ಈ ಗ್ರಾಮದಲ್ಲಿ ಲವ್‌ ಮ್ಯಾರೇಜ್‌ ಬ್ಯಾನ್!‌ – ಸರ್ಕಾರಕ್ಕೆ ಮನವಿ ಸಲ್ಲಿಸಿದ ಗ್ರಾಮಸ್ಥರು!

ಈ ಗ್ರಾಮದಲ್ಲಿ ಲವ್‌ ಮ್ಯಾರೇಜ್‌ ಬ್ಯಾನ್!‌ – ಸರ್ಕಾರಕ್ಕೆ ಮನವಿ ಸಲ್ಲಿಸಿದ ಗ್ರಾಮಸ್ಥರು!

ಲವ್ ಮ್ಯಾರೇಜ್ ಅನ್ನುವುದು ಇತ್ತೀಚಿನ ದಿನಗಳಲ್ಲಿ ಅಚ್ಚರಿಯ ಸಂಗತಿಯಾಗಿ ಉಳಿದಿಲ್ಲ. ಯುವಕ, ಯುವತಿಯರು ತಮಗೆ ಸರಿಹೊಂದುವ ಸಂಗಾತಿಯನ್ನು ತಾವೇ ಆಯ್ಕೆ ಮಾಡುತ್ತಾರೆ. ಪ್ರೀತಿಯಲ್ಲಿ ಬಿದ್ದ ಮೇಲೆ ಎಂತಹ ಸಂಕಷ್ಟ ಬಂದರೂ, ಎಷ್ಟೇ ವಿರೋಧ ಬಂದರೂ ಮದುವೆಯಾಗುತ್ತಾರೆ. ಕುಟುಂಬಸ್ಥರೂ ಒಪ್ಪುತ್ತಾರೆ, ಸಮಾಜವೂ ಇದನ್ನು ಸಹಜವೆಂಬಂತೆ ಸ್ವೀಕರಿಸುತ್ತಿದೆ. ಆದರೆ ಇಲ್ಲೊಂದು ಗ್ರಾಮ ಪಂಚಾಯತಿ ಒಂದು ಅಚ್ಚರಿಯ ನಿರ್ಧಾರ ಕೈಗೊಂಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿನ ಪ್ರೇಮ ವಿವಾಹಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಹೆತ್ತು ಹೊತ್ತು ಸಲುಹಿದ ಪೋಷಕರನ್ನು ಕಡೆಗಣಿಸಿ ಪ್ರೇಮ ವಿವಾಹ ಮಾಡಿಕೊಳ್ಳುತ್ತಿರುವ ಯುವಕ-ಯುವತಿಯರು ಮುಂದಿನ ಕೇಲ‌ ದಿನಗಳಲ್ಲಯೇ ಹೊಂದಾಣಿಕೆ ಇಲ್ಲದೆ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕಲಬುರಗಿ ಜಿಲ್ಲೆಯ ಡೊಂಗರಗಾಂವ ಗ್ರಾಮ ಪಂಚಾಯಿತಿ ಪ್ರೇಮ ವಿವಾಹಕ್ಕೆ ಬ್ರೇಕ್‌ ಹಾಕಲು ಮುಂದಾಗಿದೆ. ಇನ್ನುಮುಂದೆ ಪ್ರೇಮಿಗಳು ಹೆತ್ತವರ ಒಪ್ಪಿಗೆ ಇದ್ದರೆ ಮಾತ್ರ ವಿವಾಹವಾಗಬೇಕು. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಡೊಂಗರಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತಕುಮಾರ ಕೆ ಮೂಲಗೆ ಹಾಗೂ ಸದಸ್ಯರು ಗ್ರಾಮ ಪಂಚಾಯತ್‌ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ಇಂದಿನಿಂದ ಟಿಕೆಟ್‌ ಮಾರಾಟ – ಟಿಕೆಟ್ ದರ ಭಾರಿ ಏರಿಕೆ

ಅಪ್ರಾಪ್ತ ವಯಸ್ಸಿನಲ್ಲಿ ಅಥವಾ ಯವೌನದಲ್ಲಿ ಆತುರಕ್ಕೆ ಬಿದ್ದು ಏನು ತಿಳಿಯದೆ ಪ್ರೇಮ ವಿವಾಹ ಆಗೋದರಿಂದ ಎರಡು ಕುಟುಂಬಗಳ ನಡುವೆ ಕಲಹ ಉಂಟಾಗಿ ಗಲಾಟೆಯಾಗುತ್ತಿವೆ. ಅಲ್ಲದೆ ಮದುವೆ ಮಾಡಿಕೊಂಡವರಲ್ಲಿ ಬಹುತೇಕರು ಮುಂದಿನ ಕೆಲ ದಿನಗಳಲ್ಲಿಯೇ ಹೊಂದಾಣಿಕೆ ಆಗದೆ ಜೀವನದ ದಿಕ್ಕೂ ತಪ್ಪುತ್ತಿದ್ದಾರೆ. ಹೀಗಾಗಿ ಇಂತಹದೊಂದು ನಿಷೇಧದ ಪ್ರಯತ್ನ ಮಾಡುತ್ತಿರುವುದಾಗಿ ಗ್ರಾಮ‌ ಪಂಚಾಯ್ತಿ ಅಧ್ಯಕ್ಷ ಶಾಂತಕುಮಾರ ಮೂಲಗೆ ತಿಳಿಸಿದ್ದಾರೆ.

ಒಂದು ವರ್ಷದಲ್ಲಿ 15 ಪ್ರೇಮ ವಿವಾಹ

ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಒಟ್ಟು ಹದಿನೈದು ಪ್ರೇಮ ವಿವಾಹಗಳು ನಡೆದಿವೆಯಂತೆ. ಅನೇಕರು ಹೆತ್ತವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದಾರಂತೆ. ಡೋಂಗರಗಾವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಡೋಂಗರಗಾವ್, ಕಾಳಮಂದರಗಿ ಸೇರಿದಂತೆ ನಾಲ್ಕು ತಾಂಡಾಗಳ ವ್ಯಾಪ್ತಿ ಹೊಂದಿದ್ದು, ಡೊಂಗರಗಾವ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹದಿನೆಂಟು ಗ್ರಾಮ ಪಂಚಾಯ್ತಿ ಸದಸ್ಯರು ಬರುತ್ತಾರೆ.

ಒಟ್ಟಿನಲ್ಲಿ ಪ್ರೇಮ ವಿವಾಹದಿಂದ ಯುವಕ ಯುವತಿಯರು ತಮ್ಮ ಜೀವನ ಬಲಿಯಾಗಿಸುವುದನ್ನು ತಪ್ಪಿಸಲು ಡೊಂಗರಗಾಂವ ಇಂತಹದೊಂದು ನಿರ್ಧಾರ ಕೈಗೊಂಡಿದ್ದು ಗ್ರಾಮಸ್ಥರ ಈ ನಿರ್ಧಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಗ್ರಾಮ ಪಂಚಾಯ್ತಿಯಲ್ಲಿ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಬಹಿರಂಗವಾಗಿ ಯಾರೂ ವಿರೋಧ ವ್ಯಕ್ತಪಡಿಸಿಲ್ಲವಾದರೂ ಕೆಲವರಿಗೆ ಈ ಬಗ್ಗೆ ಅಸಮಾಧಾನ ಇದೆ ಎಂದು ತಿಳಿದು ಬಂದಿದೆ.

Shwetha M