ಪೀಣ್ಯ ಮೇಲ್ಸೇತುವೆ ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್ – ಏಪ್ರಿಲ್‌ವರೆಗೂ ಮೇಲ್ಸೇತುವೆಗೆ ನೋ ಎಂಟ್ರಿ..!

ಪೀಣ್ಯ ಮೇಲ್ಸೇತುವೆ ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್ – ಏಪ್ರಿಲ್‌ವರೆಗೂ ಮೇಲ್ಸೇತುವೆಗೆ ನೋ ಎಂಟ್ರಿ..!

ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ಮೇಲೆ ಸದ್ಯಕ್ಕಂತೂ ಭಾರೀ ವಾಹನಗಳು ಓಡಾಡುವಂತಿಲ್ಲ. ಮುಂದಿನ ಜನವರಿಗಾದರೂ ಅವಕಾಶ ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಭಾರೀ ವಾಹನಗಳು ಮೇಲ್ಸೇತುವೆ ಮೇಲೆ ಓಡಾಡಲು ಏಪ್ರಿಲ್ ವರೆಗೆ ಕಾಯಲೇಬೇಕು. ಮುಂದಿನ ವರ್ಷ ಏಪ್ರಿಲ್ ಹೊತ್ತಿಗೆ ಕಾಮಗಾರಿ ಮುಗಿಯಲಿದೆ. ಬಳಿಕ ಫ್ಲೈಓವರ್ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ದೊರೆಯಲಿದೆ.

ಇದನ್ನೂ ಓದಿ: ಕನ್ನಡಕ್ಕಾಗಿ ದುಡಿದ ಜಾನ್ ಫೇಥ್‌ಫುಲ್ ಫ್ಲೀಟ್ – ಚಿರಕಾಲ ಕನ್ನಡಿಗರ ಮನದಲ್ಲಿ ಉಳಿದ ಬ್ರಿಟಿಷ್ ಅಧಿಕಾರಿ

ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿದ್ದ ಪೀಣ್ಯ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ಸದ್ಯಕ್ಕೆ ಸಾಧ್ಯವೇ ಇಲ್ಲ. ಮುಂದಿನ ಹೊಸ ವರ್ಷ ಅಂದರೆ  2024 ಜನವರಿಯಲ್ಲಿ ಪೀಣ್ಯ ಫ್ಲೈಓವರ್ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ದೊರೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಎಲ್ಲಾ ಕೇಬಲ್‌ಗಳ ಅಳವಡಿಕೆ ಪ್ರಕ್ರಿಯೆ ಮುಂದುವರೆದಿದೆ. ಹೀಗಾಗಿ 2024 ಏಪ್ರಿಲ್‌ನಲ್ಲಿ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ತಿಳಿದುಬಂದಿದೆ. ಈಗಿರುವ 1,243 ಕೇಬಲ್‌ಗಳನ್ನು ಬದಲಾಯಿಸಲು ನಿರ್ಧರಿಸಲಾಗಿದ್ದು, 2023ರ ಜನವರಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 38.5 ಕೋಟಿ ರೂ. ದುರಸ್ತಿ ಕಾರ್ಯಕ್ಕಾಗಿ ಟೆಂಡರ್ ನೀಡಿತ್ತು.  ಕರ್ನಾಟಕ ವಿಧಾನಸಭಾ ಚುನಾವಣೆಯ ಕಾರಣ ಜುಲೈನಲ್ಲಿ ಕೆಲಸ ಪ್ರಾರಂಭವಾಗಿದೆ. ಗುತ್ತಿಗೆದಾರರಿಗೆ ಮೇ 2024ರ ಗಡುವು ನೀಡಲಾಗಿದ್ದು, ಏಪ್ರಿಲ್ ವೇಳೆಗೆ ಬಹುತೇಕ ಕಾಮಗಾರಿ ಪೂರ್ಣಗೊಳ್ಳಲಿದೆ. ಇದಾದ ಬಳಿಕ ಭಾರೀ ವಾಹನಗಳು ಸೇರಿ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೂ ಅವಕಾಶ ಸಿಗಲಿದೆ ಎಂದು ಬೆಂಗಳೂರು ಎನ್ಎಚ್ಎಐ ಯೋಜನಾ ನಿರ್ದೇಶಕ ಕೆಬಿ ಜಯಕುಮಾರ್ ಹೇಳಿದ್ದಾರೆ.

ಪೀಣ್ಯ ಭಾಗದಲ್ಲಿ ಬರುವ ಈ ಮೇಲ್ಸೇತುವೆ ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯದಿಂದ ಪಾರ್ಲೆಜಿ ಫ್ಯಾಕ್ಟರಿವರೆಗೂ 5ಕಿ.ಮೀ. ಉದ್ದವಿದ್ದು, ಇದು ರಾಜ್ಯದ 20ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಅಷ್ಟೇ ಅಲ್ಲ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದೆ. 8ನೇ ಮೈಲಿ ಜಂಕ್ಷನ್ ಸಮೀಪ 102 ಮತ್ತು 103ನೇ ಪಿಲ್ಲರ್ ನಡುವಿನ 5 ಕೇಬಲ್ ಬಾಗಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ 2021 ಡಿಸಿಎಂಬರ್ 25ರಂದು ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ) ನಿಷೇಧಿಸಿತ್ತು. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ತಜ್ಞರು ಪರಿಶೀಲನೆ ನಡೆಸಿ ಹೆಚ್ಚು ಟೈರ್ ಹೊಂದಿರುವ ಭಾರೀ ವಾಹನಗಳು (ಮಲ್ಟಿ ವ್ಹೀಲ್ ವೆಹಿಕಲ್ಸ್) ಸಂಚರಿಸಿದ್ದರಿಂದ ಕೇಬಲ್ಗಳು ಬಾಗಿವೆ ಎಂದು ವರದಿ ನೀಡಿದ್ದರು. ಬಳಿಕ 2022ರ ಫೆಬ್ರವರಿ 26ರಿಂದ ಲಘು ವಾಹಗಳಿಗೆ ಮಾತ್ರ ಮೇಲ್ಸೇತುವೆ ಮೇಲೆ ಸಂಚರಿಸಲು ಅವಕಾಶ ನೀಡಲಾಗಿತ್ತು. ಬಳಿಕ ಐಐಎಸ್ಸಿಯ ತಜ್ಞ ಡಾ.ಚಂದ್ರ ಕಿಶನ್ ನೇತೃತ್ವದ ತಂಡವು, ಮೇಲ್ಸೇತುವೆಯ ಕ್ಷಮತೆ ಬಗ್ಗೆ ಲೋಡ್ ಟೆಸ್ಟ್, ಕೆಮಿಕಲ್ ಅನಾಲಿಸಿಸ್ ಸೇರಿ ಹಲವು ಪರೀಕ್ಷೆಗಳನ್ನು ನಡೆಸಿ ಎನ್ಎಚ್ ಎಐಗೆ ಮಧ್ಯಂತರ ವರದಿ ನೀಡಿತ್ತು.

Sulekha