್ತ ದಾರಿ ಕಾಯುತ್ತಿರುವ ಎಸ್​ಐಟಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪದೇ ಪದೇ ಟಿಕೆಟ್​ ಬುಕ್ ಮಾಡಿ ಕೊನೆ ಕ್ಷಣದಲ್ಲಿ ರದ್ದು ಮಾಡುತ್ತಿರುವುದರಿಂದ ಮುಂದೆ ಏನು ಮಾಡಬೇಕು ಎಂದು ಎಸ್​ಐಟಿ ಅಧಿಕಾರಿಗಳು ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ.

Shwetha M